

ಚೆನ್ನೈ: ಏಪ್ರಿಲ್ 23 ರಂದು ನಡೆಯುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ಆಡಳಿತ ಪಕ್ಷದ 164 ಅಭ್ಯರ್ಥಿಗಳ ಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದರು. ಪ್ರಮುಖ ಸಚಿವರು ಮತ್ತು ಹಿರಿಯರ ನಾಯಕರು ಹಾಗೂ 60ಕ್ಕೂ ಹೆಚ್ಚು ಹೊಸ ಮುಖಗಳನ್ನು ಕಣಕ್ಕಿಳಿಸಿದ್ದಾರೆ.
ಇಂದು ಪಕ್ಷದ ಪ್ರಧಾನ ಕಚೇರಿಯಾದ ಅನ್ನಾ ಅರಿವಲಯನ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, ಸೀಟು ಹಂಚಿಕೆಯನ್ನು ಅಂತಿಮಗೊಳಿಸುವಲ್ಲಿ ಯಾವುದೇ ವಿಳಂಬವಿಲ್ಲ. ಆದರೆ ಮಿತ್ರಪಕ್ಷಗಳೊಂದಿಗೆ ತಾಳ್ಮೆಯಿಂದ ಚರ್ಚಿಸಲು ಸಮಯ ಬೇಕಾಯಿತು ಎಂದು ಹೇಳಿದ್ದಾರೆ.
ಸಿಎಂ ಸ್ಟಾಲಿನ್ ಅವರು ನಾಲ್ಕನೇ ಬಾರಿಗೆ ಕೊಳತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು 2021 ರಲ್ಲಿ ಚೆಪಾಕ್ನಲ್ಲಿ ತಮ್ಮ ಚೊಚ್ಚಲ ಚುನಾವಣೆಯ ನಂತರ ಈಗ ಮರು ಆಯ್ಕೆ ಬಯಸುತ್ತಿದ್ದಾರೆ.
ಇತ್ತೀಚೆಗೆ ಡಿಎಂಕೆ ಸೇರಿರುವ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಭಾವಿ ನಾಯಕ ಓ. ಪನ್ನೀರ್ಸೆಲ್ವಂ ಅವರನ್ನು ಬೋಡಿನಾಯಕನೂರಿನಿಂದ ಕಣಕ್ಕಿಳಿಸಲಾಗಿದ್ದು, ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರು ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸುತ್ತಿದ್ದಾರೆ.
ಬೋಡಿನಾಯಕನೂರು ಶಾಸಕರಾಗಿದ್ದ ಪನ್ನೀರ್ಸೆಲ್ವಂ ಅವರು ಡಿಎಂಕೆ ಸೇರಿದ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅದೇ ರೀತಿ, ಐಟಿ ಸಚಿವ ಪಳನಿವೇಲ್ ತಿಯಾಗ ರಾಜನ್ ಅವರು ಮಧುರೈ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಮತ್ತು ಹಣಕಾಸು ಸಚಿವ ತಂಗಮ್ ತೆನ್ನರಸು ಅವರು ವಿರುಧುನಗರ ಜಿಲ್ಲೆಯ ತಿರುಚುಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಚಿವರಾದ ದುರೈ ಮುರುಗನ್ (ಡಿಎಂಕೆ ಪ್ರಧಾನ ಕಾರ್ಯದರ್ಶಿ), ಕೆ.ಎನ್. ನೆಹರು, ಅನ್ಬಿಲ್ ಮಹೇಶ್ ಪೊಯ್ಯಮೋಳಿ, ತಂಗಮ್ ತೆನ್ನರಸು, ಮಾ. ಸುಬ್ರಮಣಿಯನ್ ಮತ್ತು ಇ.ವಿ. ವೇಲು ಅವರಿಗೂ ಟಿಕೆಟ್ ನೀಡಲಾಗಿದೆ.
Advertisement