

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (NCERT) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಾಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬೇಷರತ್ತಾಗಿ ಕಾರಣವಿಲ್ಲದೆ ಕ್ಷಮೆಕೇಳಿ ಸಂಪೂರ್ಣ ಪುಸ್ತಕವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಘೋಷಿಸಿದೆ.
Exploring Society: India and Beyond (Grade 8, Part 2) ಎಂಬ ಪಠ್ಯದಲ್ಲಿ “ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ” ಎಂಬ ಅಧ್ಯಾಯವಿದ್ದು, ಅದರಲ್ಲಿ ಭ್ರಷ್ಟಾಚಾರ, ಪ್ರಕರಣಗಳ ಹೆಚ್ಚಿನ ಬಾಕಿ ಪ್ರಮಾಣ ಮತ್ತು ನ್ಯಾಯಾಧೀಶರ ಕೊರತೆ ಮುಂತಾದವುಗಳನ್ನು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳೆಂದು ಉಲ್ಲೇಖಿಸಲಾಗಿತ್ತು.
ಪ್ರಕಟಣೆಯಲ್ಲಿ ಎನ್ಸಿಇಆರ್ಟಿ ನಿರ್ದೇಶಕರು ಮತ್ತು ಪರಿಷತ್ತಿನ ಸದಸ್ಯರು ಬೇಷರತ್ತಾಗಿ ಸಂಪೂರ್ಣ ಕ್ಷಮೆಯಾಚನೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ. ಜೊತೆಗೆ, ಆ ಪುಸ್ತಕವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗಿದೆ, ಅದು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಈ ವಿವಾದವು ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಅವರು ತುರ್ತು ವಿಚಾರಣೆಗೆ ವಿಷಯವನ್ನು ಉಲ್ಲೇಖಿಸಿದ ನಂತರ ಸುಪ್ರೀಂ ಕೋರ್ಟ್ಗೆ ತಲುಪಿತು.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರೊಂದಿಗೆ, ಪಠ್ಯಪುಸ್ತಕದಲ್ಲಿನ ನ್ಯಾಯಾಂಗದ ಕುರಿತು ಮಾಡಲಾದ “ಆಕ್ಷೇಪಾರ್ಹ” ಉಲ್ಲೇಖಗಳ ಕುರಿತು ಸ್ವಯಂ ಪ್ರೇರಿತವಾಗಿ ಕೇಸು ಕೈಗೆತ್ತಿಕೊಂಡಿದ್ದರು.
ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳು, ಶಾಲಾ ಪಠ್ಯಕ್ರಮದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಉಲ್ಲೇಖಗಳನ್ನು ಸೇರಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಭೂಮಿಯ ಮೇಲೆ ಯಾರಿಗೂ ನ್ಯಾಯಾಂಗವನ್ನು ಅಪಮಾನಗೊಳಿಸಲು ಅಥವಾ ಅದರ ನೈತಿಕತೆಯನ್ನು ಕಳಂಕಗೊಳಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್, ಈ ಪಠ್ಯಪುಸ್ತಕದ ಯಾವುದೇ ಮುಂದಿನ ಪ್ರಕಟಣೆ, ಮರುಮುದ್ರಣ ಅಥವಾ ಡಿಜಿಟಲ್ ವಿತರಣೆ ಮೇಲೆ ಸಂಪೂರ್ಣ ನಿಷೇಧ ಹೇರಿತು. ಈ ವಿಷಯವು ಸಂಸ್ಥೆಗೆ ಹಾನಿ ಉಂಟುಮಾಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಇದೇ ವೇಳೆ, ವಿವಾದಾತ್ಮಕ ಅಧ್ಯಾಯದ ಬಗ್ಗೆ ಕೇಂದ್ರ ಸರ್ಕಾರವೂ ಆತಂಕ ವ್ಯಕ್ತಪಡಿಸಿತು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ವಿಭಾಗವನ್ನು ರಚಿಸಲು ಹೊಣೆಗಾರರಾಗಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
Advertisement