

ತ್ರಿಶಾ, ಸೂರ್ಯ ಅಭಿನಯದ ತಮಿಳಿನ ‘ಕರುಪ್ಪ್’ಚಿತ್ರದ ಫಸ್ಟ್ ಶೋಗಳಿಗೆ ತಮಿಳುನಾಡು ಸಿಎಂ ವಿಜಯ್ ವಿಶೇಷ ಅನುಮತಿ ನೀಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ರದ್ದಾಗಿವೆ. ತಮಿಳುನಾಡಿನಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ಮಧ್ಯಾಹ್ನದ ಶೋಗಳು ಕೂಡಾ ರದ್ದಾಗಿವೆ.
ಈ ಕುರಿತು ‘ಡ್ರೀಮ್ ವಾರಿಯರ್ ಪಿಕ್ಚರ್ಸ್’ ಸಂಸ್ಥೆಯ ಸಹ-ಮಾಲೀಕ ಹಾಗೂ ನಿರ್ಮಾಪಕ ಎಸ್.ಆರ್.ಪ್ರಭು ಅವರು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅನಿವಾರ್ಯ ಕಾರಣಗಳಿಂದಾಗಿ ಬೆಳಗ್ಗೆ 9 ಗಂಟೆಯ ಶೋಗಳನ್ನು ರದ್ದುಗೊಳಿಸಲಾಗಿದೆ ಎಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.
ಆರ್ ಜೆ ಬಾಲಾಜಿ ನಿರ್ದಶನದ ಚಿತ್ರ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ನಿರ್ಮಾಪಕರು ಹಾಗೂ ಫೈನಾನ್ಶಿಯರ್ ನಡುವಣ ಹಣಕಾಸು ವ್ಯವಹಾರಗಳು ಬಗೆಹರಿಯದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ವಿಳಂಬವಾಗಿದೆ ಎಂದು ವರದಿಯಾಗಿದೆ. ಯಾವಾಗ ಚಿತ್ರ ಬಿಡುಗಡೆಯಾಗಲಿದೆ ಎಂಬುದನ್ನು ಚಿತ್ರ ನಿರ್ಮಾಪಕರು ಸ್ಪಷ್ಪಪಡಿಸಿಲ್ಲ. ಇದರಿಂದಾಗಿ ಅಭಿಮಾನಿಗಳಲ್ಲಿ ಗೊಂದಲ ಮುಂದುವರೆದಿದೆ.
ವೆಟ್ರಿ ಥಿಯೇಟರ್ಸ್, ಕಮಲಾ ಸಿನಿಮಾಸ್, ಜಿಕೆ ಸಿನಿಮಾಸ್ ಮತ್ತು ಇಜಿಎ ಸಿನಿಮಾಸ್ ಸೇರಿದಂತೆ ಪ್ರಮುಖ ಥಿಯೇಟರ್ ಗಳು ಮಧ್ಯಾಹ್ನದ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಹಣ ಮರು ಪಾವತಿ ಮಾಡಲಾಗುವುದು ಎಂದು ಎಕ್ಸ್ ಮೂಲಕ ತಿಳಿಸಿವೆ.
ಮಧ್ಯಾಹ್ನ ಮತ್ತು ಮ್ಯಾಟಿನಿ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಆನ್ಲೈನ್ ಟಿಕೆಟ್ ದರಗಳನ್ನು 4-5 ದಿನಗಳಲ್ಲಿ ನಿಮ್ಮ ಖಾತೆಗೆ ಮರುಪಾವತಿಸಲಾಗುತ್ತದೆ. ಕೌಂಟರ್ ನಲ್ಲಿ ಟಿಕೆಟ್ ಖರೀದಿಸಿದವರು ಇಲ್ಲಿಯೇ ಬಂದು ನಿಮ್ಮ ಹಣವನ್ನು ಸಂಗ್ರಹಿಸಬಹುದು ಎಂದು ವೆಟ್ರಿ ಥಿಯೇಟರ್ ತಿಳಿಸಿದೆ.
‘ಕರುಪ್ಪ್’ ನಿರ್ದೇಶಕ ಆರ್.ಜೆ. ಬಾಲಾಜಿ ಪ್ರತಿಕ್ರಿಯಿಸಿ, ನಿರ್ಮಾಪಕರು ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಕಳೆದ 32 ತಿಂಗಳುಗಳಿಂದ ಈ ಚಿತ್ರವು ಹಲವು ಅಡೆತಡೆಗಳನ್ನು ಎದುರಿಸಿದೆ. ಈ ಸಮಸ್ಯೆಯಿಂದಲೂ ಆದಷ್ಟು ಬೇಗ ದೇವರು ನಮ್ಮನ್ನು ಪಾರು ಮಾಡುತ್ತಾನೆ ಎಂದು ಬರೆದುಕೊಂಡಿದ್ದಾರೆ.
ಪತ್ನಿ ಸಂಗೀತಾ ಡೈವೋರ್ಸ್ ಪ್ರಕರಣ ಕೋರ್ಟ್ನಲ್ಲಿರುವಾಗಲೇ ನಟಿ ತ್ರಿಶಾ ಮತ್ತು ವಿಜಯ್ ಮದುವೆ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಜಯ್ ಗೆಲುವಿನ ಬಳಿಕ ವಿಜಯ್ ನಿವಾಸಕ್ಕೆ ಆಗಮಿಸಿ ಶುಭ ಕೋರಿದ್ದರು. ಅಲ್ಲದೇ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಮ್ಮನ ಜೊತೆ ಆಗಮಿಸಿದ್ದ ತ್ರಿಶಾ ವೀಡಿಯೋಗಳುವೈರಲ್ ಆಗಿತ್ತು. ಸಿನಿಮಾಗೆ ಮೊದಲ ದಿನವೇ ಸುಮಾರು 7.2 ಕೋಟಿ ರೂ. ಮುಂಗಡ ಬುಕ್ಕಿಂಗ್ ಆಗಿತ್ತು ಎನ್ನಲಾಗಿದೆ.
Advertisement