

ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಕೋರಿ ನಿರ್ಣಯ ಮಂಡಿಸಲು ವಿರೋಧ ಪಕ್ಷಗಳು ಸಿದ್ಧತೆ ನಡೆಸಿದ್ದು, ಈ ಸಂಬಂಧ ಒಟ್ಟು 130 ಲೋಕಸಭಾ ಸದಸ್ಯರು ಮತ್ತು 63 ರಾಜ್ಯಸಭಾ ಸದಸ್ಯರು ನೋಟಿಸ್ಗೆ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಶುಕ್ರವಾರ ಕನಿಷ್ಠ ಒಂದು ಸದನದಲ್ಲಿ ಲೋಕಸಭೆ ಅಥವಾ ಲೋಕಸಭೆಯಲ್ಲಿ ನೋಟಿಸ್ ಸಲ್ಲಿಸುವ ಸಾಧ್ಯತೆಯಿದ್ದು, ಅದು ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಏತನ್ಮಧ್ಯೆ, ಸಿಇಸಿ ವಿರುದ್ಧದ ನೋಟಿಸ್ಗೆ ಸಹಿ ಹಾಕುವಲ್ಲಿ ಸಂಸದರು ಹೆಚ್ಚಿನ ಉತ್ಸಾಹವನ್ನು ತೋರಿಸಿದ್ದಾರೆ ಮತ್ತು ಅಗತ್ಯವಿರುವ ಸಂಖ್ಯೆಗಳನ್ನು ಈಗಾಗಲೇ ಸಾಧಿಸಿದ್ದರೂ ಸಹ, ಗುರುವಾರವೂ ಹಲವಾರು ಸಂಸದರು ನೋಟಿಸ್ಗೆ ಸಹಿ ಹಾಕಲು ಮುಂದೆ ಬಂದರು ಎಂದು ವಿರೋಧ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ನಿಯಮಗಳ ಪ್ರಕಾರ, ಲೋಕಸಭೆಯಲ್ಲಿ ಸಿಇಸಿಯನ್ನು ಪದಚ್ಯುತಗೊಳಿಸುವಂತೆ ಕೋರಿ ಸಲ್ಲಿಸುವ ನೋಟಿಸ್ಗೆ ಕನಿಷ್ಠ 100 ಸಂಸದರು ಸಹಿ ಹಾಕಬೇಕು ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರ ಸಹಿ ಅಗತ್ಯವಿದೆ.
ಈ ನೋಟಿಸ್ಗೆ ಇಂಡಿಯಾ ಬ್ಲಾಕ್ ಪಕ್ಷಗಳ ಸದಸ್ಯರು ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಬ್ಲಾಕ್ನ ಭಾಗವಲ್ಲದ ಆಮ್ ಆದ್ಮಿ ಪಕ್ಷದ(ಎಎಪಿ) ಸಂಸದರು ಸಹ ನೋಟಿಸ್ಗೆ ಸಹಿ ಹಾಕಿದ್ದಾರೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ.
ಸಿಇಸಿಯನ್ನು ಪದಚ್ಯುತಗೊಳಿಸುವಂತೆ ಕೋರಿ ನೋಟಿಸ್ ನೀಡಲಾಗುತ್ತಿರುವುದು ಇದೇ ಮೊದಲು.
ಉನ್ನತ ಮೂಲವೊಂದರ ಪ್ರಕಾರ, ನೋಟಿಸ್ನಲ್ಲಿ ಸಿಇಸಿ ವಿರುದ್ಧ ಏಳು ಆರೋಪಗಳನ್ನು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ "ಪಕ್ಷಪಾತಿ ಮತ್ತು ತಾರತಮ್ಯದ ನಡವಳಿಕೆ" ಯಿಂದ ಹಿಡಿದು "ಚುನಾವಣಾ ವಂಚನೆಯ ತನಿಖೆಗೆ ಉದ್ದೇಶಪೂರ್ವಕ ಅಡಚಣೆ" ಮತ್ತು "ಸಾಮೂಹಿಕ ಮತದಾನದ ಹಕ್ಕು ನಿರಾಕರಣೆ" ವರೆಗಿನ ಆರೋಪಗಳಿವೆ.
ವಿರೋಧ ಪಕ್ಷಗಳು, ಸಿಇಸಿ ಹಲವಾರು ಸಂದರ್ಭಗಳಲ್ಲಿ ಆಡಳಿತಾರೂಢ ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿಶೇಷವಾಗಿ ಈಗ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಅವರು ದೂರಿದ್ದಾರೆ.
ಸಿಇಸಿಯನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯು ಭಾರತದ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯಂತೆಯೇ ಇರುತ್ತದೆ. ಈ ಪ್ರಸ್ತಾವನೆಯನ್ನು ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಬಹುದು ಮತ್ತು ವಿಶೇಷ ಬಹುಮತದಿಂದ ಅಂಗೀಕರಿಸಬೇಕು. ಪದಚ್ಯುತಿಗೆ ಸದನದ ಒಟ್ಟು ಸದಸ್ಯತ್ವದ ಬಹುಮತ ಮತ್ತು ಹಾಜರಿರುವ ಹಾಗೂ ಮತದಾನ ಮಾಡುವ ಸದಸ್ಯರ ಮೂರನೇ ಎರಡರಷ್ಟು ಬಹುಮತ ಅಗತ್ಯ ಇದೆ.
Advertisement