

ನವದೆಹಲಿ: ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೆಹಂಗೈ ಮಾನವ್ ಮತ್ತೆ ದಾಳಿ ನಡೆಸಿದೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದು, ಇತರ ಸಮಯದಲ್ಲಿ ಜನರ ಜೀಬಿನ ಮೇಲೆ ದಾಳಿ ಮಾಡುವುದು ಅದರ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಪೆಟ್ರೋಲ್ ದರವನ್ನು ಲೀಟರ್ ಗೆ 2.61 ಪೈಸೆ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ಗೆ 2.71 ರೂ.ಗಳಷ್ಟು ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಏರುತ್ತಿರುವ ಅಂತಾರಾಷ್ಟ್ರೀಯ ತೈಲ ದರವನ್ನುಗ್ರಾಹಕರಿಗೆ ವರ್ಗಾಯಿಸುವುದನ್ನು ಮುಂದುವರಿಸಿದ್ದರಿಂದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿಗೆ ಹೆಚ್ಚಳ ಮಾಡಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ಮೆಹಂಗೈ ಮಾನವ್ ಮೋದಿ ಮತ್ತೆ ದಾಳಿ ಮಾಡಿದ್ದಾರೆ. ಕಂತುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುತ್ತಾರೆ. ಸದ್ದಿಲ್ಲದೆ ಆಗಾಗ್ಗೆ ಹಣವನ್ನು ಯಮಾರಿಸುತ್ತಿದ್ದಾರೆ ಎಂದು ಹಿಂದಿಯಲ್ಲಿ ಅವರು ಬರೆದುಕೊಂಡಿದ್ದಾರೆ.
ತಿಂಗಳಿನಿಂದ ಆರ್ಥಿಕ ಬಿರುಗಾಳಿಯ ಬಗ್ಗೆ ಎಚ್ಚರಿಸುತ್ತಿದ್ದೆ. ಆದರೆ ಮೋದಿ ಜಿ, ನಿಜ ಹೇಳಬೇಕೆಂದರೆ, ಆ ಸಮಯದಲ್ಲಿ ಚುನಾವಣೆಗಳಲ್ಲಿ ನಿರತರಾಗಿದ್ದರು ಮತ್ತು ಚುನಾವಣೆಗಳು ಕೊನೆಗೊಂಡ ಕ್ಷಣ, ಅವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು 8 ರೂ.ಗಳಷ್ಟು ಹೆಚ್ಚಿಸಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದ್ದಾರೆ.
ಈ ಏರಿಕೆಯ ಪ್ರವೃತ್ತಿ ಮುಂದುವರಿಯುತ್ತದೆ. ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವುದು, ಇತರ ಸಮಯದಲ್ಲಿ ಜನರ ಜೀಬಿನ ಮೇಲೆ ದಾಳಿ ಮಾಡುವುದು ಮೆಹಂಗೈ ಮಾನವ್ ಮೋದಿ ಅವರ ಕೆಲಸವಾಗಿದೆ ಎಂದು ರಾಹುಲ್ ಗಾಂಧಿ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ.
ಮೇ 15 ರಂದು ತೈಲ ಬೆಲೆ ಏರಿಕೆ ಆರಂಭವಾದಾಗಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಒಟ್ಟು ಏರಿಕೆಯು ಲೀಟರ್ಗೆ 7.5 ರೂ. ತಲುಪಿದೆ. ಇದರಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್ಗೆ 99.51 ರೂ.ಗಳಿಂದ 102.12 ರೂ.ಗೆ ಹೆಚ್ಚಿಸಲಾಗಿದೆ. ಆದರೆ ಡೀಸೆಲ್ ದರವನ್ನು ಲೀಟರ್ಗೆ 92.49 ರೂ.ಗಳಿಂದ 95.20 ರೂ.ಗೆ ಹೆಚ್ಚಿಸಲಾಗಿದೆ.
Advertisement