

ತಮಿಳುನಾಡು ಮುಖ್ಯಮಂತ್ರಿಯಾಗಿ ನೇಮಕಗೊಂಡ ವಿಜಯ್ ತಮ್ಮ ಮೊದಲ ಆದೇಶದಲ್ಲಿ, ರಾಜ್ಯದಾದ್ಯಂತ ದೇವಾಲಯಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ಗಳೊಳಗಿನ 717 ಮದ್ಯದಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.
ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಎರಡು ದಿನಗಳ ನಂತರ ಈ ನಿರ್ಧಾರ ಹೊರಬಿದ್ದಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಕಾಲೇಜು ದಿನಗಳಿಂದಲೂ ವಿಜಯ್ ಜೊತೆ ಆತ್ಮೀಯ ಒಡನಾಟ ಹೊಂದಿರುವ ನಟ ವಿಶಾಲ್, ನಟ-ರಾಜಕಾರಣಿಯನ್ನು ಹೊಗಳುತ್ತಾ X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, 'ನಿಮಗೆ ಅಭಿನಂದನೆಗಳು, ಶಿಳ್ಳೆ ನಿಮಗೆ. ನಿಮಗೆ ಹ್ಯಾಟ್ಸ್ ಆಫ್. ಪ್ರಿಯ ಸಿಎಂ ಜೋಸೆಫ್ ವಿಜಯ್ ಅವರೇ. 717 ವೈನ್ ಅಂಗಡಿಗಳನ್ನು, ವಿಶೇಷವಾಗಿ ಶಾಲೆಗಳ ಬಳಿ ಇರುವ ವೈನ್ ಅಂಗಡಿಗಳನ್ನು ಮುಚ್ಚುವ ಘೋಷಣೆಗೆ ಧನ್ಯವಾದಗಳು. ಎಂತಹ ನಡೆ' ಎಂದು ವೀಡಿಯೊ ಸಂದೇಶಕ್ಕೆ ಶೀರ್ಷಿಕೆ ನೀಡಿದ್ದಾರೆ.
'ಹಲವು ಹೆಣ್ಣು ಮಕ್ಕಳು ಕಿರುಕುಳ ಎದುರಿಸುತ್ತಿದ್ದಾರೆ, ನನಗೆ ತಿಳಿದಿರುವಂತೆ ವಿಶೇಷವಾಗಿ ಆರ್ಕೆ ನಗರದಲ್ಲಿ ಒಬ್ಬ ವಿದ್ಯಾರ್ಥಿನಿ ಪ್ರತಿದಿನ ಟಾಸ್ಮ್ಯಾಕ್ ಅಂಗಡಿ ದಾಟಿ ಮನೆಗೆ ತಲುಪಬೇಕಾದ ಒತ್ತಡ ಎದುರಿಸಬೇಕಾಯಿತು ಎಂದು ದೂರುತ್ತಿದ್ದಳು. ಆಕೆ ಮತ್ತು ಸಾರ್ವಜನಿಕರಲ್ಲಿ ಅನೇಕರು ನಿಮ್ಮನ್ನು ಮತ್ತು ನಿಮ್ಮ ನಿರ್ಧಾರವನ್ನು ಸ್ವಾಗತಿಸುತ್ತಾರೆ. ನಮ್ಮ ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಅಪಾಯ ಶಾಶ್ವತವಾಗಿ ಮಾಯವಾಗುತ್ತದೆ. ನಾನು ಸೇರಿದಂತೆ ಹಲವರ ಮುಖದಲ್ಲಿ ನಗು ಮೂಡಿದೆ. ದೇವರು ನಿಮ್ಮನ್ನು ಆಶೀರ್ವದಿಸಲಿ' ಎಂದು ವಿಶಾಲ್ ಬರೆದಿದ್ದಾರೆ.
ರಾಜ್ಯದ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದ ನಂತರ ಟಿವಿಕೆ ನಾಯಕ ವಿಜಯ್ ಅಂತಿಮವಾಗಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಹುಮತಕ್ಕೆ 10 ಸ್ಥಾನಗಳ ಕೊರತೆಯಿದ್ದ ಕಾರಣ ಸರ್ಕಾರ ರಚಿಸಲು ಇತರರ ಬೆಂಬಲಕ್ಕಾಗಿ ಕಾಯಬೇಕಾಯಿತು. ಕಾಂಗ್ರೆಸ್, ಎರಡು ಎಡ ಪಕ್ಷಗಳು ಮತ್ತು ಸಣ್ಣ ತಮಿಳು ಪಕ್ಷವಾದ ವಿಸಿಕೆ ಬೆಂಬಲದೊಂದಿಗೆ ಟಿವಿಕೆ ಅಂತಿಮವಾಗಿ ಅಧಿಕಾರಕ್ಕೆ ಬಂದಿತು.
ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಅವರ ಪತ್ನಿ ಮತ್ತು ಮಕ್ಕಳು ಭಾಗವಹಿಸದಿರುವುದು ಮತ್ತು ನಟಿ ತ್ರಿಶಾ ಭಾಗಿಯಾಗಿದ್ದು ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ವಿಜಯ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ತ್ರಿಶಾ ಭಾವುಕರಾಗಿದ್ದ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಈ ಕಾರ್ಯಕ್ರಮದ ಒಂದು ದಿನದ ನಂತರ ತ್ರಿಶಾ, 'ಪ್ರೀತಿ ಯಾವಾಗಲೂ ಜೋರಾಗಿರುತ್ತದೆ' ಎಂಬ ಶೀರ್ಷಿಕೆಯೊಂದಿಗೆ ಇನ್ಸ್ಟಾಗ್ರಾಂ ಪೋಸ್ಟ್ ಹಂಚಿಕೊಂಡರು. ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿತು.
Advertisement