

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ತಿರುವು ಸಿಕ್ಕಿದ್ದು, ಬಹುಮತದ ಕೊರತೆ ಎದುರಿಸುತ್ತಿರುವ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ ವಿಜಯ್ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ.
ದಳಪತಿ ವಿಜಯ್ ಅವರು ಇಂದು ಸಂಜೆ ಮೂರನೇ ಬಾರಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು ಮತ್ತು ತಮಗೆ 118 ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಹೀಗಾಗಿ ವಿಜಯ್ ನಾಳೆ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿತ್ತು.
ಆದರೆ ಲೋಕಭವನದ ಮೂಲಗಳು ಎನ್.ಡಿ.ಟಿ.ವಿ.ಗೆ ತಿಳಿಸಿರುವ ಪ್ರಕಾರ, ನಟ-ರಾಜಕಾರಣಿ ವಿಜಯ್ ಅವರಿಗೆ ಸಂಖ್ಯಾಬಲ ಇಲ್ಲ. ಬಹುಮತಕ್ಕೆ ಅಗತ್ಯವಾದ 118 ಶಾಸಕರ ಬೆಂಬಲ ಸಾಬೀತುಪಡಿಸಲು ವಿಫಲರಾದ ಕಾರಣ ಅವರಿಗೆ ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಲಾಗಿಲ್ಲ.
ಟಿವಿಕೆಗೆ ಬೆಂಬಲ ನೀಡುವಂತೆ ವಿಸಿಕೆ, ಎಎಂಎಂಕೆ ಮತ್ತು ಐಯುಎಂಎಲ್ ಶಾಸಕರೊಂದಿಗೆ ಬಿರುಸಿನ ಮಾತುಕತೆ ನಡೆಸಿದರೂ, ವಿಜಯ್ ಅವರಿಗೆ ಅಗತ್ಯವಿರುವ ಬೆಂಬಲವನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸದ್ಯ ವಿಜಯ್ ಅವರು 116 ಶಾಸಕರ ಬೆಂಬಲ ಮಾತ್ರ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ 23 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ, ಸರ್ಕಾರ ರಚಿಸಲು ಡಿಎಂಕೆ ಮಿತ್ರಪಕ್ಷಗಳಾದ ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ ಅವರ ಬೆಂಬಲವನ್ನು ಕೋರಿತ್ತು.
ದಳಪತಿ ವಿಜಯ್ ನೇತೃತ್ವದ ಟಿವಿಕೆಗೆ ಈಗಾಗಲೇ ಕಾಂಗ್ರೆಸ್ ಕಂಡೀಷನಲ್ ಬೆಂಬಲ ನೀಡಿದೆ. ಇದೀಗ ಸಿಪಿಐ, ಸಿಪಿಎಂ ಬೆಂಬಲ ಘೋಷಿಸಿದ್ದು, ವಿಸಿಕೆ ಹಾಗೂ ಐಯುಎಂಎಲ್ ಇನ್ನೂ ಬೆಂಬಲ ಘೋಷಿಸಿಲ್ಲ.
Advertisement