

ನವದೆಹಲಿ: ರಾಷ್ಟ್ರ ರಾಜಧಾನಿಯ ಹಲವು ಭಾಗಗಳಲ್ಲಿ ಶುಕ್ರವಾರ ಭಾರಿ ಮಳೆಯಾಗಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತವಾಗಿದ್ದು, ಹಲವು ವಿಮಾನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ತೀವ್ರ ಮಳೆ, ಗುಡುಗು, ಸಿಡಿಲು ಮತ್ತು ಬಿರುಗಾಳಿ ಸಹಿತ ಗಾಳಿಯ ಮುನ್ಸೂಚನೆಯೊಂದಿಗೆ 'ರೆಡ್ ಅಲರ್ಟ್' ಘೋಷಿಸಿದೆ. ಜನ್ಮಾಷ್ಟಮಿ ಆಚರಣೆಗಾಗಿ ಮನೆಯಿಂದ ಹೊರಬಂದ ಜನರು ಹಠಾತ್ ಮಳೆಗೆ ಸಿಲುಕಿಕೊಂಡರು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ವಾಹನ ಸವಾರರು ತೀವ್ರ ಪರದಾಡುವಂತಾಯಿತು.
ಹಲವು ಗಂಟೆಗಳ ಮಳೆಯ ನಂತರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೀರು ನಿಂತು ಜಲಾವೃತಗೊಂಡಿತು. ಪ್ರಯಾಣಿಕರು ಪಾದದ ಮಟ್ಟದ ನೀರಿನಲ್ಲಿ ಲಗೇಜ್ ಟ್ರಾಲಿಗಳನ್ನು ತಳ್ಳಿಕೊಂಡು ಹೋಗುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
ಭಾರಿ ಮಳೆಯಿಂದಾಗಿ ಮಧ್ಯಾಹ್ನ 3.30 ರಿಂದ 4.30 ರ ನಡುವೆ ಒಂಬತ್ತು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇವುಗಳಲ್ಲಿ ನಾಲ್ಕು ಜೈಪುರಕ್ಕೆ, ನಾಲ್ಕು ಲಕ್ನೋಗೆ ಮತ್ತು ಒಂದು ಅಹಮದಾಬಾದ್ಗೆ ತೆರಳಬೇಕಾದ ವಿಮಾನಗಳು ಸೇರಿವೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ದೆಹಲಿಗೆ ಬರುವ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ಮೇಲೆ ಪರಿಣಾಮ ಬೀರಬಹುದು ಎಂದು ಏರ್ ಇಂಡಿಯಾ ಪ್ರಯಾಣಿಕರಿಗೆ ನೀಡಿದೆ. IMD ಪ್ರಕಾರ, ಪಾಲಂನಲ್ಲಿ ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2.30 ರ ನಡುವೆ 3.4 ಮಿ.ಮೀ ಮಳೆಯಾಗಿದ್ದರೆ, ನಜಫ್ಗಢದಲ್ಲಿ ಬೆಳಿಗ್ಗೆ 8.30 ರಿಂದ 11.30 ರ ನಡುವೆ 0.5 ಮಿ.ಮೀ ಮಳೆಯಾಗಿದೆ.
ಸಂಜೆ 5 ರಿಂದ ರಾತ್ರಿ 8 ರ ನಡುವೆ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಗುಡುಗು ಮತ್ತು ಸಿಡಿಲು ಹಾಗೂ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಮುಂದಿನ ಮೂರು ಗಂಟೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆ ಮತ್ತು ಕೆಲವು ಸ್ಥಳಗಳಲ್ಲಿ 50-100 ಮಿ.ಮೀ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಗುಡುಗು, ಸಿಡಿಲು ಮತ್ತು ಗಂಟೆಗೆ 40-50 ಕಿ.ಮೀ ವೇಗದಲ್ಲಿ (ಗಂಟೆಗೆ 60 ಕಿ.ಮೀ ವರೆಗೆ ಏರಿಕೆಯಾಗಬಲ್ಲ) ಬಲವಾದ ಗಾಳಿ ಬೀಸಲಿದೆ ಎಂದು IMD ಮುನ್ಸೂಚನೆ ನೀಡಿದೆ.