

ಶ್ರೀನಗರ: ಜಮ್ಮುವಿನಲ್ಲಿ ನಡೆದ ಮದುವೆ ಸಮಾರಂಭದ ವೇಳೆ ಹಿರಿಯ ರಾಜಕಾರಣಿ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮೇಲೆ ಹತ್ಯೆ ಯತ್ನ ನಡೆದಿದ್ದು, ಘಟನೆ ಆತಂಕ ಮೂಡಿಸಿದೆ.
ತಮ್ಮ ಮೇಲೆ ನಡೆದ ಹತ್ಯೆ ಯತ್ನದ ಕುರಿತು ಪ್ರತಿಕ್ರಿಯೆ ನೀಡಿರುವ ಫಾರೂಕ್ ಅಬ್ದುಲ್ಲಾ ಅವರು, “ದೇವರು ನನ್ನನ್ನು ಉಳಿಸಿದ, ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.
ದಾಳಿಕೋರ ನನ್ನ ಹತ್ತಿರವೇ ಬಂದಿದ್ದ. ಆದರೆ, "ಕೊನೆಯ ಕ್ಷಣದಲ್ಲಿ, ಎನ್ಎಸ್ಜಿ ಸೇರಿದಂತೆ ಭದ್ರತಾ ಸಿಬ್ಬಂದಿ ಅವನನ್ನು ವಶಕ್ಕೆ ಪಡೆದರು. ತಕ್ಷಣ ನನ್ನನ್ನು ನನ್ನ ಕಾರಿನಲ್ಲಿ ಕೂರಿಸಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು. ನಾನು ಚೆನ್ನಾಗಿದ್ದೇನೆ. ದೇವರ ಕೃಪೆಯಿಂದ ಅಪಾಯದಿಂದ ಪಾರಾಗಿದ್ದೇನೆಂದು ತಿಳಿಸಿದ್ದಾರೆ.
ಬುಧವಾರ ರಾತ್ರಿ ಜಮ್ಮು ನಗರದ ಹೊರವಲಯದ ಗ್ರೇಟರ್ ಕೈಲಾಶ್, ಜಮ್ಮು ಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ಸಂಭವಿಸಿದೆ.
ಕಮಲ್ ಸಿಂಗ್ ಜಮ್ವಾಲ್ ಎಂಬ ವ್ಯಕ್ತಿ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗುಂಡಿನ ದಾಳಿ ಮಾಡಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ಕಾರ್ಯಕ್ರಮದಿಂದ ಹೊರಡುವಾಗ ಆರೋಪಿಯು ಅಬ್ದುಲ್ಲಾ ಅವರ ಹಿಂದೆ ನಿಂತು ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಆದರೆ, ಭದ್ರತಾ ಸಿಬ್ಬಂದಿ ಹಾಗೂ ಎನ್ಎಸ್'ಜಿ (NSG) ಸಿಬ್ಬಂದಿ ತಕ್ಷಣ ಕ್ರಮ ಕೈಗೊಂಡು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅಬ್ದುಲ್ಲಾ ಅವರನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆಯ ಬಳಿಕ ಜಮ್ಮು-ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.
ಈ ಕುರಿತು ಪ್ರತಿಕ್ರಿಯಿಸಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, Z+ ಭದ್ರತೆ ಹೊಂದಿರುವ ವ್ಯಕ್ತಿಯ ಹತ್ತಿರ ಗುಂಡು ಹಿಡಿದು ಯಾರೋ ತಲುಪಿರುವುದು ದೊಡ್ಡ ಪ್ರಶ್ನೆ ಎಂದು ಹೇಳಿದ್ದಾರೆ.
ಘಟನೆ ನಂತರ ಹಿರಿಯ ಅಧಿಕಾರಿಗಳು ಎಲ್ಲಾ ಪ್ರಮುಖ ವ್ಯಕ್ತಿಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದು, ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
Advertisement