

ಮುರ್ಷಿದಾಬಾದ್: ರಾಮನವಮಿ ಮೆರವಣಿಗೆ ವೇಳೆ 2 ಸಮುದಾಯಗಳ ನಡುವೆ ಭಾರಿ ಘರ್ಷಣೆ ಸಂಭವಿಸಿದ್ದು, 144 ಸೆಕ್ಷನ್ ಜಾರಿ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನ ರಘುನಾಥಗಂಜ್ನಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ಘರ್ಷಣೆ ಭುಗಿಲೆದ್ದಿದ್ದು, ಮೂರು ಪ್ರತ್ಯೇಕ ಸ್ಥಳಗಳಲ್ಲಿ ಘರ್ಷಣೆ ಸಂಭವಿಸಿದೆ. ನೋಡ ನೋಡುತ್ತಲೇ ಹಿಂಸಾರೂಪ ಪಡೆದುಕೊಂಡಿದೆ.
ಘರ್ಷಣೆ ವೇಳೆ ದಾಳಿಕೋರರು ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ಮಾಡಿದ್ದು, ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿ ಬೆಂಕಿ ಹಾಕಿದ್ದಾರೆ. ಅಂತೆಯೇ ಘಟನಾ ಪ್ರದೇಶದಲ್ಲಿ ಧ್ವಂಸ, ಲೂಟಿ ಮತ್ತು ಬೆಂಕಿ ಹಚ್ಚುವ ಕೃತ್ಯಗಳು ನಡೆದಿವೆ. ಈ ವೇಳೆ ಸಂಭವಿಸಿದ ಸಂಘರ್ಷದಲ್ಲಿ ಹಲವಾರು ವ್ಯಕ್ತಿಗಳು ಗಾಯಗೊಂಡಿದ್ದಾರೆ.
ಧ್ವಜ ಹಾಕುವ ವಿಚಾರಕ್ಕೆ ಗಲಾಟೆ, ಕಲ್ಲು ತೂರಾಟ
ಮೂಲಗಳ ಪ್ರಕಾರ ರಾಮನವಮಿ ಮೆರವಣಿಗೆ ವೇಳೆ ಭಗವಾ ಧ್ವಜ ಮತ್ತು ಮುಸ್ಲಿಮರ ಧ್ವಜ ಹಾಕುವ ವಿಚಾರಕ್ಕೆ ಗಲಾಟೆಯಾಗಿದ್ದು, ಇದು ಉಭಯ ಸಮುದಾಯಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಇದೇ ವೇಳೆ ಒಂದು ಸಮುದಾಯದ ಮೇಲೆ ಕಲ್ಲು ತೂರಾಟ ನಡೆದಿದೆ. ಬಳಿಕ ನೋಡ ನೋಡುತ್ತಲೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಟಕ್ಕೆ ಇಳಿದಿದ್ದಾರೆ. ಈ ವೇಳೆ ಹಿಂಸಾಚಾರ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿಜೆ ಸೌಂಡ್ ವಿಚಾರಕ್ಕೂ ಗಲಾಟೆ
ಮಾತ್ರವಲ್ಲದೇ ರಾಮನವಮಿ ಮೆರವಣಿಗೆ ವೇಳೆ ಹಾಕಲಾಗಿದ್ದ ಡಿಜೆ ಸೌಂಡ್ ವಿಚಾರಕ್ಕೂ ಒಂದು ಸಮುದಾಯ ತಗಾದೆ ತೆಗೆದು ಗಲಾಟೆ ಮಾಡಿದೆ ಎಂದು ಹೇಳಲಾಗಿದೆ. ಡಿಜೆಸೌಂಡ್ ಪರಿಕರಗಳನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಮೇಲೆ ಕಲ್ಲು ತೂರುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಭದ್ರತಾ ಪಡೆಗಳು ಸ್ಥಳಕ್ಕೆ ದೌಡು.. ಸೆಕ್ಷನ್ 144 ಜಾರಿ
ವಿಚಾರ ತಿಳಿಯುತ್ತಲೇ ಭದ್ರತಾ ಪಡೆಗಳು ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡರು. ಅಂತೆಯೇ ಇಡೀ ಪಟ್ಟಣದಾದ್ಯಂತ ಅಂತೆಯೇ ಸೆಕ್ಷನ್ 144 ಜಾರಿ ಮಾಡಿ ನಾಲ್ಕು ಅಥವಾ ಹೆಚ್ಚಿನ ಜನರು ಸೇರುವುದನ್ನು ನಿಷೇಧಿಸಿದ್ದಾರೆ.
15 ಮಂದಿಗೆ ಗಾಯ, 12 ಮಂದಿ ಬಂಧನ
ಇನ್ನು ಈ ಘರ್ಷಣೆಯಲ್ಲಿ ಈ ವರೆಗೂ ಒಟ್ಟು 15 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಅಂತೆಯೇ ಪ್ರಕರಣ ಸಂಬಂಧ 12 ಜನರನ್ನು ಬಂಧಿಸಲಾಗಿದೆ. ಘಟನಾ ಪ್ರದೇಶಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಸಿಸಿಟಿವಿ ಆಧಾರಿತ ಆರೋಪಿಗಳ ಗುರುತಿಸುವಿಕೆ ಕಾರ್ಯ ಮುಂದುವರೆದಿದೆ, ಹೆಚ್ಚಿನ ಬಂಧನಗಳು ನಡೆಯುವ ಸಾಧ್ಯತೆ ಇದೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆಯಾದರೂ ಉದ್ವಿಗ್ನವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement