

ನವದೆಹಲಿ: ಫೆಬ್ರವರಿ 2019 ರಲ್ಲಿ ಪಾಕಿಸ್ತಾನ ವಾಯುಪಡೆಯ F-16 ಯುದ್ಧ ವಿಮಾನ ಹೊಡೆದುರುಳಿಸಿದ್ದ ಬಾಲಾಕೋಟ್ ದಾಳಿ ಹೀರೋ ಅಭಿನಂದನ್ ವರ್ಧಮಾನ್ ಅವರು ಭಾರತೀಯ ವಾಯುಪಡೆಯಿಂದ ಅವಧಿಗೂ ಮುನ್ನವೇ ನಿವೃತ್ತಿ ಪಡೆದಿದ್ದು, ಈಗ ಖಾಸಗಿ ವಿಮಾನ ಪೈಲಟ್ ಆಗಿ ಹೊಸ ವೃತ್ತಿ ಜೀವನ ಆರಂಭಿಸಿದ್ದಾರೆ.
ಬಾಲಾಕೋಟ್ ದಾಳಿ ವೇಳೆ ಪಾಕಿಸ್ತಾನ ಸೈನಿಕರ ಸೆರೆಸಿಕ್ಕಿ, ಅಲ್ಲಿ ಮೂರು ದಿನಗಳ ಕಾಲ ಸೆರೆಯಲ್ಲಿದ್ದ ಭಾರತೀಯ ವಾಯುಪಡೆಯ(ಐಎಎಫ್) ಅಧಿಕಾರಿ ಅಭಿನಂದನ್ ವರ್ಧಮಾನ್, ನಂತರ ಜೀವಂತವಾಗಿ ಭಾರತಕ್ಕೆ ಮರಳಿ ದೇಶದೆಲ್ಲೆಡೆ ಖ್ಯಾತಿಗಳಿಸಿದ್ದರು.
ವಾಯುಪಡೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಗ್ರೂಪ್ ಕ್ಯಾಪ್ಟನ್ ಮತ್ತು ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಅಭಿನಂದನ್ ಅವರು ಈಗ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91 ಪೈಲಟ್ ಆಗಿ ನೇಮಕಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಭಿನಂದನ್ ವರ್ಧಮಾನ್ ಅವರು ಆಗಸ್ಟ್ನಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಯನ್ನು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಆದರೆ ಅಭಿನಂದನ್ ವರ್ತಮಾನ್ ಅವರು ಈ ವಿಷಯದ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. FLY91 ವಕ್ತಾರರು ಉದ್ಯೋಗಿಗಳ ಬಗ್ಗೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದು, ಇದು ಖಾಸಗಿ ವಿಷಯ ಎಂದು ಹೇಳಿದೆ.
ಪಾಕಿಸ್ತಾನದಿಂದ ಜೀವಂತವಾಗಿದ್ದ ಮರಳಿದ್ದ ಅಭಿನಂದನ್
2019 ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಫೆ. 14 ರಂದು ಆರ್ಡಿಎಕ್ಸ್ ತುಂಬಿದ್ದ ವಾಹನವೊಂದು ಸೈನಿಕರು ಸಾಗುತ್ತಿದ್ದ ವ್ಯಾನ್ಗೆ ಡಿಕ್ಕಿ ಹೊಡೆದು, ಸುಮಾರು 40 ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದರು. ಈ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರ ಕೈವಾಡವಿದೆ ಎಂದು ತಿಳಿದಿದ್ದ ಭಾರತ, ಭಯೋತ್ಪಾದಕ ನೆಲೆಗಳನ್ನು ಆಯ್ಕೆ ಮಾಡಿಕೊಂಡು ಏರ್ಸ್ಟ್ರೈಕ್ ನಡೆಸಲಾಗಿತ್ತು.
ಈ ಸಮಯದಲ್ಲಿ, ಮಿಗ್ ಬೈಸನ್ ಫೈಟರ್ ಜೆಟ್ ಕ್ಯಾಪ್ಟನ್ ಆಗಿದ್ದ ಅಭಿನಂದನ್ ವರ್ಧಮಾನ್ ಪಾಕಿಸ್ತಾನದ ಎಫ್-16 ಜೆಟ್ನ್ನು ಹೊಡೆದುರಳಿಸಿ, ಪಾಕಿಸ್ತಾನದಲ್ಲಿ ಬಿದ್ದಿದ್ದರು. ಅವರನ್ನು ವಶಕ್ಕೆ ಪಡೆದಿರುವುದಾಗಿ ಪಾಕ್ ಸರ್ಕಾರ ತಿಳಿಸಿತ್ತು.
ನಂತರ ಭಾರತ ಸರ್ಕಾರ ಮಾತುಕತೆ ಮೂಲಕ ಕೇವಲ ಮೂರೇ ದಿನಗಳಲ್ಲಿ ಅಭಿನಂದನ್ ಅವರನ್ನು ಭಾರತಕ್ಕೆ ಮರಳುವಂತೆ ನೋಡಿಕೊಂಡಿತ್ತು. ಅಭಿನಂದನ್ ಅವರ ಶೌರ್ಯವನ್ನು ಗುರುತಿಸಿ ವೀರ ಚಕ್ರವನ್ನು ಕೂಡ ನೀಡಲಾಗಿದೆ. ಈ ಸಮಯದಲ್ಲಿ ಪಾಕ್ ಸೈನಿಕರು ಅಭಿನಂದನ್ಗೆ ಚಹ ನೀಡಿದ್ದ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು.