

ವಾರಣಾಸಿ: ಪವಿತ್ರ ಗಂಗಾ ನದಿಯಲ್ಲಿ ದೋಣಿಯಲ್ಲಿ ದೋಣಿಯಲ್ಲಿ ಇಫ್ತಾರ್ ಕೂಟ ನಡೆಸಿ, ಚಿಕನ್ ಬಿರಿಯಾನಿ ತಿಂದ ಆರೋಪದ ಮೇಲೆ ವಾರದ ಹಿಂದೆ ಬಂಧಿತರಾಗಿದ್ದ 14 ಮಂದಿಯ ಜಾಮೀನು ಅರ್ಜಿಯನ್ನು ವಾರಣಾಸಿಯ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಎಲ್ಲಾ 14 ಮಂದಿಯ ವಿರುದ್ಧ ಪವಿತ್ರ ಸ್ಥಳ ಅಪವಿತ್ರ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಮತ್ತು ಸಾರ್ವಜನಿಕರಿಗೆ ತೊಂದರೆ, ಜಲಮಾಲಿನ್ಯಕ್ಕೆ ಕಾರಣವಾದ ಆರೋಪಗಳನ್ನು ಮಾಡಲಾಗಿದೆ.
ಅಲ್ಲದೇ ಬೋಟ್ ಅನ್ನು ಬಲವಂತವಾಗಿ ವಶಪಡಿಸಿಕೊಂಡ ಬಗ್ಗೆಯೂ ಪೊಲೀಸರು ಆರೋಪದಲ್ಲಿ ಸೇರಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾದ ನಗರ ಘಟಕದ ಮುಖ್ಯಸ್ಥರಾಗಿರುವ ದೂರುದಾರ ರಜತ್ ಜೈಸ್ವಾಲ್ ಅವರ ಪರ ವಕೀಲ ಶಶಾಂಕ್ ಶೇಖರ್ ತ್ರಿಪಾಠಿ ಹೇಳಿದ್ದಾರೆ.
ಈ ಆರೋಪಗಳು ಗಂಭೀರ ಹಾಗೂ ಜಾಮೀನು ರಹಿತವಾಗಿವೆ ಎಂಬುದನ್ನು ಪರಿಗಣಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಯಾದವ್, ಈ ಹಂತದಲ್ಲಿ ಜಾಮೀನು ನೀಡಲು ಸಾಕಷ್ಟು ಆಧಾರಗಳಿಲ್ಲ ಎಂದು ಆದೇಶ ಹೊರಡಿಸಿರುವುದಾಗಿ ತ್ರಿಪಾಠಿ ಹೇಳಿದರು.
ಆರೋಪಿಗಳ ಜಾಮೀನು ಅರ್ಜಿಗೆ ಪ್ರಾಸಿಕ್ಯೂಷನ್ ತೀವ್ರ ವಿರೋಧ ವ್ಯಕ್ತಪಡಿಸಿದರು. ಆರೋಪಿಗಳು ಗಂಭೀರ ಅಪರಾಧ ಮಾಡಿದ್ದು, ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಆರೋಪಿಗಳಿಗೆ ಜಾಮೀನು ನೀಡುವುದರಿಂದ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬಹುದು ಎಂದು ಅವರು ವಾದಿಸಿರುವುದಾಗಿ ತ್ರಿಪಾಠಿ ಹೇಳಿದರು.
ಘಟನೆಯ ವಿಡಿಯೋ ಕಳೆದ ಸೋಮವಾರ ಆನ್ಲೈನ್ನಲ್ಲಿ ವೈರಲ್ ಆದ ನಂತರ 14 ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಜೈಸ್ವಾಲ್ ಅದೇ ದಿನ ಲಿಖಿತ ದೂರನ್ನು ದಾಖಲಿಸಿದ್ದಾರೆ. ನ್ಯಾಯಾಲಯ ಗುರುವಾರ 14 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.
Advertisement