

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಈ ಮಧ್ಯೆ ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಅವರಿಗೆ 90 ವಿಧಾನಸಭಾ ಸ್ಥಾನದ ಜೊತೆಗೆ ಎರಡೂವರೆ ವರ್ಷಗಳ ಕಾಲ ಸಿಎಂ ಹುದ್ದೆಯ ಆಫರ್ ಬಂದಿದೆ ಎಂಬ ಪಕ್ಷದ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ ನೀಡಿರುವ ಹೇಳಿಕೆ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ.
ಸಾರ್ವಜನಿಕ ಸಮಾವೇಶವೊಂದರಲ್ಲಿ ಆಧವ್ ಅರ್ಜುನ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಆಫರ್ ನೀಡಿದ್ದು ಎಐಎಡಿಎಂಕೆ ಅಥವಾ ಬಿಜೆಪಿನಾ ಎಂಬುದನ್ನು ಸ್ಪಷ್ಪಪಡಿಸಿಲ್ಲ. ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವ ಸರ್ಕಾರವನ್ನು ನೀಡಲು ಟಿವಿಕೆಯನ್ನು ಬಲಿಷ್ಠಗೊಳಿಸಬೇಕೆಂದು ವಿಜಯ್ ಆಫರ್ ನಿರಾಕರಿಸಿದ್ದಾರೆ. ನಮ್ಮ ನಾಯಕ ದೆಹಲಿ ನಾಯಕರ ಒತ್ತಾಯಕ್ಕೆ ಮಣಿದು ಸಿಎಂ ಆಗುವವರಲ್ಲ ಎಂದಿದ್ದಾರೆ.
234 ಕ್ಷೇತ್ರಗಳಲ್ಲಿ ಯಾರೊಂದಿಗೂ ಟಿ.ವಿ.ಕೆ ಮೈತ್ರಿ ಮಾಡಿಕೊಳ್ಳದೆ ಸ್ಪರ್ಧಿಸಲಿದೆ ಎಂದು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸ್ನೇಹಿತರಿಗೆ ತಿಳಿಸಲು ಬಯಸುತ್ತೇನೆ. ನಿಜವಾದ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಹೋದರರಿಗೆ ನಾವು ಸತ್ಯವಂತರಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.
ನಟ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸದ ನಿರ್ಧಾರವನ್ನು ಟೀಕಿಸಿ ಆಕ್ರೋಶಕ್ಕೆ ಗುರಿಯಾಗಿದ್ದ ಆಧವ್, ಹಿರಿಯ ನಟನ ಗೌರವ ಕಡಿಮೆ ಮಾಡುವುದು ನನ್ನ ಉದ್ದೇಶವಲ್ಲ. ಅದು "ಡಿಎಂಕೆಯ ಪಿತೂರಿ ಎಂಬುದನ್ನು ಬಹಿರಂಗಪಡಿಸುವುದಾಗಿತ್ತು ಎಂದು ಸ್ಪಷ್ಪಪಡಿಸಿದ್ದಾರೆ.
ಗುರುವಾರ ತಮ್ಮ ಪಕ್ಷ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಆಧವ್, ಹಲವು ಬೆದರಿಕೆ ಹಾಕುವ ಮೂಲಕ ರಜನಿಕಾಂತ್ ರಾಜಕೀಯಕ್ಕೆ ಬರದಂತೆ "ಡಿಎಂಕೆ ಕುಟುಂಬ ತಡೆಯಿತು. ಈಗ ಅವರಿಗೆ ಏನಾಯಿತು ನೋಡಿ. ಅವರು ರೆಡ್ ಜೈಂಟ್ ಮೂವೀಸ್ ನಿರ್ಮಾಣದ ಸಿನಿಮಾಗಳಲ್ಲಿ ನಟಿಸಲು ಮರಳಿದ್ದಾರೆ ಎಂದು ಆಧವ್ ಹೇಳಿದ್ದರು.
Advertisement