

ಗುವಾಹಟಿ: ಅಸ್ಸಾಂನ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದ್ದು, ಗುರುವಾರ ಮೂವರು ಕಾಂಗ್ರೆಸ್ ಶಾಸಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡರು.
ಇಂದು ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಬಿತ್ರ ಮಾರ್ಗರಿಟಾ ಅವರ ಸಮ್ಮುಖದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಅವರು ಕಾಂಗ್ರೆಸ್ ಶಸಕಾರದ ಕಮಲಾಖ್ಯ ದೇ ಪುರಕಾಯಸ್ಥ, ಸಶಿಕಾಂತ ದಾಸ್ ಮತ್ತು ಬಸಂತ ದಾಸ್ ಅವರನ್ನು ಕೇಸರಿ ಪಕ್ಷಕ್ಕೆ ಬರಮಾಡಿಕೊಂಡರು.
ಇದೇ ವೇಳೆ ಇತರ ಇಬ್ಬರು ನಾಯಕರು, ಕಾಂಗ್ರೆಸ್ನ ಮಾಜಿ ಜಂಟಿ ಕಾರ್ಯದರ್ಶಿ ಪಾರ್ಷ ಬಾಬ್ ಕಲಿತಾ ಮತ್ತು ತೃಣಮೂಲ ಕಾಂಗ್ರೆಸ್ನ ಮಾಜಿ ಪ್ರಧಾನ ಕಾರ್ಯದರ್ಶಿ ಕಂಕನ್ ನಾಥ್ ಅವರು ಬಿಜೆಪಿ ಸೇರಿದರು.
ಅಸ್ಸಾಂ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಅವರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಏಪ್ರಿಲ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಕಳೆದ ಎರಡು ವರ್ಷಗಳಿಂದ ಈ ಶಾಸಕರು ವಿಧಾನಸಭೆಯಲ್ಲಿ ತಮ್ಮ ಸರ್ಕಾರವನ್ನು ಬೆಂಬಲಿಸುತ್ತಿದ್ದರು ಮತ್ತು "ಇಂದು ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರಿದ್ದಾರೆ ಮತ್ತು ನಾನು ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ" ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಹೇಳಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಈ ವಿಷಯವನ್ನು ಇನ್ನೂ ಚರ್ಚಿಸಲಾಗಿಲ್ಲ, ಆದರೆ ಪಕ್ಷದ ರಾಜ್ಯ ಚುನಾವಣಾ ಸಮಿತಿ "ಈಗ ಅದನ್ನು ಪರಿಗಣಿಸುತ್ತದೆ" ಎಂದು ಶರ್ಮಾ ತಿಳಿಸಿದರು.
"ಅವರು ಬೇಷರತ್ತಾಗಿ ಬಿಜೆಪಿಗೆ ಸೇರಿದ್ದಾರೆ. ಪಕ್ಷದಲ್ಲಿ ಹೊಸ ಅಥವಾ ಹಳೆಯ ಸದಸ್ಯರು ಅಂತ ಏನೂ ಇಲ್ಲ. ಪಕ್ಷದೊಳಗೆ ನಾವೆಲ್ಲರೂ ಒಂದೇ" ಎಂದು ಮುಖ್ಯಮಂತ್ರಿ ಹೇಳಿದರು.
Advertisement