

ಕೋಲ್ಕತಾ: ಬಿಜೆಪಿ ನಾಯಕ ಸುವೇಂದು ಅಧಿಕಾರಿ ಶನಿವಾರ ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಪಶ್ಚಿಮ ಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು ಈ ವಿಶೇಷ ಕಾರ್ಯಕ್ರಮದಲ್ಲಿ ಬಂಗಾಳಿ ಸೊಗಡು ಎಲ್ಲರ ಗಮನ ಸೆಳೆಯಿತು.
ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್ಎನ್ ರವಿ ಅವರು ಬಿಜೆಪಿಯ ಸುವೇಂದು ಅಧಿಕಾರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಆ ಮೂಲಕ ಪಶ್ಚಿಮ ಬಂಗಾಳದಲ್ಲಿ ರಾಜ್ಯದಲ್ಲಿ ಹೊಸ ರಾಜಕೀಯ ಯುಗಕ್ಕೆ ಚಾಲನೆ ನೀಡಿದಂತಾಗಿದೆ.
ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಎನ್ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಗಣ್ಯ ರಾಜಕೀಯ ನಾಯರು ಉಪಸ್ಥಿತರಿದ್ದರು.
ಪರೇಡ್ ಮೈದಾನದಲ್ಲಿ ಬಂಗಾಳಿ ಸೋಗಡು
ಆದರೆ ಈ ಐತಿಹಾಸಿಕ ಸಮಾರಂಭಕ್ಕೆ ವಿಶಿಷ್ಟ ಬಂಗಾಳಿ ಸೊಗಡು ಕೂಡ ಸೇರಿಸಲಾಗಿತ್ತು. ಪ್ರಮಾಣವಚನ ಸಮಾರಂಭ ನಡೆದ ಸ್ಥಳದಲ್ಲಿ ಸುಮಾರು 20 ಝಲ್ ಮುರಿ ಅಂಗಡಿಗಳು ಮತ್ತು ಹಲವು ಸಿಹಿತಿಂಡಿ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.
ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದ ವೇಳೆ ಜಾರ್ಗ್ರಾಂನಲ್ಲಿ ರಸ್ತೆಬದಿ ಅಂಗಡಿಯಲ್ಲಿ ಪ್ರಧಾನಿ ಮೋದಿ ಜನಪ್ರಿಯ ಬಂಗಾಳಿ ತಿಂಡಿ ‘ಝಲ್ ಮುರಿ’ ಸವಿದ ನಂತರ ಈ ತಿಂಡಿ ದೇಶವ್ಯಾಪಿ ಗಮನ ಸೆಳೆದಿತ್ತು. ಆಹಾರ ಮಳಿಗೆಗಳನ್ನು ಮೀರಿಸಿ, ಕೇಸರಿ ಪಾಳಯವು ಇನ್ನಷ್ಟು ದೊಡ್ಡ ರಾಜಕೀಯ ಸಂದೇಶವನ್ನು ರವಾನಿಸಲು ಪ್ರಯತ್ನಿಸಿದಂತೆ ಕಾಣಿಸಿತು.
ಜಾನಪದ ಕಲಾ ತಂಡಗಳು
ಧೋತಿ-ಪೈಜಾಮಾ ಧರಿಸಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಈ ಐತಿಹಾಸಿಕ ಕ್ಷಣವನ್ನು ನೇರವಾಗಿ ನೋಡುವುದಕ್ಕಾಗಿ ಕೆನಡಾದಿಂದ ಬಂದಿದ್ದಾಗಿ ಹೇಳಿದರು. ವಿಶಾಲ ಬ್ರಿಗೇಡ್ ಪೆರೇಡ್ ಮೈದಾನವು ಉತ್ಸವದ ವಾತಾವರಣವನ್ನು ತಾಳಿತ್ತು. ಜನಪದ ಪ್ರದರ್ಶನಗಳು ಮತ್ತು ಭಕ್ತಿಗೀತೆಗಳು ಪ್ರಮಾಣವಚನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದವು. ಸಾಂಪ್ರದಾಯಿಕ ಛೌ ನೃತ್ಯ ತಂಡಗಳು ಹಾಗೂ ಆದಿವಾಸಿ ನೃತ್ಯ ಪ್ರದರ್ಶನಗಳು ಜನರನ್ನು ಮನರಂಜಿಸಿತು. ಈ ನಡುವೆ ಬೆಂಬಲಿಗರು ನಿರಂತರವಾಗಿ ಸಮಾರಂಭದ ಸ್ಥಳಕ್ಕೆ ಹರಿದು ಬರುತ್ತಲೇ ಇದ್ದರು.
ಪರೇಡ್ ಮೈದಾನದಲ್ಲಿ ಸಾಂಸ್ಕೃತಿಕ ಪರಂಪರೆ
ಮುಖ್ಯ ವೇದಿಕೆಯ ಹಿನ್ನೆಲೆಯು ಪಶ್ಚಿಮ ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿತು. ದಕ್ಷಿಣೇಶ್ವರ್ ದೇವಸ್ಥಾನ, ದುರ್ಗಾ ದೇವಿ ಹಾಗೂ ರಾಜ್ಯದ ಸಾಂಪ್ರದಾಯಿಕ ಗುರುತುಗಳನ್ನು ಪ್ರತಿನಿಧಿಸುವ ಕಲಾತ್ಮಕ ವಿನ್ಯಾಸಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಗಿತ್ತು.
ಡೊಳ್ಳು ಬಾರಿಸುತ್ತಾ ಹಾಗೂ ನೃತ್ಯಮಾಡುತ್ತಾ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು. ರಾಜ್ಯದಲ್ಲಿ ಆಡಳಿತ ಬದಲಾವಣೆಯನ್ನು ಸೂಚಿಸುವ ರಾಜಕೀಯ ಹಬ್ಬವೆಂದು ಅನೇಕರು ಈ ಸಂದರ್ಭವನ್ನು ಆಚರಿಸಿದರು.
Advertisement