

ನವದೆಹಲಿ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷನ್ನು ಉಲ್ಲೇಖಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಖಮೇನಿ ಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದಿಸುತ್ತಾರೆಯೇ? ಎಂದು ಕೇಳಿದ್ದಾರೆ.
"ಈ ಬಗ್ಗೆ ಪ್ರಧಾನಿ ಮೋದಿ ಮಾತನಾಡಬೇಕು. ವಿಶ್ವದ ಕ್ರಮವನ್ನು ವ್ಯಾಖ್ಯಾನಿಸುವ ಒಂದು ಮಾರ್ಗವಾಗಿ ಒಂದು ದೇಶದ ಮುಖ್ಯಸ್ಥರ ಹತ್ಯೆಯನ್ನು ಅವರು ಬೆಂಬಲಿಸುತ್ತಾರೆಯೇ? ಮೋದಿಯ ಮೌನವು ಈಗ ವಿಶ್ವದಲ್ಲಿ ಭಾರತದ ಸ್ಥಾನಮಾನವನ್ನು ಕುಗ್ಗಿಸುತ್ತಿದೆ" ಎಂದು ರಾಹುಲ್ ಗಾಂಧಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ, ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಹಗೆತನವು ದುರ್ಬಲ ಪ್ರದೇಶವನ್ನು ವ್ಯಾಪಕ ಸಂಘರ್ಷದತ್ತ ತಳ್ಳುತ್ತಿದೆ ಎಂದು ಹೇಳಿದ್ದಾರೆ.
ಎರಡೂ ಕಡೆಯಿಂದ ನಡೆಸಲಾದ ದಾಳಿಗಳನ್ನು ಖಂಡಿಸಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
"ಸುಮಾರು ಒಂದು ಕೋಟಿ ಭಾರತೀಯರು ಸೇರಿದಂತೆ ಕೋಟ್ಯಂತರ ಜನ ಅನಿಶ್ಚಿತತೆ ಎದುರಿಸುತ್ತಿದ್ದಾರೆ.... ಭದ್ರತಾ ಕಾಳಜಿಗಳು ನಿಜವಾಗಿದ್ದರೂ, ಸಾರ್ವಭೌಮತ್ವವನ್ನು ಉಲ್ಲಂಘಿಸುವ ಈ ದಾಳಿಗಳು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತವೆ. ಇರಾನ್ ಮೇಲಿನ ಏಕಪಕ್ಷೀಯ ದಾಳಿಗಳು ಹಾಗೂ ಇತರ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲಿನ ಇರಾನ್ ದಾಳಿಯನ್ನು ನಾವು ಖಂಡಿಸಬೇಕು. ಹಿಂಸಾಚಾರವು ಮತ್ತೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ - ಮಾತುಕತೆ ಮತ್ತು ಸಂಯಮ ಶಾಂತಿಗೆ ಏಕೈಕ ಮಾರ್ಗವಾಗಿದೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಈ ವಿಚಾರದಲ್ಲಿ ಭಾರತವು ನೈತಿಕವಾಗಿ ಸ್ಪಷ್ಟವಾಗಿರಬೇಕು ಎಂದಿದ್ದಾರೆ.
"ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಜೀವಗಳ ರಕ್ಷಣೆಯಲ್ಲಿ ಸ್ಪಷ್ಟವಾಗಿ ಮಾತನಾಡುವ ಧೈರ್ಯವನ್ನು ನಾವು ಹೊಂದಿರಬೇಕು. ನಮ್ಮ ವಿದೇಶಾಂಗ ನೀತಿಯು ಸಾರ್ವಭೌಮತ್ವ ಮತ್ತು ವಿವಾದಗಳ ಶಾಂತಿಯುತ ಪರಿಹಾರದಲ್ಲಿ ಬೇರೂರಿದೆ - ಮತ್ತು ಅದು ಸ್ಥಿರವಾಗಿರಬೇಕು" ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಮಿಲಿಟರಿ ದಾಳಿಯ ನಡುವೆ ಪಶ್ಚಿಮ ಏಷ್ಯಾದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಹುಲ್ ಗಾಂಧಿ ಶನಿವಾರ ಕೇಂದ್ರವನ್ನು ಒತ್ತಾಯಿಸಿದ್ದರು.
Advertisement