

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ ಅಧಿಕಾರದ ಗುದ್ದುಗೆ ಏರುತ್ತಲೇ ಖ್ಯಾತ ಚಲನಚಿತ್ರ ನಿರ್ದೇಶಕ ರಾಜ್ ಚಕ್ರವರ್ತಿ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ದೀರ್ಘ ಬಂಗಾಳಿ ಸಂದೇಶವನ್ನು ಹಂಚಿಕೊಂಡಿರುವ ನಟ ರಾಜ್ ಚಕ್ರವರ್ತಿ, 'ಚಲನಚಿತ್ರ ನಿರ್ದೇಶಕರಾಗಿಯೂ ಹಾಗೂ ಶಾಸಕರಾಗಿಯೂ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಲು ಪ್ರಯತ್ನಿಸಿದ್ದಾಗಿ' ಹೇಳಿದ್ದಾರೆ.
“ಜೀವನದಲ್ಲಿ ಯಾವಾಗಲಾದರೂ ನನಗೆ ಜವಾಬ್ದಾರಿ ನೀಡಲಾದಾಗ, ಅದನ್ನು ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ಯಾವಾಗಲೂ ನನ್ನ ಶ್ರೇಷ್ಠತೆಯನ್ನು ನೀಡಲು ಪ್ರಯತ್ನಿಸಿದ್ದೇನೆ. ನಿರ್ದೇಶಕರಾಗಿ, ಸಿನಿಮಾಗಳ ಮೂಲಕ ಜನರಿಗೆ ಸಂತೋಷ ನೀಡಲು ಸದಾ ಶ್ರಮಿಸಿದ್ದೇನೆ. ಕೆಲವೊಮ್ಮೆ ಗೆಲುವು ಸಾಧಿಸಿದ್ದೇನೆ, ಕೆಲವೊಮ್ಮೆ ಸೋಲನ್ನೂ ಎದುರಿಸಿದ್ದೇನೆ” ಎಂದು ಅವರು ಬರೆದಿದ್ದಾರೆ.
2021ರಲ್ಲಿ ತಮ್ಮ ರಾಜಕೀಯ ಪಯಣ ಆರಂಭಿಸಿದ್ದನ್ನು ಉಲ್ಲೇಖಿಸಿದ ರಾಜ್ ಚಕ್ರವರ್ತಿ, “ಜನರು ನನಗೆ ಸೇವೆ ಮಾಡುವ ಅವಕಾಶ ನೀಡಿದರು” ಎಂದು ಹೇಳಿದ್ದಾರೆ. “ಮುಂದಿನ ಐದು ವರ್ಷಗಳ ಕಾಲ ನಾನು ಶಾಸಕರಾಗಿ ಅದೇ ಮನೋಭಾವದೊಂದಿಗೆ ನನ್ನ ಕರ್ತವ್ಯಗಳನ್ನು ನಿರ್ವಹಿಸಲು ಪ್ರಯತ್ನಿಸಿದೆ. ಆ ಅಧ್ಯಾಯವು 2026ರಲ್ಲಿ ಅಂತ್ಯಗೊಂಡಿದೆ,” ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿರುವುದನ್ನೂ ಅವರು ಉಲ್ಲೇಖಿಸಿ, ಹೊಸ ನಾಯಕತ್ವಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. “ಸುವೇಂದು ಅಧಿಕಾರಿ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಅವರ ನಾಯಕತ್ವದಲ್ಲಿ ಪಶ್ಚಿಮ ಬಂಗಾಳ ಅಭಿವೃದ್ಧಿ ಮತ್ತು ಪ್ರಗತಿಯ ದಾರಿಯಲ್ಲಿ ಮುನ್ನಡೆಯಲಿ ಎಂದು ಹಾರೈಸುತ್ತೇನೆ,” ಎಂದು ಅವರು ಬರೆದಿದ್ದಾರೆ.
ನಟನ ಮೇಲೆ ಕೆಸರೆರಚಿದ್ದ ಬಿಜೆಪಿ ಕಾರ್ಯಕರ್ತರು
ಇನ್ನು ಈ ಹಿಂದೆ ಟಿಎಂಸಿ ಅಭ್ಯರ್ಥಿ ರಾಜ್ ಚಕ್ರವರ್ತಿ ಮೇಲೆ ಬಿಜೆಪಿ ಕಾರ್ಯಕರ್ತರು ಕೆಸರು ಎರಚುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಟಿಎಂಸಿ ನಾಯಕರಾಗಿರುವ ರಾಜ್ ಚಕ್ರವರ್ತಿ ತಮ್ಮ ಅಧಿಕಾರಾವಧಿಯಲ್ಲಿ ಬಿಜೆಪಿ ಪರ ನಟರ ವಿರುದ್ಧ ಬಹಿರಂಗವಾಗಿ ತಾರತಮ್ಯ ಮಾಡಿ ಅವರನ್ನು ಚಿತ್ರರಂಗದಿಂದ ಶಾಶ್ವತವಾಗಿ ಹೊರದಬ್ಬಿರುವ ಆರೋಪ ಕೇಳಿಬಂದಿತ್ತು.
ಇತ್ತೀಚೆಗೆ ನಡೆದ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 207 ಸ್ಥಾನಗಳನ್ನು ಗೆದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ 15 ವರ್ಷದ ಆಡಳಿತಕ್ಕೆ ಅಂತ್ಯ ಹಾಡಿದೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿಧಾನಮಂಡಲ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Advertisement