

ನವದೆಹಲಿ: ಜಾಮೀನು ನಿಯಮ ಮತ್ತು ಜೈಲು ವಿನಾಯಿತಿ ಎಂಬುಬುದು ಯುಎಪಿಎ ಪ್ರಕರಣಗಳಿಗೂ ಅನ್ವಯವಾಗುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಹಣಕಾಸು ಒದಗಿಸುವಲ್ಲಿ ತೊಡಗಿರುವ ಗಡಿಯಾಚೆಗಿನ ಸಂಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಉನ್ನತ ಮಟ್ಟದ ಮಾದಕವಸ್ತು-ಭಯೋತ್ಪಾದನಾ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ವ್ಯಕ್ತಿಗೆ ಸೋಮವಾರ ಜಾಮೀನು ಮಂಜೂರು ಮಾಡುವಾಗ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, ಹಂದ್ವಾರ ನಿವಾಸಿ ಸೈಯದ್ ಇಫ್ತಿಕರ್ ಅಂದ್ರಾಬಿಗೆ ಜಾಮೀನು ಮಂಜೂರು ಮಾಡಿದ್ದು ಪಾಸ್ಪೋರ್ಟ್ ನ್ನು ಹಸ್ತಾಂತರಿಸುವಂತೆ ಸೂಚಿಸಿದ್ದು, 15 ದಿನಗಳಿಗೊಮ್ಮೆ ಸ್ಥಳೀಯ ಪೊಲೀಸ್ ಠಾಣೆಗೆ ವರದಿ ಮಾಡುವಂತೆ ನಿರ್ದೇಶಿಸಿದೆ.
ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ 2020 ರಲ್ಲಿ ದಾಖಲಾಗಿರುವ ಪ್ರಕರಣವನ್ನು ಎನ್ಐಎ ತನಿಖೆ ನಡೆಸುತ್ತಿದೆ.
ಯುಎಪಿಎಯ ಸೆಕ್ಷನ್ 43 ಡಿ (5) ಅನಿರ್ದಿಷ್ಟ ಜೈಲು ಶಿಕ್ಷೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಮತ್ತು 21 ಮತ್ತು 22 ನೇ ವಿಧಿಗಳಿಗೆ ಒಳಪಟ್ಟು ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ವಿಭಾಗ ಕಠಿಣ ಜಾಮೀನು ನಿರ್ಬಂಧಗಳನ್ನು ವಿವರಿಸುತ್ತದೆ.
"ಜಾಮೀನು ಪಡೆಯುವುದು ನಿಯಮ ಮತ್ತು ವಿಚಾರಣೆ ನಡೆಯುತ್ತಿರುವಾಗ ಜೈಲಿನಲ್ಲಿರಿಸುವುದು ನಿಯಮವಲ್ಲ ಎಂಬುದು 21 ಮತ್ತು 22 ನೇ ವಿಧಿಗಳಿಂದ ಹುಟ್ಟಿಕೊಂಡ ಸಾಂವಿಧಾನಿಕ ತತ್ವವಾಗಿದೆ ಮತ್ತು ಕಾನೂನಿನ ಆಳ್ವಿಕೆಯಿಂದ ನಿಯಂತ್ರಿಸಲ್ಪಡುವ ಯಾವುದೇ ನಾಗರಿಕ ಸಮಾಜದ ಮೂಲಾಧಾರವೆಂದರೆ, ಅಪರಾಧಿ ಎಂದು ಸಾಬೀತಾಗುವವರೆಗೂ ಆತ ಆರೋಪಿಯಷ್ಟೇ ಎಂಬುದಾಗಿದೆ" ಎಂದು ಪೀಠ ಹೇಳಿದೆ.
ಕೆಎ ನಜೀಬ್ ಪ್ರಕರಣದಲ್ಲಿ ತನ್ನ ತೀರ್ಪನ್ನು ವಿಚಾರಣಾ ನ್ಯಾಯಾಲಯಗಳು, ಹೈಕೋರ್ಟ್ಗಳು ಅಥವಾ ಈ ನ್ಯಾಯಾಲಯದ ಕೆಳಮಟ್ಟದ ಪೀಠಗಳು ದುರ್ಬಲಗೊಳಿಸಲು, ತಪ್ಪಿಸಲು ಅಥವಾ ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಕೆಎ ನಜೀಬ್ ಪ್ರಕರಣ ಯುಎಪಿಎ ಅಡಿಯಲ್ಲಿ ಜಾಮೀನಿಗೆ ಸಂಬಂಧಿಸಿದಂತೆ 2021 ರಲ್ಲಿ ನೀಡಿದ ಒಂದು ಲ್ಯಾಂಡ್ ಮಾರ್ಕ್ ಸುಪ್ರೀಂ ಕೋರ್ಟ್ ತೀರ್ಪಾಗಿದೆ. ಆಂದ್ರಾಬಿ ತನ್ನ ಜಾಮೀನನ್ನು ವಜಾಗೊಳಿಸಿದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪ್ರಶ್ನಿಸಿದ್ದರು, ಮೊಬೈಲ್ ಫೋನ್ ದಾಖಲೆಗಳ ಪರಿಶೀಲನೆಯು ಅಂದ್ರಾಬಿ ಗಡಿಯಾಚೆಗಿನ ಭಯೋತ್ಪಾದಕ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸೂಚಿಸಿತ್ತು.
Advertisement