

ಮಧ್ಯ ಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ನಿನ್ನೆ ಗುರುವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟು ಸುಮಾರು 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಉರುಳಿದೆ.
ಈ ಬಸ್ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಭಾಗವಹಿಸಿದ್ದ ಕಾರ್ಯಕ್ರಮದಿಂದ ಮರಳುತ್ತಿತ್ತು. ಅಧಿಕಾರಿಗಳ ಪ್ರಕಾರ, ಈ ಘಟನೆ ನಿನ್ನೆ ಸಾಯಂಕಾಲ ಸುಮಾರು 7.15ರ ವೇಳೆಗೆ ನಾಗ್ಪುರ ಹೆದ್ದಾರಿಯ ಉಮ್ರಾನಾಲಾ ಗ್ರಾಮದ ಬಳಿ, ಜಿಲ್ಲಾಧಿಕಾರಿ ಕೇಂದ್ರದಿಂದ ಸುಮಾರು 25 ಕಿಮೀ ದೂರದಲ್ಲಿರುವ ಮೊಖೇಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 45ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಒಂದು ಲೋಡಿಂಗ್ ಮಿನಿ ಟ್ರಕ್ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಉರುಳಿದೆ.
ಅಪಘಾತದಲ್ಲಿ ಆರು ಪುರುಷರು, ಮೂರು ಮಹಿಳೆಯರು ಮತ್ತು ಒಬ್ಬ ಮಗು ಮೃತಪಟ್ಟಿದ್ದಾರೆ. ಛಿಂದ್ವಾರಾ ಜಿಲ್ಲಾಧಿಕಾರಿ ಹರೇಂದ್ರ ನಾರಾಯಣ ಅಪಘಾತದ ವಿವರಗಳನ್ನು ನೀಡಿ, ಮೃತರಲ್ಲಿ ಎಂಟು ಮಂದಿ ಬಸ್ ಪ್ರಯಾಣಿಕರು ಹಾಗೂ ಪಿಕ್-ಅಪ್ ವಾಹನದ ಚಾಲಕ ಮತ್ತು ಕ್ಲೀನರ್ ಸೇರಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಗಾಯಗೊಂಡವರಲ್ಲಿ 3–4 ಜನರ ಸ್ಥಿತಿ ಗಂಭೀರವಾಗಿದ್ದು, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ದುರಂತದ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಅಪಘಾತವು ಛಿಂದ್ವಾರಾ ನಗರದ ಪೊಲೀಸ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಿಂದ ಬಸ್ ಮರಳುತ್ತಿದ್ದ ವೇಳೆ ಸಂಭವಿಸಿದೆ. ಆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಾದವ್ 105 ಯೋಜನೆಗಳನ್ನು ಉದ್ಘಾಟಿಸಿ, ಇನ್ನೂ ಹಲವು ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಪೊಲೀಸ್ ಅಧೀಕ್ಷಕ ಅಜಯ್ ಪಾಂಡೆ ಅವರು ಅಪಘಾತದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಸ್ಟೇಷನ್ ಹೌಸ್ ಆಫೀಸರ್ ಅಶೀಶ್ ಕುಮಾರ್ ಅವರು ಡಿಕ್ಕಿ ಸಂಭವಿಸಿದ ವೇಳೆ ಬಸ್ನಲ್ಲಿ 40 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ತಿಳಿಸಿದ್ದಾರೆ.
ಗಾಯಾಳುಗಳ ಚಿಕಿತ್ಸೆಗಾಗಿ ಜಬಲ್ಪುರ ಮತ್ತು ನಾಗ್ಪುರದಿಂದ ವೈದ್ಯರ ತಂಡಗಳನ್ನು ಕಳುಹಿಸುವಂತೆ ಮುಖ್ಯಮಂತ್ರಿ ಯಾದವ್ ನಿರ್ದೇಶನ ನೀಡಿದ್ದು, ಛಿಂದ್ವಾರಾದ ಪಾಲಕ ಸಚಿವ ರಾಕೇಶ್ ಸಿಂಗ್ ಅವರಿಗೆ ತಕ್ಷಣ ಜಿಲ್ಲೆಗೆ ತೆರಳುವಂತೆ ಸೂಚಿಸಿದ್ದಾರೆ.
Advertisement