

ನವದೆಹಲಿ: ಪಂಜರಾಜ್ಯ ಚುನಾವಣೆ ಫಲಿತಾಂಶ ನಿನ್ನೆ ಹೊರಬಿದ್ದಿತ್ತು. ಐದು ರಾಜ್ಯಗಳ ಚುನಾವಣೆಯಲ್ಲಿ ಎರಡರಲ್ಲಿ ಬಿಜೆಪಿ, ಒಂದರಲ್ಲಿ ಬಿಜೆಪಿ ನೇತೃತ್ವದ NDA, TVK ಮತ್ತು ಯುಡಿಎಫ್ ಗೆಲುವು ಸಾಧಿಸಿವೆ. ಪಶ್ಚಿಮ ಬಂಗಾಳದಲ್ಲಿ TMC ಹೀನಾಯ ಸೋಲು ಕಂಡಿದ್ದಲ್ಲದೆ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹ ಭವಾನಿಪುರದಲ್ಲಿ ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ ವಿರುದ್ಧ 15 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋತಿದ್ದಾರೆ.
ಇಲ್ಲಿ ಮಮತಾ ಬ್ಯಾನರ್ಜಿ ಸೋಲು ಕಾಂಗ್ರೆಸ್ ನ ಅನಭಿಷಿಕ್ತ ನಾಯಕ ರಾಹುಲ್ ಗಾಂಧಿಗೆ ಹೇಗೆ ವರದಾನವಾಯಿತು ಎಂಬುದನ್ನು ನೋಡೋಣ... ಕೇಂದ್ರದಲ್ಲಿ ವಿಪಕ್ಷಗಳೆಲ್ಲವೂ ಸೇರಿ INDIA ಕೂಟವನ್ನು ಮಾಡಿಕೊಂಡಿದೆ. ಈ ಕೂಟದಲ್ಲಿ ಅತೀ ಹೆಚ್ಚು ಸಂಸದರನ್ನು ಹೊಂದಿರುವ ಕಾಂಗ್ರೆಸ್ ಅಗ್ರಗಣ್ಯ ಸ್ಥಾನದಲ್ಲಿದೆ. ಆದರೆ ಕೆಲವು ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಇಂಡಿ ಕೂಟ ಕಳಪೆ ಪ್ರದರ್ಶನ ಕಂಡಿದೆ. ಅಲ್ಲದೆ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ 90ಕ್ಕೂ ಹೆಚ್ಚು ಚುನಾವಣೆಗಳಲ್ಲಿ ಸೋಲು ಕಂಡಿರುವುದು ಇಂಡಿ ಕೂಟದಲ್ಲಿನ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ಸೋಲಿನ ಸರದಾರ ರಾಹುಲ್ ಗಾಂಧಿಗೆ ಪರ್ಯಾಯವಾಗಿ ಮತ್ತೊಂದು ಮುಖಕ್ಕೆ ಇಂಡಿ ಕೂಟ ಹುಡುಕಾಟ ನಡೆಸಿತ್ತು. ಮೋದಿಗೆ ಟಕ್ಕರ್ ಕೊಡುವಂತ ತಾಕತ್ತು ಮಮತಾ ಬ್ಯಾನರ್ಜಿಗೆ ಇದೆ ಅವರನ್ನೇ ಇಂಡಿ ಕೂಟದ ಮುಖವನ್ನಾಗಿ ಮಾಡಬೇಕೆಂಬುದು ಹಲವು ನಾಯಕರ ಮನೋಭಿಲಾಷೆಯಾಗಿತ್ತು. ಅದಕ್ಕೆ ತಕ್ಕಂತೆ ಮಮತಾ ಬ್ಯಾನರ್ಜಿ ಸಹ 2026ರಲ್ಲಿ ಪಶ್ಚಿಮ ಬಂಗಾಳವನ್ನು ಗೆದ್ದು ನಂತರ ಕೇಂದ್ರಕ್ಕೆ ಲಗ್ಗೆಯಿಡುವುದಾಗಿ ಪ್ರತಿಜ್ಞೆ ಮಾಡಿದ್ದರು. ಆದರೆ ಪಶ್ಚಿಮ ಬಂಗಾಳದ ಸೋಲು ಮಮತಾ ಬ್ಯಾನರ್ಜಿಯನ್ನು ರಾಜಕೀಯದಿಂದ ದೂರವಿಡುವಂತೆ ಮಾಡಿದೆ. ಇದು ರಾಹುಲ್ ಗಾಂಧಿಯ ಪಟ್ಟಕ್ಕೆ ಇದ್ದ ಸವಾಲು ನಿವಾರಣೆಯಾದತಂತೆ ಮಾಡಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ತೀವ್ರ ಮುಖಭಂಗವಾಗಿದೆ. 293 ಕ್ಷೇತ್ರಗಳಲ್ಲಿ ಬಿಜೆಪಿ 207 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಟಿಎಂಸಿ 80 ಕ್ಷೇತ್ರಗಳನ್ನು ಮಾತ್ರ ಗೆದ್ದುಕೊಂಡಿದೆ. ಈ ಮಧ್ಯೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲು ಕಂಡಿದ್ದಾರೆ.
Advertisement