

ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಕುಟುಂಬದಲ್ಲಿ ಆಸ್ತಿ ವಿವಾದ ಭುಗಿಲೆದ್ದಿದೆ. ತಾಯಿ ವಿಜಯಮ್ಮ ತನ್ನ ಮಗ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ನ್ಯಾಯಾಲಯಕ್ಕೆ ನೋಟರಿ ಪ್ರಮಾಣ ಪತ್ರ ಸಲ್ಲಿಸಿದ ನಂತರ ಅವರ ಕುಟುಂಬದೊಳಗಿನ ಆಸ್ತಿ ವಿವಾದ ಸಾರ್ವಜನಿಕವಾಗಿ ಬೆಳಕಿಗೆ ಬಂದಿದೆ.
ಈ ಹಿಂದೆ ಅಣ್ಣ-ತಂಗಿ ನಡುವೆ ಖಾಸಗಿ ಭಿನ್ನಾಭಿಪ್ರಾಯವೆಂದು ಹೇಳಲಾಗುತಿತ್ತು. ಈಗ ಅದು ತೀವ್ರ ರಾಜಕೀಯ ಮತ್ತು ವೈಯಕ್ತಿಕ ತಿರುವು ಪಡೆದುಕೊಂಡಿದೆ. ತಮ್ಮ ಕುಟುಂಬದ ಆಸ್ತಿಯಲ್ಲಿ ಸರಿಯಾದ ಪಾಲನ್ನು ನೀಡಿಲ್ಲ ಎಂದು ವೈಎಸ್ ಶರ್ಮಿಳಾ ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ. ಆದಾಗ್ಯೂ ಇತ್ತೀಚಿಗೆ ವಿಜಯಮ್ಮ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಜಗನ್ ಅವರ ನಿಲುವನ್ನು ನೇರವಾಗಿ ವಿರೋಧಿಸಿದ್ದಾರೆ.
2009 ರಲ್ಲಿ ವೈಎಸ್ ರಾಜಶೇಖರ ರೆಡ್ಡಿ ಅವರ ಮರಣದ ತನಕ ಎಲ್ಲಾ ಆಸ್ತಿಗಳು ಸಂಯೋಜಿತ ಕುಟುಂಬದ ಆಸ್ತಿಗಳಾಗಿತ್ತು. ಯಾರಿಗೂ ಹಂಚಿಕೆಯಾಗಿರಲಿಲ್ಲ. ಈ ಆಸ್ತಿಗಳನ್ನು ನಾಲ್ವರು ಮೊಮ್ಮಕ್ಕಳಿಗೆ ಸಮಾನವಾಗಿ ವಿತರಿಸುವುದು ವೈಎಸ್ಆರ್ ಅವರ ಸ್ಪಷ್ಟ ಉದ್ದೇಶವಾಗಿತ್ತು ಎಂದು ಅವರು ಅಫಿಡವಿಟ್ ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಪರಸ್ಪರ ಓಪ್ಪಂದದ ಮೂಲಕ ಶರ್ಮಿಳಾ ಅವರಿಗೆ ನ್ಯಾಯಸಮ್ಮತವಾದ ಪಾಲನ್ನು ನೀಡಲಾಗಿದೆ ಎಂದು ಜಗನ್ ಮೋಹನ್ ರೆಡ್ಡಿ ಅಫಿಡವಿಟ್ನಲ್ಲಿ ಹೇಳಿದ್ದಾರೆ. ಆದರೆ ಶರ್ಮಿಳಾಗೆ ಕಡಿಮೆ ಪಾಲು ಸಿಕ್ಕಿದೆ ಎಂದು ವಿಜಯಮ್ಮ ಹೇಳಿದ್ದಾರೆ. ಸರಸ್ವತಿ ಸಿಮೆಂಟ್ ಮತ್ತು ಯಲಹಂಕದ ಜಮೀನು ಸೇರಿದಂತೆ ಹಲವಾರು ಮಹತ್ವದ ಆಸ್ತಿಗಳನ್ನು ಶರ್ಮಿಳಾ ಅವರಿಗೆ ಸರಿಯಾಗಿ ನೀಡಿಲ್ಲ. ಆಕೆಗೆ ನೀಡಿದ ಹಣವು ಆಕೆಯ ಪಾಲಿನ ಲಾಭಾಂಶದ ಆದಾಯವಾಗಿದೆಯೇ ಹೊರತು ಅಂತಿಮ ಪರಿಹಾರವಲ್ಲ ಎಂದು ದಾಖಲೆ ಸ್ಪಷ್ಟಪಡಿಸಿದೆ.
ಶರ್ಮಿಳಾಗೆ ಮಾತ್ರವಲ್ಲದೆ ಮೊಮ್ಮಕ್ಕಳಿಗೂ ಆಸ್ತಿ ವಿಚಾರದಲ್ಲಿ ಜಗನ್ ಅನ್ಯಾಯ ಮಾಡಿದ್ದಾರೆ ಎಂದು ವಿಜಯಮ್ಮ ಆರೋಪಿಸಿದ್ದಾರೆ. ಸತ್ಯ ಏನು ಎಂಬುದ ದೇವರು ಮತ್ತು ನನ್ನ ಮಗನಿಗೆ ಗೊತ್ತಿದೆ. ಜಗನ್ ಪರಿಸ್ಥಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದಾನೆ. ಸುಳ್ಳು ಪ್ರಚಾರ ಎಂದು ಹೇಳುವುದನ್ನು ನಿಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರತಿ ಹೇಳಿಕೆಯು ಸತ್ಯವಾಗಿದೆ ಮತ್ತು ದೇವರ ಹೆಸರಿನಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಅಫಿಡವಿಟ್ನಲ್ಲಿ ಉಲ್ಲೇಖಿಸಿದ್ದಾರೆ. ಇದು ಕೌಟುಂಬಿಕ ಕಲಹವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಇದೀಗ ಶರ್ಮಿಳಾ ಜೊತೆಗೆ ವಿಜಯಮ್ಮ ಅವರನ್ನು ಜಗನ್ ಎದುರಿಸುವಂತಾಗಿದೆ.
Advertisement