

ನವದೆಹಲಿ: ಈ ಹಿಂದೆ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಸಂಸದರಿಗೆ ಕಿರುಕುಳ ನೀಡಲಾಗುತ್ತಿದೆ ಎಂದ ಗಂಭೀರ ಆರೋಪ ಕೇಳಿಬಂದಿದ್ದು. ಈ ಸಂಬಂಧ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.
ಹೌದು.. ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ಇತರೆ ಸಂಸದರು ಮಂಗಳವಾರ ಆಪ್ ನೇತೃತ್ವದ ಪಂಜಾಬ್ ಸರ್ಕಾರದ ವಿರುದ್ಧ “ಪ್ರತೀಕಾರ ರಾಜಕೀಯ” ನಡೆಸಲಾಗುತ್ತಿದೆ ಆರೋಪಿಸಿದ್ದು, ಮಾತ್ರವಲ್ಲದೇ ಇತ್ತೀಚೆಗೆ ಪಕ್ಷ ತೊರೆದು ರಾಜ್ಯಸಭೆಯಲ್ಲಿ ಬಿಜೆಪಿಗೆ ವಿಲೀನವಾದ ಸಂಸದರನ್ನು ಗುರಿಯಾಗಿಸಲು ರಾಜ್ಯ ಯಂತ್ರಾಂಗವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಘವ್ ಚಡ್ಡಾ ತಮ್ಮೊಂದಿಗೆ ಇನ್ನೂ ಮೂವರು ಸಂಸದರೊಂದಿಗೆ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಎಎಪಿ ತೊರೆದ ನಂತರ ತಮ್ಮ ಮೇಲೆ ಕಿರುಕುಳ ಮತ್ತು “ರಾಜಕೀಯ ಪ್ರೇರಿತ” ಕ್ರಮಗಳು ನಡೆಯುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು ಎನ್ನಲಾಗಿದೆ.
ಪಕ್ಷದಲ್ಲಿದ್ದಾಗ ಸಂಸ್ಕಾರಿಗಳು, ಈಗ ಭ್ರಷ್ಟರೇ?
“Aam Aadmi Party ಪಕ್ಷದೊಂದಿಗೆ ಅಸಮ್ಮತಿ ವ್ಯಕ್ತಪಡಿಸುವ ತಮ್ಮ ಸಂವಿಧಾನಿಕ ಹಕ್ಕನ್ನು ಉಪಯೋಗಿಸಿಕೊಂಡು ಪಕ್ಷ ತೊರೆದ ಎಲ್ಲಾ ಸಂಸದರು ಮತ್ತು ಈ ಸಂಬಂಧ ನಡೆದ ಘಟನೆಗಳನ್ನೆಲ್ಲ ಇಂದು ಭಾರತದ ರಾಷ್ಟ್ರಪತಿಗೆ ಮಂಡಿಸಿದ್ದೇವೆ.
ನಾವು ವಿಧೇಯರಾಗಿದ್ದಾಗ ನಮ್ಮನ್ನು ಸಂಸ್ಕಾರಿಗಳೆಂದು ಕರೆಯಲಾಗುತ್ತಿತ್ತು. ಆದರೆ ನಾವು ಪಕ್ಷ ತೊರೆದ ಕ್ಷಣದಿಂದಲೇ ನಮ್ಮನ್ನು ಭ್ರಷ್ಟರೆಂದು ಕರೆಯಲಾಗುತ್ತಿದೆ ಎಂದು ಚಡ್ಡಾ ಅವರು ಸಭೆಯ ನಂತರ ವರದಿಗಾರರಿಗೆ ಹೇಳಿದರು.
ಬಿಜೆಪಿಗೆ ಸೇರಿರುವ ಎಎಪಿ ಮಾಜಿ ಸಂಸದರು ರಾಜ್ಯ ಸಂಸ್ಥೆಗಳ ಮೂಲಕ ಬೆದರಿಕೆ ಮತ್ತು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಇತರರ ಮೇಲೆ ಪ್ರತೀಕಾರ ರಾಜಕೀಯ ಆರೋಪ ಮಾಡುವ ಆಮ್ ಆದ್ಮಿ ಪಕ್ಷವೇ ಈಗ ಅಪಾಯಕಾರಿ ಪ್ರತೀಕಾರ ರಾಜಕೀಯದಲ್ಲಿ ತೊಡಗಿದೆ.
ಏಪ್ರಿಲ್ 24ರಂದು ನಾವು ಎಎಪಿ ತೊರೆದು ಬಿಜೆಪಿಗೆ ವಿಲೀನವಾದ ನಂತರದಿಂದಲೇ ನಮ್ಮ ಸಂಸದರನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ಕಿರುಕುಳ ನೀಡಲಾಗುತ್ತಿದೆ. ಮಾಜಿ ಕ್ರಿಕೆಟಿಗ ಮತ್ತು ಸಂಸದ ಹರ್ಭಜನ್ ಸಿಂಗ್ ಮೇಲೆ ದಾಳಿ ನಡೆದಿದೆ. ಇದೇ ವೇಳೆ ಉದ್ಯಮಿ ಮತ್ತು ಸಂಸದ ರಾಜೇಂದ್ರ ಗುಪ್ತ ಅವರ ವ್ಯವಹಾರ ಕಾರ್ಯಾಚರಣೆಗಳಿಗೆ ಅಡಚಣೆ ಉಂಟುಮಾಡಲಾಗುತ್ತಿದೆ ಎಂದು ಅವರು ಹೇಳಿದರು.
Advertisement