

ತಿರುವನಂತಪುರಂ: ಮುಖ್ಯಮಂತ್ರಿ ವಿ ಡಿ ಸತೀಶನ್ ಅವರು ಸೋಮವಾರ ಕೇರಳ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಕ್ಷಣಗಳಲ್ಲಿ ರಾಜ್ಯದ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ್ದು, ಮೊದಲ ಸಚಿವ ಸಂಪುಟ ಸಭೆಯಲ್ಲೇ ಯುಡಿಎಫ್ ಸರ್ಕಾರವು ತನ್ನ ಎರಡು ಪ್ರಮುಖ ಚುನಾವಣಾ ಭರವಸೆಗಳನ್ನು ಈಡೇರಿಸಿದೆ.
ವಿ ಡಿ ಸತೀಶನ್ ಅವರ ನೇತೃತ್ವದಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮತ್ತು ಆಶಾ ಕಾರ್ಯಕರ್ತರ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ನಿರ್ಧಾರಗಳನ್ನು ಪ್ರಕಟಿಸಿದ ಮುಖ್ಯಮಂತ್ರಿ ವಿ ಡಿ ಸತೀಶನ್, ಜೂನ್ 15 ರಿಂದ ಮಹಿಳೆಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಯೋಜನೆಯ ವಿವರವಾದ ಮಾರ್ಗಸೂಚಿಗಳು ಮತ್ತು ವಿಧಾನಗಳನ್ನು ನಂತರ ಪ್ರಕಟಿಸಲಾಗುವುದು. ಯುಡಿಎಫ್ನ ಚುನಾವಣಾ ಪ್ರಚಾರದಲ್ಲಿ ಈ ಭರವಸೆ ಪ್ರಮುಖವಾಗಿ ಕಾಣಿಸಿಕೊಂಡಿತ್ತು ಮತ್ತು ಇದು 'ಇಂದಿರಾ ಗ್ಯಾರಂಟಿ'ಗಳ ಭಾಗವಾಗಿತ್ತು.
ಆಶಾ ಕಾರ್ಯಕರ್ತರ ಮಾಸಿಕ ಗೌರವಧನವನ್ನು 3,000 ರೂ. ಹೆಚ್ಚಿಸಲು ಸಂಪುಟ ಸಭೆ ಅನುಮೋದಿಸಿದೆ. ಪ್ರಸ್ತುತ, ಆಶಾ ಕಾರ್ಯಕರ್ತರು 9,000 ರೂ. ಪಡೆಯುತ್ತಿದ್ದು, ಅದನ್ನು ಈಗ 12,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ಆಶಾ ಕಾರ್ಯಕರ್ತರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸತೀಶನ್ ಹೇಳಿದರು. ಆದರೆ ಹಣಕಾಸಿನ ನಿರ್ಬಂಧಗಳು ತಕ್ಷಣದ ಹೆಚ್ಚಳವನ್ನು 3,000 ರೂ.ಗಳಿಗೆ ಸೀಮಿತಗೊಳಿಸಲಾಗಿದೆ. ಗೌರವಧನ ಪರಿಷ್ಕರಣೆ ಕೂಡ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಯುಡಿಎಫ್ ನೀಡಿದ್ದ ಪ್ರಮುಖ ಭರವಸೆಯಾಗಿತ್ತು.
Advertisement