

ನವದೆಹಲಿ: ಉದ್ಯಮ ಕ್ಷೇತ್ರದ ಕಡೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಲಕ್ಷ್ಯ ತೋರಿಸುತ್ತಿದೆ ಎಂದು ರಾಜ್ಯಸಭೆಯಲ್ಲಿ ತೀವ್ರವಾಗಿ ಟೀಕಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯದಲ್ಲಿನ ಉದ್ಯಮಗಳನ್ನು ಪುನರುಜ್ಜೀವನಗೊಳಿಸಲು ಮೋದಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ರಾಜ್ಯಸಭೆಯಲ್ಲಿ ಅನುದಾನ ಮಸೂದೆ (ಸಂಖ್ಯೆ 2) ಕುರಿತ ಚರ್ಚೆಯಲ್ಲಿ ಭಾಗವಹಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ತಾವು ಅಧಿಕಾರಕ್ಕೆ ಹಂಬಲಿಸುವ ರಾಜಕಾರಣಿ ಅಲ್ಲ ಎಂದು ಹೇಳಿ, ತಮ್ಮ ಪಕ್ಷವನ್ನು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳಿಸಬೇಕೆಂಬ ಕೆಲವರ ಬೇಡಿಕೆಯನ್ನು ತಿರಸ್ಕರಿಸಿದ್ದಾಗಿ ಹೇಳಿದರು.
ಎಲ್ಪಿಜಿ ಕೊರತೆಯ ವಿಚಾರದಲ್ಲಿ ಪ್ರಧಾನಿಯನ್ನು ಟೀಕಿಸಬಾರದು ಎಂದು ವಿವಿಧ ಪಕ್ಷಗಳ ಸದಸ್ಯರಿಗೆ ಅವರು ಮನವಿ ಮಾಡಿದರು. ಪಶ್ಚಿಮ ಏಷ್ಯಾ ಸಂಕಷ್ಟವನ್ನು ಹೇಗೆ ಪರಿಹರಿಸಬೇಕು ಎಂಬುದರಲ್ಲಿ ಮಾರ್ಗದರ್ಶನ ನೀಡಬಲ್ಲವರು ಪ್ರಧಾನಿ ನರೇಂದ್ರ ಮೋದಿ ಮಾತ್ರ ಎಂದು ಹೇಳಿದರು.
ಕರ್ನಾಟಕದಲ್ಲಿ ಉದ್ಯಮಗಳನ್ನು ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿದ ದೇವೇಗೌಡರು, ಕರ್ನಾಟಕಕ್ಕಾಗಿ ಏನಾದರೂ ಮಾಡಿ. ಈ ಕರ್ನಾಟಕ ಸರ್ಕಾರದ ಬಗ್ಗೆ ಚಿಂತಿಸಬೇಡಿ ಎಂದು ಹೇಳಿದರು.
ರಾಜ್ಯದ ಪರಿಸ್ಥಿತಿಯನ್ನು ಉಲ್ಲೇಖಿಸಿ, ಕರ್ನಾಟಕದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಹೇಗಿದೆ ಎಂಬುದನ್ನು ನೋಡಿದರೆ, ದೇವರೇ ಕರ್ನಾಟಕವನ್ನು ಉಳಿಸಬೇಕು. ನಮ್ಮ ಮಹಾನ್ ನಾಯಕ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವನ್ನು ಉಳಿಸಿ ಎಂದು ಹೇಳಿದರು.
ತಮ್ಮ ಪುತ್ರ, ಕೇಂದ್ರ ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳನ್ನು ಸ್ಥಾಪಿಸಿದ್ದಾಗಿ ಹೇಳಿದರು. ಅವರು ಅಧಿಕಾರ ತ್ಯಜಿಸಿದ ನಂತರ, ಕೇವಲ ಒಂದು ಸಣ್ಣ ಘಟಕ ಮಾತ್ರ ಉಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.
Advertisement