ಜಗನ್ vs ಶರ್ಮಿಳಾ: ಮೌನ ಮುರಿದ Vijayamma; ಆಸ್ತಿ ವಿವಾದ ಕುರಿತು ವೈಎಸ್ ಅಭಿಮಾನಿಗಳಿಗೆ ಬಹಿರಂಗ ಪತ್ರ!

ಮೂರು ಪುಟಗಳ ಬಹಿರಂಗ ಪತ್ರದಲ್ಲಿ ತಾಯಿ ವಿಜಯಮ್ಮ ನೇರವಾಗಿ ತಮ್ಮ ಪುತ್ರಿಯ ಬೆಂಬಲಕ್ಕೆ ನಿಂತಿದ್ದು, ತಮ್ಮ ಪತಿ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಬದುಕಿದ್ದಾಗ ಕುಟುಂಬದ ಆಸ್ತಿಯನ್ನು...
Vijayamma
ಜಗನ್ ಮತ್ತು ಶರ್ಮಿಳಾ ತಾಯಿ ವಿಜಯಮ್ಮ
Updated on

ಅಮರಾವತಿ: ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಅವರ ಸಹೋದರಿ ಹಾಗೂ ಎಪಿಸಿಸಿ ಅಧ್ಯಕ್ಷ ವೈಎಸ್ ಶರ್ಮಿಳಾ ನಡುವಿನ ಆಸ್ತಿ ವಿವಾದದ ಬಗ್ಗೆ ತಾಯಿ ವಿಜಯಮ್ಮ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ಅಭಿಮಾನಿಗಳಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ.

ಮೂರು ಪುಟಗಳ ಬಹಿರಂಗ ಪತ್ರದಲ್ಲಿ ತಾಯಿ ವಿಜಯಮ್ಮ ನೇರವಾಗಿ ತಮ್ಮ ಪುತ್ರಿಯ ಬೆಂಬಲಕ್ಕೆ ನಿಂತಿದ್ದು, ತಮ್ಮ ಪತಿ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಬದುಕಿದ್ದಾಗ ಕುಟುಂಬದ ಆಸ್ತಿಯನ್ನು ಎಂದಿಗೂ ವಿಂಗಡಿಸಲಿಲ್ಲ. ಅವುಗಳಲ್ಲಿ ಕೆಲವನ್ನು ಅವರ ಇಬ್ಬರು ಮಕ್ಕಳಾದ ಜಗನ್ ಮತ್ತು ಶರ್ಮಿಳಾ ಹೆಸರಿಗೆ ಮಾತ್ರ ಇಡಲಾಗಿತ್ತು ಎಂದು ಹೇಳಿದ್ದಾರೆ.

ವೈವಿ ಸುಬ್ಬಾ ರೆಡ್ಡಿ ಮತ್ತು ವಿ ವಿಜಯ ಸಾಯಿ ರೆಡ್ಡಿ ಅವರು ತಮ್ಮ ಕುಟುಂಬದ ಆಸ್ತಿಗಳ ಬಗ್ಗೆ, ವಿಶೇಷವಾಗಿ ಶರ್ಮಿಳಾ ಅವರ ಆಸ್ತಿಯ ಪಾಲಿನ ಬಗ್ಗೆ ಸುಳ್ಳುಗಳನ್ನು ಮತ್ತು ಸತ್ಯಗಳನ್ನು ತಿರುಚುವುದನ್ನು ಆಕ್ಷೇಪಿಸಿರುವ ವಿಜಯಮ್ಮ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುವ ಕುರಿತು ಎಚ್ಚರಿಕೆ ನೀಡಿದ್ದಾರೆ.

ವಿಜಯಮ್ಮ ಪತ್ರದ ವಿವರ ಇಂತಿದೆ.. “ರಾಜಶೇಖರ್ ರೆಡ್ಡಿ ಅವರನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ, ಹೃದಯಕ್ಕೂ ಮತ್ತು ಈ ಕುಟುಂಬವನ್ನು ಅಪ್ಪಿಕೊಂಡಿರುವ ಪ್ರತಿಯೊಬ್ಬರಿಗೂ ನಿಮ್ಮ ವಿಜಯಮ್ಮ ಮಾಡುವ ವಿನಂತಿ.. ಈಗ ಆಗುತ್ತಿರುವುದನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಆದರೆ ನಮ್ಮ ಕುಟುಂಬ ಯಾವುದೇ ವಿಚಾರವನ್ನು ರಹಸ್ಯವಾಗಿ ಇಟ್ಟಿರಲಿಲ್ಲ. ದಿವಂಗತ ವೈಎಸ್ ರಾಜಶೇಖರ್ ರೆಡ್ಡಿ ಅವರು ಎಲ್ಲವನ್ನೂ ಬಹಿರಂಗಪಡಿಸಿದ್ದರು. ಆದರೆ ಈಗ ನನ್ನ ಕುಟುಂಬದಲ್ಲಿ ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅದನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಆಗಬಾರದ್ದೆಲ್ಲವೂ ಕಣ್ಣೆದುರೇ ನಡೆಯುತ್ತಿದೆ. ಈ ಕುಟುಂಬದ ಬಗ್ಗೆ ಕೆಲವು ತಮಗೆ ಇಷ್ಟ ಬಂದಂತೆ ಮಾತನಾಡುತ್ತಿದ್ದಾರೆ. ಸುಳ್ಳಿನ ಸರಮಾಲೆ ಮುಂದುವರಿದಿದೆ. ಕೆಲವರು ಗೊತ್ತಿದ್ದೂ ಕೆಲವರು ಗೊತ್ತಿಲ್ಲದೆಯೂ ಮಾತನಾಡುತ್ತಿದ್ದಾರೆ. ಇದು ಮುಂದುವರಿಯಬಾರದು ಎಂದು ಹೇಳಿದ್ದಾರೆ.

Vijayamma
ಇನ್ನು ಪ್ರೀತಿ ಉಳಿದಿಲ್ಲ: ಅಕ್ರಮ ಷೇರು ವರ್ಗಾವಣೆ ಕುರಿತಂತೆ ಸಹೋದರಿ ಶರ್ಮಿಳಾ ವಿರುದ್ಧ NCLT ಕದ ತಟ್ಟಿದ ಜಗನ್!

ಶರ್ಮಿಳಾಗೆ ಹಕ್ಕಿದೆ

“ಅವರು (ಶರ್ಮಿಳಾ) ಅವರಿಗೆ ಹಕ್ಕಿರುವುದರಿಂದ ಅವರು ಎಂಒಯುಗೆ ಸಹಿಹಾಕಿದ್ದಾರೆ. ಇದನ್ನು ಅಧಿಕೃತವಾಗಿ ಬರೆಯಲಾಗಿದೆ. ಎಂಒಯು ಪ್ರಕಾರ ಶರ್ಮಿಳಾಗೆ ನೀಡುತ್ತಿರುವ ಆಸ್ತಿಯನ್ನು ಜಗನ್ ಉಡುಗೊರೆಯಾಗಿ ನೀಡಿಲ್ಲ. ಇದು ಜಗನ್ ಅವರ ಜವಾಬ್ದಾರಿ ಎಂದು ವಿಜಯಮ್ಮ ಹೇಳಿದ್ದಾರೆ.

ವೈಎಸ್ ಆರ್ ಬದುಕಿರುವಾಗಲೇ ಆಸ್ತಿ ಹಂಚಿಕೆ ಮಾಡಲಾಗಿದೆ ಎಂಬುದು ಅಸತ್ಯ. ವೈಎಸ್ಆರ್ ತಮ್ಮ ಇಬ್ಬರು ಮಕ್ಕಳು ಬೆಳೆಯುತ್ತಿರುವ ದಿನಗಳಲ್ಲೇ ಮಕ್ಕಳ ಹೆಸರಿಗೆ ಕೆಲವು ಆಸ್ತಿಗಳನ್ನು ಮಾಡಿಟ್ಟಿದ್ದರು. ಕೆಲವು ಆಸ್ತಿಗಳನ್ನು ಇಬ್ಬರು ಮಕ್ಕಳ ಹೆಸರಿನಲ್ಲಿ ಹೆಸರಿಸಲಾಗಿದೆ ಅಷ್ಟೇ.. ವಿಜಯಸಾಯಿ ರೆಡ್ಡಿ ಅವರು ಆಡಿಟರ್ ಆಗಿರುವುದರಿಂದ ಅವರಿಗೆ ಎಲ್ಲವೂ ಗೊತ್ತಿದೆ. ವೈ.ವಿ.ಸುಬ್ಬಾರೆಡ್ಡಿ ಈ ಮನೆಯ ಸಂಬಂಧಿಯಾಗಿದ್ದು, ಎಂಒಯುಗೆ ಸಾಕ್ಷಿ ಸಹಿ ಹಾಕಿದ್ದಾರೆ.

ಆದರೂ ಇಬ್ಬರೂ ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಅಸತ್ಯಗಳಿಂದ ನನಗೆ ತುಂಬಾ ಬೇಸರವಾಗಿದೆ. ತಾಯಿಯಾಗಿ ನನಗೆ ಇಬ್ಬರು ಸಮಾನರೇ. ಅದೇ ರೀತಿ ನನ್ನ ಪತಿ ರಾಜಶೇಖರ್ ರೆಡ್ಡಿ ಅವರು ಕೊಟ್ಟಿರುವ ಮಾತು ಉಳಿಸಿಕೊಳ್ಳುವುದು ಕೂಡ ನನಗೆ ಅಷ್ಟೇ ಮುಖ್ಯ. ಆಸ್ತಿಯಲ್ಲಿ ಇಬ್ಬರಿಗೂ ಸಮಾನ ಹಕ್ಕಿರುವುದು ನಿಜ. ಆಸ್ತಿಯಲ್ಲಿ ನಮ್ಮ ಎಲ್ಲ ನಾಲ್ಕು ಜನ ಮೊಮ್ಮಕ್ಕಳಿಗೆ ಸಮಾನ ಹಕ್ಕಿರುವುದೂ ನಿಜ ಎಂದು ಹೇಳಿದ್ದಾರೆ.

ಹೆಚ್ಚಿನ ಪಾಲು ಪಡೆಯಲು ಜಗನ್ ಹರಸಾಹಸ

ಇನ್ನು ಇದೇ ವೇಳೆ ತಮ್ಮ ಪುತ್ರ ಜಗನ್ ವಿರುದ್ಧ ಕಿಡಿಕಾರಿರುವ ವಿಜಯಮ್ಮ... ಪುತ್ರ ಜಗನ್ ಮೋಹನ್ ರೆಡ್ಡಿ ತಮ್ಮ ತಂದೆಯ ಮಾತಿಗೆ ವಿರುದ್ಧವಾಗಿ ಆಸ್ತಿಯಲ್ಲಿ ತನಗೇ ಹೆಚ್ಚಿನ ಪಾಲು ಪಡೆಯಲು ಯತ್ನಿಸುತ್ತಿರುವುದು ನಿಜ. ಆದರೆ ಎಲ್ಲಾ ಆಸ್ತಿಗಳು ಕುಟುಂಬದ ಆಸ್ತಿಯಾಗಿರುವುದು ನಿಜ. ಜವಾಬ್ದಾರಿಯುತ ಮಗನಾಗಿ ಜಗನ್ ಕುಟುಂಬದ ಆಸ್ತಿಯನ್ನು ರಕ್ಷಿಸಬೇಕು ಎಂಬುದಂತೂ ಸತ್ಯ. ವೈಎಸ್ಆರ್ ಅವರ ಕೊನೆಯ ದಿನಗಳಲ್ಲಿ ಜಗನ್ ಅವರಿಗೆ ಈ ಬಗ್ಗೆ ಮಾತು ಕೂಡ ನೀಡಿದ್ದ. ಆದರೆ ಈಗ ಆ ಮಾತನ್ನು ಮರೆತಿದ್ದಾನೆ. ರಾಜಶೇಖರ್ ರೆಡ್ಡಿ ಅವರು ಬದುಕಿದ್ದಾಗ ಅವರ ಆಸ್ತಿ ಹಂಚಿಕೆ ಮಾಡಿಲ್ಲ. ಪ್ರತಿಯೊಬ್ಬರೂ ಇರುವ ಆಸ್ತಿಗಳನ್ನು ನೋಡಿಕೊಂಡರು. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಎಲ್ಲಾ ಕುಟುಂಬದ ಆಸ್ತಿ. ಅದನ್ನು ಹಂಚಿಕೊಳ್ಳೋಣ ಎಂದುಕೊಂಡಾಗ ವೈಎಸ್ ಆರ್ ಅಪಘಾತದಲ್ಲಿ ತೀರಿಹೋದರು. ಲೆಕ್ಕ ಪರಿಶೋಧಕರಾಗಿ ಸಾಯಿ ರೆಡ್ಡಿ ಅವರಿಗೆ ಈ ವಿಷಯ ಸ್ಪಷ್ಟವಾಗಿ ತಿಳಿದಿದೆ. ಗೊತ್ತಿದ್ದೂ ಅಸತ್ಯಗಳನ್ನು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

2019 ರಲ್ಲೇ ಒಪ್ಪಂದ

ರಾಜಶೇಖರ್ ರೆಡ್ಡಿ ನಿಧನದ ನಂತರ 2009 ರಿಂದ 2019 ರವರೆಗೆ ಶರ್ಮಿಳಾ ಮತ್ತು ಜಗನ್ 10 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಜಗನ್ ಡಿವಿಡೆಂಡ್ ರೂಪದಲ್ಲಿ ಪಾಲನ್ನು ಪಡೆದು ಮಗಳ ಪಾಲಿಗೆ 200 ಕೋಟಿ ರೂ ಕೊಟ್ಟ. ಎಂಒಯು ಪ್ರಕಾರ ಜಗನ್‌ಗೆ ಶೇ.60, ಮಗಳು ಶರ್ಮಿಳಾ ಶೇ.40 ಪಾಲು ಪಡೆದರೆ, ಎಂಒಯುಗೆ ಮುನ್ನ ಅವರು ಡಿವಿಡೆಂಡ್‌ನ ಅರ್ಧ ಮತ್ತು ಅರ್ಧವನ್ನು ತೆಗೆದುಕೊಳ್ಳುತ್ತಿದ್ದರು. ಏಕೆಂದರೆ ಅವರ ತಂದೆಗೂ ಸಮಾನ ಪಾಲು ಇತ್ತು. 2019 ರಲ್ಲಿ, ಜಗನ್ ಅವರು ಸಿಎಂ ಆದ ನಂತರ ಎರಡು ತಿಂಗಳಲ್ಲಿ ಆಸ್ತಿ ವಿಭಜಿಸುವ ಪ್ರಸ್ತಾಪ ಇಟ್ಟರು. ಜಗನ್, “ಮಕ್ಕಳು ದೊಡ್ಡವರಾಗಿದ್ದಾರೆ.. ನನಗೆ ಅಳಿಯಂದಿರು ಆಗುತ್ತಾರೆ.. ನಿಮಗೆ ಅಳಿಯ ಮತ್ತು ಸೊಸೆ ಇರುತ್ತಾರೆ.. ನಾವು ಒಟ್ಟಿಗೆ ಇದ್ದಂತೆ ಅವರು ಒಟ್ಟಿಗೆ ಇಲ್ಲದಿರಬಹುದು.. ಹಾಗಾಗಿ ಬೇರೆಯಾಗೋಣ ಎಂದರು. 2019ರವರೆಗೆ ಜೊತೆಗಿದ್ದ ಕುಟುಂಬ ಆಸ್ತಿ ವಿಚಾರದಲ್ಲಿ ಬೇರೆಯಾಗಲು ನಿರ್ಧರಿಸಿತು. ಆ ನಂತರ ವಿಜಯವಾಡದಲ್ಲಿ ನನ್ನ ಸಮ್ಮುಖದಲ್ಲಿ ಈ ಆಸ್ತಿಗಳನ್ನು ಜಗನ್ ಮತ್ತು ಶರ್ಮಿಳಾಗೆ ಹಂಚಿಕೆ ಮಾಡಲಾಗಿದೆ.

ಇಡಿ ಜಪ್ತಿ ಮಾಡದ ಶೇ.100 ರಷ್ಟು ಸರಸ್ವತಿ ಪವರ್ ಷೇರುಗಳು ಮತ್ತು ಶೇ.100 ಯಲಹಂಕದ ಆಸ್ತಿಯನ್ನು ಶರ್ಮಿಳಾ ಅವರಿಗೆ ನೀಡಲಾಗಿತ್ತು. ಭಾರತಿ ಸಿಮೆಂಟ್ಸ್, ಸಾಕ್ಷಿ ಮಾಧ್ಯಮ, ವೈಎಸ್‌ಆರ್ ಮನೆಯಲ್ಲಿ ಅವರ ಪಾಲು ಪ್ರಕರಣಗಳನ್ನು ವಿಲೇವಾರಿ ಮಾಡಿದ ನಂತರ ನೀಡಲಾಗುವುದು ಎಂದು ಅವರು ಹೇಳಿದ್ದರು. ಈ MOU ಆಗ 2019 ರಲ್ಲಿ ಬರೆದ MOU ಆಗಿದ್ದು, ಜಗನ್ ತಾನೇ ಓದಿ ಬರೆದ ಎಂಓಯು ಇದಾಗಿದೆ. ಮಗಳಿಗೆ 200 ಕೋಟಿ ಲಾಭಾಂಶವನ್ನು ನೀಡಲಾಯಿತು.

ಏಕೆಂದರೆ ಆಕೆ ಅದರ ಹಕ್ಕು ಹೊಂದಿದ್ದಾಳೆ. ಮಗಳಿಗೆ ಹಕ್ಕಿದೆ ಎಂಬ ಕಾರಣಕ್ಕೆ ಎಂಒಯುವನ್ನು ಅಧಿಕೃತವಾಗಿ ಬರೆಯಲಾಗಿದೆ. ಎಂಒಯುನಲ್ಲಿ ಮಗಳಿಗೆ ನೀಡಬೇಕಾದ ಆಸ್ತಿಗಳನ್ನು ಆಕೆಯ ಹಕ್ಕಾಗಿ ನೀಡಲಾಗಿದೆಯೇ ಹೊರತು ಉಡುಗೊರೆಯಾಗಿ ನೀಡಿಲ್ಲ ಎಂದು ವಿಜಯಮ್ಮ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಮಕ್ಕಳಿಬ್ಬರ ನಡುವಿನ ಸಮಸ್ಯೆಯನ್ನು ದೇವರೇ ಬಗೆಹರಿಸುತ್ತಾನೆ ಎಂದು ವಿಜಯಮ್ಮ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com