

ಸಿಧಿ (ಮಧ್ಯಪ್ರದೇಶ): ಜನಸೇವೆಯೇ ಜನಾರ್ದನ ಸೇವೆ ಎನ್ನಲಾಗುತ್ತದೆ. ಆದರೆ ಅಧಿಕಾರದ ಮದ ತಲೆಗೇರಿದರೆ ಮನುಷ್ಯತ್ವ ಹೇಗೆ ಕಣ್ಮರೆಯಾಗುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಯಾಕಂದ್ರೆ, ಜನಾರ್ದನ ಅರ್ಥಾತ್ ಜನರ ಸೇವೆ ಮಾಡಲೆಂದು ವನ್ಯಜೀವಿಗಳ ದಾಳಿಯಿಂದ ಹಾನಿಗೊಳಗಾಗಿದ್ದ ಪ್ರದೇಶದ ಪರಿಶೀಲನೆಗೆ ಹೋದ ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಕಾಲು ಒದ್ದೆಯಾಗಬಾರದು ಎಂದು 65 ವರ್ಷದ ಹಿರಿಯ ಜೀವವೊಂದರ ಬೆನ್ನನ್ನೇ ವಾಹನ ಮಾಡಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಸಿಧಿ ಜಿಲ್ಲೆಯ ಕಂದಾಯ ಇಲಾಖೆಯ ಪಟವಾರಿ (ಕಂದಾಯ ಅಧಿಕಾರಿ) ನಿಲೇಶ್ ನಾಮದೇವ್ ಅವರು ಕಾಡು ಪ್ರಾಣಿಗಳಿಂದ ಹಾನಿಗೊಳಗಾಗಿದ್ದ ಮನೆ ಮತ್ತು ಜಮೀನಿನ ಸಮೀಕ್ಷೆ ನಡೆಸಲು ಮಾತಾ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ, ಸಂತ್ರಸ್ತ 65 ವರ್ಷದ ವೃದ್ಧ ಲಾಲ್ವಾ ಕೆವತ್ ಅವರ ಮನೆಗೆ ಹೋಗುವ ಮಾರ್ಗದಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ತುಂಬಿ ಹರಿಯುತ್ತಿತ್ತು. ಹಾಗಾಗಿ, ತನ್ನ ಬೂಟುಗಳು ಮತ್ತು ಬಟ್ಟೆಗಳು ಒದ್ದೆಯಾಗಬಾರದು ಎಂಬ ಕಾರಣಕ್ಕೆ, ತನಗೆ ನೀರು ದಾಟಿಸಿದರೆ ಮಾತ್ರ ಸಮೀಕ್ಷೆ ಮಾಡುವುದಾಗಿ ಅಧಿಕಾರಿ ವೃದ್ಧನಿಗೆ ಕಟ್ಟುನಿಟ್ಟಾಗಿ ಹೇಳಿದ್ದನೆನ್ನಲಾಗಿದೆ.
ಇನ್ನು, ಅಧಿಕಾರಿಯ ಮಾತಿಗೆ ಹೆದರಿದ ವೃದ್ಧ ಲಾಲ್ವಾ ಅವರು ಸುಮಾರು 45 ಸೆಕೆಂಡುಗಳ ಕಾಲ ಆ ಅಧಿಕಾರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ಆ ಚರಂಡಿ ನೀರನ್ನು ದಾಟಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯ ನಿವಾಸಿಯೊಬ್ಬರು ಮೊಬೈಲ್ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವಯಸ್ಸಾದ ವೃದ್ಧನ ಮೇಲೆಯೇ ಸವಾರಿ ಮಾಡಿದ ಅಧಿಕಾರಿಯ ಅಹಂಕಾರದ ವಿರುದ್ಧ ಸಾರ್ವಜನಿಕರು ಮತ್ತು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಪಟವಾರಿ ನಿಲೇಶ್ ನಾಮದೇವ್ನನ್ನು ಸೇವೆಯಿಂದ ತಕ್ಷಣವೇ ಅಮಾನತು ಮಾಡಿದ್ದಾರೆ.