

13 ವರ್ಷಗಳಿಂದ ಚಲನವಲನವಿಲ್ಲದೆ ಹಾಸಿಗೆಯಲ್ಲೇ ಮಲಗಿದ್ದ ಹರೀಶ್ ರಾಣಾ (Harish Rana) ಅವರ ಸುದೀರ್ಘ ಹೋರಾಟ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಮಗನ ಈ ನರಕಯಾತನೆಯನ್ನು ನೋಡಲಾರದೆ 'ದಯಾಮರಣ' (Passive Euthanasia) ಕೋರಿ ತಂದೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ನೀಡಿದ ಬೆನ್ನಲ್ಲೇ, ಹರೀಶ್ ಅವರನ್ನು ದೆಹಲಿಯ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಮಂಡಳಿಯ ಮೇಲ್ವಿಚಾರಣೆಯಲ್ಲಿ ದಯಾಮರಣ ನೀಡುವ ಕಾನೂನಾತ್ಮಕ ಪ್ರಕ್ರಿಯೆಗಳು ಅಧಿಕೃತವಾಗಿ ಆರಂಭಗೊಂಡಿವೆ.
ವೈದ್ಯರು ಈಗ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ನಿಧಾನವಾಗಿ ಜೀವಾಧಾರ ಸಾಧನಗಳನ್ನು ಹಿಂತೆಗೆಯುತ್ತಿದ್ದಾರೆ. ಇದರಿಂದ ಅವರ ದೀರ್ಘಕಾಲದ ವೇದನೆಗೆ ಮುಕ್ತಿ ಸಿಗಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೊದಲ್ಲಿ ಗಾಜಿಯಾಬಾದ್ನಲ್ಲಿರುವ ರಾಣಾ ಅವರ ಮನೆಯಲ್ಲಿ ನಡೆದ ಭಾವುಕ ವಿದಾಯದ ಕ್ಷಣಗಳು ಕಾಣಿಸುತ್ತವೆ. ಶುಕ್ರವಾರ ಚಿತ್ರೀಕರಿಸಲಾದ ವಿಡಿಯೊದಲ್ಲಿ ಬ್ರಹ್ಮ ಕುಮಾರಿಸ್ ಸಂಸ್ಥೆಯ ಪ್ರತಿನಿಧೆಯೊಬ್ಬರು ಕಣ್ಣೀರಿನಿಂದ ಹರೀಶ್ ಅವರಿಗೆ ತಿಲಕ ಹಚ್ಚಿ ಎಲ್ಲರನ್ನು ಕ್ಷಮಿಸಿ, ಎಲ್ಲರಿಗೂ ಕ್ಷಮೆ ಕೇಳಿ, ಈಗ ಹೋಗುವ ಸಮಯ ಬಂದಿದೆ ಎಂದು ಹೇಳುತ್ತಿದ್ದಾರೆ.
ಜೀವ ರಕ್ಷಕ ವ್ಯವಸ್ಥೆ ಹಂತ ತೆಗೆಯುವ ಪ್ರಕ್ರಿಯೆ ಆರಂಭ!
ನ್ಯಾಯಾಲಯದ ಆದೇಶದ ಬಳಿಕ ಹರೀಶ್ ರಾಣಾ ಅವರನ್ನು ಉತ್ತರ ಪ್ರದೇಶದ ಗಾಜಿಯಾಬಾದ್ನಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಅವರ ಜೀವರಕ್ಷಕ ವ್ಯವಸ್ಥೆಯನ್ನು ಹಂತ ಹಂತವಾಗಿ ತೆಗೆದುಹಾಕುವ ಪ್ರಕ್ರಿಯೆ ಆರಂಭಿಸಲಾಗಿದೆ.
ಹರೀಶ್ ರಾಣಾ ಅವರ ಜೀವನದಲ್ಲಿ ಈ ದುರ್ಘಟನೆ 2013ರಲ್ಲಿ ಸಂಭವಿಸಿತ್ತು. ಆಗ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಂದು ದಿನ ಅವರು ವಾಸಿಸುತ್ತಿದ್ದ ಪೇಯಿಂಗ್ ಗೆಸ್ಟ್ ಹಾಸ್ಟೆಲ್ನ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದಲ್ಲಿ ಅವರ ತಲೆಗೆ ತೀವ್ರ ಗಾಯವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಲವು ವರ್ಷಗಳ ಚಿಕಿತ್ಸೆಯ ಬಳಿಕವೂ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬರಲಿಲ್ಲ.
ವೈದ್ಯಕೀಯ ವರದಿ
ಹರೀಶ್ ರಾಣಾ ಶಾಶ್ವತ ಸಸ್ಯಕ ಸ್ಥಿತಿಗೆ ತಲುಪಿದ್ದರು. ಕಳೆದ 13 ವರ್ಷಗಳಿಂದ ಅವರು ಸಂಪೂರ್ಣವಾಗಿ ಯಂತ್ರಗಳ ಸಹಾಯದಿಂದ ಮಾತ್ರ ಉಸಿರಾಡುತ್ತಿದ್ದರು. ಅವರ ಆಹಾರ ಮತ್ತು ದೈಹಿಕ ಚಲನೆಗಳಿಗೂ ವೈದ್ಯಕೀಯ ಸಾಧನಗಳೇ ಅವಲಂಬನೆಯಾಗಿದ್ದವು. ಈ ಪರಿಸ್ಥಿತಿ ಕುಟುಂಬದ ಮೇಲೆ ಭಾರೀ ಮಾನಸಿಕ ಮತ್ತು ಭಾವನಾತ್ಮಕ ಒತ್ತಡವನ್ನುಂಟು ಮಾಡಿತ್ತು.
ಈ ಹಿನ್ನೆಲೆಯಲ್ಲಿ, ಹರೀಶ್ ರಾಣಾ ಅವರ ಪೋಷಕರು ಸುಪ್ರೀಂ ಕೋರ್ಟ್ನಲ್ಲಿ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದರು. ತಮ್ಮ ಮಗನಿಗೆ ಇನ್ನೂ ನೋವುಂಟಾಗಬಾರದು ಮತ್ತು ಗೌರವಯುತ ಸಾವು ದೊರಕಬೇಕು ಎಂಬ ಕಾರಣದಿಂದ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದರು. ಹಲವು ವೈದ್ಯಕೀಯ ವರದಿಗಳು ಮತ್ತು ಪರಿಣಿತರ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಈ ಅರ್ಜಿಯನ್ನು ಅಂಗೀಕರಿಸಿತು.
ಹರೀಶ್ ರಾಣಾ ಅವರ ತಂದೆ ಅಶೋಕ್ ರಾಣಾ ಸೇರಿದಂತೆ ಕುಟುಂಬದವರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಅವರನ್ನು ಸಾಕಷ್ಟು ಕಾಳಜಿ ವಹಿಸಿ ನೋಡಿಕೊಂಡಿದ್ದರು. ಸ್ಥಳೀಯ ನಿವಾಸಿಗಳು ಹಾಗೂ ರಾಜ್ ನಗರ್ ಎಕ್ಸ್ಟೆನ್ಷನ್ AOA ಸದಸ್ಯರು ಕುಟುಂಬದ ನಿರಂತರ ಸೇವೆಯನ್ನು ಸ್ಮರಿಸಿದ್ದಾರೆ.
ಈ ಪ್ರಕರಣವು ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದ ಮೊದಲ ಪ್ಯಾಸಿವ್ ಯೂಥನೇಷಿಯಾ ಪ್ರಕರಣವೆಂದು ಹೇಳಲಾಗುತ್ತಿದೆ. 13 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಹರೀಶ್ ಅವರಿಗೆ ತೀವ್ರ ಮೆದುಳಿನ ಗಾಯಗಳಾಗಿ, ಅವರು ಕೋಮಾ ಸ್ಥಿತಿಯಲ್ಲೇ ಇದ್ದರು.
ನ್ಯಾಯಮೂರ್ತಿಗಳಾದ ಜೆ ಬಿ ಪರ್ಡಿವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ಐತಿಹಾಸಿಕ ತೀರ್ಪನ್ನು ನೀಡಿದ್ದು, ಆಸ್ಪತ್ರೆಯಲ್ಲೇ ಜೀವಾಧಾರ ಸಾಧನಗಳನ್ನು ಹಿಂತೆಗೆದು ಅವರಿಗೆ ಗೌರವಪೂರ್ಣ ಮರಣ ನೀಡಲು ಕುಟುಂಬಕ್ಕೆ ಅವಕಾಶ ನೀಡಿದೆ. ಈ ತೀರ್ಪು ಭಾರತದಲ್ಲಿ ಅಂತ್ಯಜೀವನ ಹಕ್ಕುಗಳ ಕುರಿತು ವೈದ್ಯಕೀಯ ಹಾಗೂ ಕಾನೂನು ವಲಯಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ತೀರ್ಪಿನ ಬಳಿಕ ಮಾತನಾಡಿದ ಅವರ ತಂದೆ ಅಶೋಕ್ ರಾಣಾ, ಈ ತೀರ್ಪು ನಮ್ಮ ಕುಟುಂಬಕ್ಕೆ ಯಾವುದೇ ವೈಯಕ್ತಿಕ ಲಾಭ ತರುವುದಿಲ್ಲ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಪರಿಸ್ಥಿತಿಯಲ್ಲಿ ಇರುವ ಅನೇಕ ಕುಟುಂಬಗಳಿಗೆ ಇದು ಸಹಾಯವಾಗಬಹುದು ಎಂದು ಹೇಳಿದರು.
ಒಬ್ಬ ತಂದೆಯಾಗಿರುವ ನನಗೆ ಇದು ಅತ್ಯಂತ ನೋವು ತಂದ ಸಂಗತಿ. ಯಾವ ತಂದೆಯೂ ತನ್ನ ಮಗನನ್ನು ಇಂತಹ ಸ್ಥಿತಿಯಲ್ಲಿ ನೋಡಲು ಬಯಸುವುದಿಲ್ಲ. ಆದರೆ ಇಂತಹ ಅನಿರೀಕ್ಷಿತ ದುಃಖವನ್ನು ಅನುಭವಿಸುತ್ತಿರುವವರ ಗೌರವವನ್ನು ಕಾಪಾಡಲು ಈ ತೀರ್ಪು ಸಹಾಯವಾಗಬಹುದು ಎಂದು ನಾವು ನಂಬಿದ್ದೇವೆ ಎಂದು ಅಶೋಕ್ ರಾಣಾ ಹೇಳಿದ್ದಾರೆ.
Advertisement