

ಚೆನ್ನೈ: ತಮಿಳುನಾಡು ನೂತನ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಸೋಮವಾರ ನಿಕಟಪೂರ್ಣ ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಅವರನ್ನು ಚೆನ್ನೈನ ಅಲ್ವಾರ್ಪೇಟೆಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಿ, ಅಚ್ಚರಿ ಮೂಡಿಸಿದರು.
ಏಪ್ರಿಲ್ 23 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರು ಇಂದು ಮೊದಲ ಬಾರಿಗೆ ಸ್ಟಾಲಿನ್ ಅವರನ್ನು ಭೇಟಿ ಮಾಡಿದರು.
ವಿಜಯ್ ಅವರನ್ನು ಸ್ಟಾಲಿನ್ ಮತ್ತು ಅವರ ಪುತ್ರ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಉದಯನಿಧಿ ಅವರು ಮುಖ್ಯಮಂತ್ರಿ ಆಗಮನದ ಸಮಯದಲ್ಲಿ ಹಸ್ತಲಾಘವ ಮತ್ತು ಅಪ್ಪುಗೆಯ ಮೂಲಕ ಸ್ವಾಗತಿಸಿದರು, ನಂತರ ಸ್ಟಾಲಿನ್ ಭೇಟಿಯ ಸಮಯದಲ್ಲಿ ವಿಜಯ್ ಅವರನ್ನು ಅಪ್ಪಿಕೊಂಡರು.
ಇಬ್ಬರು ನಾಯಕರು ಹೂಗುಚ್ಛಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಪರಸ್ಪರ ರೇಷ್ಮೆ ಶಾಲುಗಳನ್ನು ಹೊದಿಸಿ, ಗೌರವಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮತ್ತು ವಿಜಯ್ ಅವರ ಟಿವಿಕೆ ನಡುವೆ ನಡೆದ ಚುನಾವಣಾ ತೀವ್ರ ಸ್ಪರ್ಧೆಯ ವಾರಗಳ ನಂತರ ಈ ಸಭೆ ಮಹತ್ವ ಪಡೆದುಕೊಂಡಿದೆ.
ಅಲ್ಲದೆ, ಭಾನುವಾರ ನಡೆದ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು, ಹಿಂದಿನ ಸರ್ಕಾರವು ರಾಜ್ಯದ ಮೇಲೆ 10 ಲಕ್ಷ ಕೋಟಿ ರೂ. ಸಾಲದ ಹೊರೆ ಹೇರಿದೆ ಮತ್ತು ಖಜಾನೆಯನ್ನು ಖಾಲಿ ಮಾಡಿದೆ ಎಂದು ಆರೋಪಿಸಿದ್ದರು.
Advertisement