

ಚೆನ್ನೈ: ತಮಿಳು ನಾಡು ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಸ್ಥಾನ ಹಂಚಿಕೆ ಕುರಿತು ಅಸ್ಥಿರತೆ ಮುಂದುವರಿದಿರುವ ಸಂದರ್ಭದಲ್ಲಿ, ಆಡಳಿತಾರೂಢ ಡಿಎಂಕೆ ಪಕ್ಷವು, ಅಂತಿಮ ನಿರ್ಧಾರವನ್ನು ಇಂದು ಸಂಜೆಯೊಳಗೆ ತಿಳಿಸುವಂತೆ ಗಡುವು ವಿಧಿಸಿದೆ ಎಂದು ತಿಳಿದುಬಂದಿದೆ.
ಡಿಎಂಕೆ ಕಾಂಗ್ರೆಸ್ ಗೆ 25–28 ಸ್ಥಾನಗಳ ಜೊತೆಗೆ ಒಂದು ರಾಜ್ಯಸಭಾ ಸ್ಥಾನ ನೀಡಲು ಸಿದ್ಧವಾಗಿದೆ. ಆದರೆ ಕಾಂಗ್ರೆಸ್ ಕನಿಷ್ಠ 34 ಸ್ಥಾನಗಳಿಗಿಂತ ಕಡಿಮೆ ಒಪ್ಪಿಕೊಳ್ಳಲು ಸಿದ್ಧವಾಗಿಲ್ಲದಿರುವುದು ಡಿಎಂಕೆಗೆ ಸಮಸ್ಯೆಯಾಗಿದೆ.
ಈ ಬೆಳವಣಿಗೆ ಬಗ್ಗೆ ತಿಳಿದ ಮೂಲಗಳು TNIEಗೆ(The New Indian Express) ತಿಳಿಸಿದಂತೆ, ರಾಜ್ಯಸಭಾ ಸ್ಥಾನಗಳು ಮತ್ತು ಅಭ್ಯರ್ಥಿಗಳನ್ನು ಅಂತಿಮಗೊಳಿಸಬೇಕಿರುವುದರಿಂದ ಇಂದು ಸಂಜೆಯೊಳಗೆ ನಿರ್ಧಾರ ಕೈಗೊಳ್ಳುವಂತೆ ಡಿಎಂಕೆ ಕಾಂಗ್ರೆಸ್ ಹೈಕಮಾಂಡ್ಗೆ ತಿಳಿಸಿದೆ. ದ್ವೈವಾರ್ಷಿಕ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ ಮಾರ್ಚ್ 5 ಆಗಿದೆ.
ಮೊನ್ನೆ ಭಾನುವಾರ ರಾತ್ರಿ, ತಮಿಳುನಾಡಿನ ಕಾಂಗ್ರೆಸ್ ಶಾಸಕರೊಂದಿಗೆ ಪಕ್ಷದ ಹೈಕಮಾಂಡ್ ದೂರವಾಣಿ ಮೂಲಕ ಮಾತುಕತೆ ನಡೆಸಿ, ಮೈತ್ರಿ ಹಾಗೂ ಡಿಎಂಕೆಯೊಂದಿಗೆ ನಡೆಯುತ್ತಿರುವ ಮಾತುಕತೆಗಳ ಕುರಿತು ಅವರ ಅಭಿಪ್ರಾಯಗಳನ್ನು ತಿಳಿದುಕೊಂಡಿತು. ಬಹುತೇಕ ಶಾಸಕರು ಡಿಎಂಕೆ ಮೈತ್ರಿಯೊಂದಿಗೆ ಮುಂದುವರಿಯಲು ಒಲವು ತೋರಿದರೂ, 2021ರಲ್ಲಿ ಪಡೆದ ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯಬೇಕೆಂಬ ಅಭಿಪ್ರಾಯದಲ್ಲಿ ಇದ್ದರು ಎಂದು ಹಿರಿಯ ಎಐಸಿಸಿ ನಾಯಕರು TNIEಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಜನ್ಮದಿನ ಮೊನ್ನೆ ಭಾನುವಾರ ರಾತ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಟಾಲಿನ್ ಅವರಿಗೆ ದೂರವಾಣಿ ಮೂಲಕ ಶುಭಾಶಯ ಕೋರಿದರು. ಈ ಕರೆ ವಿಶೇಷ ಗಮನಸೆಳೆದಿತ್ತು. ಆದರೆ ಮೂಲಗಳ ಪ್ರಕಾರ, ಆ ದೂರವಾಣಿ ಸಂಭಾಷಣೆಯಲ್ಲಿ ಸ್ಥಾನ ಹಂಚಿಕೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ.
ಡಿಎಂಕೆ ಸಂಘಟನಾ ಕಾರ್ಯದರ್ಶಿ ಹಾಗೂ ಸ್ಥಾನ ಹಂಚಿಕೆ ಸಮಿತಿಯ ಸದಸ್ಯರಾದ ಆರ್.ಎಸ್. ಭಾರತೀ ಅವರು TNIE ಜೊತೆ ಮಾತನಾಡಿ, ನಾವು ನಮ್ಮ ನಿಲುವನ್ನು ತಿಳಿಸಿದ್ದೇವೆ. ಅವರು ಒಪ್ಪಿಗೆ ನೀಡಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಬಹುದು. ರಾಜ್ಯಸಭಾ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ, ಅವರು ಶುಕ್ರವಾರದೊಳಗೆ ನಾಮಪತ್ರ ಸಲ್ಲಿಸಬೇಕು. ಹೀಗಾಗಿ ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ ಎಂದರು.
ದೆಹಲಿಯ ಕಾಂಗ್ರೆಸ್ ಹಿರಿಯ ನಾಯಕರು ಡಿಎಂಕೆ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವುದನ್ನು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಾವು ಹೆಚ್ಚು ಸ್ಥಾನಗಳನ್ನು ಕೇಳಿದ್ದೇವೆ; ಅವರು ಇನ್ನೂ ಪ್ರತಿಕ್ರಿಯಿಸಿಲ್ಲ. ಅವರ ಪ್ರಸ್ತಾವನೆಯನ್ನು ನಾವು ಒಪ್ಪಿಲ್ಲ. ಕನಿಷ್ಠ 33 ಅಥವಾ 34 ಸ್ಥಾನಗಳಿಗಿಂತ ಕಡಿಮೆ ಸಿಕ್ಕರೆ ಕಷ್ಟವಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕರು ಹೇಳಿದ್ದಾರೆ.
ಇದೇ ವೇಳೆ, ಡಿಎಂಕೆಯ ಹಿರಿಯ ನಾಯಕರು TNIE ಜೊತೆ ಮಾತನಾಡಿ, ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ತೊಂದರೆ ಸೃಷ್ಟಿಸಬಹುದೆಂದು ಅಂದಾಜಿಸಿದ್ದೆವು ಎಂದು ತಿಳಿಸಿದ್ದಾರೆ. ಅದಕ್ಕಾಗಿಯೇ ನಾವು ಪನ್ನೀರ್ ಸೆಲ್ವಂ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ. ಕಾಂಗ್ರೆಸ್ನಿಂದ ಕೆಲವು ಪ್ರದೇಶಗಳಲ್ಲಿ ಹಿನ್ನಡೆ ಉಂಟಾದರೂ, ಪನ್ನೀರ್ಸೆಲ್ವಂ ಮೂಲಕ ಬೇರೆ ಪ್ರದೇಶಗಳಲ್ಲಿ ಗೆಲ್ಲಬಹುದು ಎಂದರು.
ವಿಸಿಕೆ 12 ಸ್ಥಾನಗಳ ಬೇಡಿಕೆ, ಅಧಿಕಾರ ಹಂಚಿಕೆ ಬೇಡ
ವಿಸಿಕೆ ಪಕ್ಷವು ಸೋಮವಾರ ಅನ್ನಾ ಅರಿವಾಲಯದಲ್ಲಿ ನಡೆದ ಮೊದಲ ಸುತ್ತಿನ ಮಾತುಕತೆಯಲ್ಲಿ 12 ಸ್ಥಾನಗಳ ಬೇಡಿಕೆ ಇಟ್ಟಿದೆ — 2021ರಲ್ಲಿ ಸ್ಪರ್ಧಿಸಿದ್ದ ಸ್ಥಾನಗಳಿಗಿಂತ ಆರು ಹೆಚ್ಚು ಸ್ಥಾನಗಳನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.
Advertisement