

ದೀರ್ಘ ನಿರೀಕ್ಷೆ ಮತ್ತು ಅನೇಕ ಹೋರಾಟಗಳ ಬಳಿಕ ನಟ ವಿಜಯ್ ಕೊನೆಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಅಧಿಕಾರಕ್ಕೆ ಬಂದಾಗ ಹೆಚ್ಚು ಗಮನ ಸೆಳೆದ ಹೆಸರು ಜ್ಯೋತಿಷಿ ರಾಧನ್ ಪಂಡಿತ್ ವೆಟ್ರಿವೇಲ್ ಅವರದ್ದು.
ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷ ಟಿವಿಕೆಯ ಭರ್ಜರಿ ಗೆಲುವಿನ ಬಗ್ಗೆ ಅವರು ಹಲವು ಭವಿಷ್ಯವಾಣಿಗಳನ್ನು ಮಾಡಿದ್ದರು. ವಿಶೇಷವಾಗಿ ಅವರು ಬಳಸಿದ ಸುನಾಮಿ ವಿಜಯ ಎಂಬ ಪದ ಬಹಳ ಪ್ರಸಿದ್ಧಿಯಾಯಿತು. ವಿಜಯ್ ಮುಖ್ಯಮಂತ್ರಿಯಾದ ನಂತರ ರಾಧನ್ ಪಂಡಿತ್ ಅವರಿಗೆ ಸರ್ಕಾರಿ ಹುದ್ದೆ ನೀಡಿದ ವಿಚಾರ ಭಾರೀ ವಿವಾದಕ್ಕೆ ಕಾರಣವಾಯಿತು. ಬಳಿಕ ಆ ನೇಮಕಾತಿಯನ್ನು ರದ್ದುಪಡಿಸಲಾಯಿತು.
ಈಗ ರಾಧನ್ ಪಂಡಿತ್ ವೆಟ್ರಿವೇಲ್ ಮತ್ತೊಂದು ಹೊಸ ಭವಿಷ್ಯವಾಣಿ ನುಡಿದು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಅವರು ಈ ಹೇಳಿಕೆಯನ್ನು ತಮಿಳು ಸುದ್ದಿ ವಾಹಿನಿ ತಂತಿ ಟೀವಿಗೆ ನೀಡಿದ್ದಾರೆ. ಅವರ ಪ್ರಕಾರ, ವಿಜಯ್ ಅವರಿಗೆ ಭಾರತದ ಪ್ರಧಾನಮಂತ್ರಿಯಾಗುವ ಬಲವಾದ ಅವಕಾಶವಿದೆ. ಜೊತೆಗೆ ವಿಜಯ್ ಅವರ ಜಾತಕವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜಾತಕದ “ಫೋಟೋಕಾಪಿ” ಎಂದು ಕೂಡ ಅವರು ಹೇಳಿದ್ದಾರೆ.
ವಿಜಯ್ “ಪ್ರಧಾನಮಂತ್ರಿಯಾಗಲು ವಿಧಿಯೇ ನಿರ್ಧರಿಸಿದೆ” ಎಂದೂ ಅವರು ಹೇಳಿದ್ದಾರೆ. ಮುಂದಿನ 30-40 ವರ್ಷಗಳ ಕಾಲ ವಿಜಯ್ ಅವರಿಗೆ ಯಾವುದೇ ದೊಡ್ಡ ರಾಜಕೀಯ ಸ್ಪರ್ಧೆ ಎದುರಾಗುವುದಿಲ್ಲ ಮತ್ತು ಅವರು ಯಾವತ್ತೂ ಸೋಲನ್ನು ಕಾಣುವುದಿಲ್ಲ ಎಂದು ಕೂಡ ಹೇಳಿದ್ದಾರೆ.
ಈ ಸಂದರ್ಶನದ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಅನೇಕರು ವ್ಯಂಗ್ಯಭರಿತ ಕಾಮೆಂಟ್ಗಳ ಮೂಲಕ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ವಿಜಯ್ ಅವರಿಗೆ ಶಾಂತಿಯಿಂದ ಆಡಳಿತ ನಡೆಸಲು ಬಿಡಿ. ಇಂತಹ ಹೇಳಿಕೆಗಳನ್ನು ನೀಡಿ ಅವರ ರಾಜಕೀಯ ಭವಿಷ್ಯ ಹಾಳು ಮಾಡಬೇಡಿ ಎಂದು ಕೆಲವರು ಟೀಕಿಸುತ್ತಿದ್ದಾರೆ.
ಇನ್ನೊಂದೆಡೆ, ವಿಜಯ್ ಅವರ ಕೊನೆಯ ಸಿನಿಮಾ ಜನನಾಯಗನ್ ಬಿಡುಗಡೆಯ ಸಿದ್ಧತೆಯಲ್ಲಿ ಇದೆ. ಮೂಲಗಳ ಪ್ರಕಾರ, ಈ ಚಿತ್ರ ಮುಂದಿನ ತಿಂಗಳು ತೆರೆಗೆ ಬರಬಹುದೆಂದು ಹೇಳಲಾಗುತ್ತಿದೆ.
Advertisement