

ಚೆನ್ನೈ: ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ AIADMK ಯಲ್ಲಿ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಬ್ಬರಾದ ನಂತರ ಮತ್ತೊಬ್ಬರಂತೆ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ.
ಸೋಮವಾರ ಮೂವರು ಶಾಸಕರು ರಾಜೀನಾಮೆ ನೀಡಿದ್ದರು. ಇಂದು ಮತ್ತೋರ್ವ ಶಾಸಕರು ರಾಜೀನಾಮೆ ನೀಡಿದ್ದು, ವಿಜಯ್ ನೇತೃತ್ವದ ಟಿವಿಕೆ ಗೆ ಸೇರ್ಪಡೆಯಾಗಿದ್ದಾರೆ. AIADMK ಶಾಸಕರಾದ ಎಸಕ್ಕಿ ಸುಬಯಾ ಮಂಗಳವಾರ ವಿಧಾನಸಭಾ ಸ್ಪೀಕರ್ ಜೆ ಸಿ ಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.
ಅಂಬಸಮುದ್ರಂ ಶಾಸಕರಾದ ಎಸಕ್ಕಿ ಸುಬಯಾ, ಸೆಕ್ರೆಟರಿಯೇಟ್ನಲ್ಲಿ ಸ್ಪೀಕರ್ಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ನಿಯಮಗಳಿಗೆ ಅನುಗುಣವಾಗಿಲ್ಲದ ಕಾರಣ ಆರಂಭದಲ್ಲಿ ಅದನ್ನು ಸ್ವೀಕರಿಸಲು ಸ್ಪೀಕರ್ ನಿರಾಕರಿಸಿದರು. ತಕ್ಷಣ ಸುಬಯಾ ಟೈಪ್ ಮಾಡಿದ ಪತ್ರವನ್ನು ಹಿಂಪಡೆದು, ಕೆಲವೇ ನಿಮಿಷಗಳಲ್ಲಿ ಕೈಬರಹದ ಪತ್ರವನ್ನು ಸಲ್ಲಿಸಿದರು, ಅದನ್ನು ಪ್ರಭಾಕರ್ ಅಂಗೀಕರಿಸಿದ್ದಾರೆ.
ವಿಜಯ್ ಮೇ 13 ರಂದು ವಿಶ್ವಾಸಮತ ಯಾಚಿಸಿದಾಗ ಅವರನ್ನು ಬೆಂಬಲಿಸಿದ ಮಾಜಿ ರಾಜ್ಯ ಸಚಿವರಾದ ಸಿ ವೆ ಷಣ್ಮುಗಂ ಮತ್ತು ಎಸ್ ಪಿ ವೇಲುಮಣಿ ಬಣದಲ್ಲಿದ AIADMK ಶಾಸಕರಲ್ಲಿ ಸುಬಯಾ ಕೂಡ ಒಬ್ಬರಾಗಿದ್ದಾರೆ. ಎಐಎಡಿಎಂಕೆ ಶಾಸಕರಾದ ಮರಗತಮ್ ಕುಮಾರವೇಲ್, ಪಿ ಸತ್ಯಬಾಮ ಮತ್ತು ಎಸ್ ಜಯಕುಮಾರ್ ಅವರು ಸೋಮವಾರ ಸಂಜೆ ಟಿವಿಕೆಗೆ ಸೇರ್ಪಡೆಯಾದರು.
ಮುಂದಿನ ಉಪಚುನಾವಣೆಯಲ್ಲಿ ಪಕ್ಷದ ಶಿಳ್ಳೆ ಚಿಹ್ನೆಯ ಮೇಲೆ ಸ್ಪರ್ಧಿಸಲು ಈ ಮೂವರಿಗೆ ಟಿವಿಕೆ ಟಿಕೆಟ್ಗಳು ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Advertisement