

ನವದೆಹಲಿ: ಬ್ರಿಕ್ಸ್ (BRICS) ಶೃಂಗಸಭೆ ಕುರಿತು ಕಾಂಗ್ರೆಸ್ ಪಕ್ಷದೊಳಗಿನ ಭಿನ್ನ ನಿಲುವುಗಳನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಶೃಂಗಸಭೆಯಿಂದ ದೇಶಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಪಿ. ಚಿದಂಬರಂ ಪ್ರಶ್ನೆ ಎತ್ತಿದ ಮರುದಿನವೇ ಭಾರತ ಈ ಶೃಂಗಸಭೆಯನ್ನು ಆಯೋಜಿಸಿರುವುದನ್ನು ಹಿರಿಯ ನಾಯಕ ಶಶಿ ತರೂರ್ ಶ್ಲಾಘಿಸಿರುವುದು ಗಮನಾರ್ಹವಾಗಿದೆ.
ಬ್ರಿಕ್ಸ್ ಶೃಂಗಸಭೆಯ ಭಾರತದ ಆತಿಥ್ಯವನ್ನು "ಅತ್ಯಂತ ಪ್ರತಿಷ್ಠಿತ ವಿಷಯ" ಎಂದು ಬಣ್ಣಿಸಿದ ಹಾಗೂ 'ಗ್ಲೋಬಲ್ ಸೌತ್'ಗೆ (ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ) ಈ ಒಕ್ಕೂಟದ ಮಹತ್ವವನ್ನು ಎತ್ತಿ ತೋರಿಸಿದ ತರೂರ್ ಅವರ ಹೇಳಿಕೆಯ ನಂತರ, ಬಿಜೆಪಿ ರಾಷ್ಟ್ರೀಯ ವಕ್ತಾರ ಮತ್ತು ರಾಷ್ಟ್ರೀಯ ಮಾಧ್ಯಮ ಸಹ-ಉಸ್ತುವಾರಿ ಪ್ರದೀಪ್ ಭಂಡಾರಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, "ಕಾಂಗ್ರೆಸ್ನಿಂದಲೇ ಕಾಂಗ್ರೆಸ್ ಬಟಾಬಯಲು! ...ರಾಹುಲ್ ಗಾಂಧಿ ಅವರ ಸೂಚನೆಯ ಮೇರೆಗೆ ಬ್ರಿಕ್ಸ್ ಅನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ನ 'ನರಾಜ್ ಫುಫಾ' (ಅಸಮಾಧಾನಿತ ಚಿಕ್ಕಪ್ಪ) ಅವರನ್ನು ಕಾಂಗ್ರೆಸ್ ಸಂಸದರೇ ಬಯಲು ಮಾಡಿದ್ದಾರೆ! ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಬ್ರಿಕ್ಸ್ ಅನ್ನು 'ಗ್ಲೋಬಲ್ ಸೌತ್'ನ ಪ್ರಮುಖ ವೇದಿಕೆ ಎಂದು ಬಣ್ಣಿಸಿರುವ ತರೂರ್: ದೆಹಲಿಯಲ್ಲಿ ನಡೆದ ಶೃಂಗಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತರೂರ್, ಬ್ರಿಕ್ಸ್ನ ವ್ಯಾಪ್ತಿ ಮತ್ತು 'ಗ್ಲೋಬಲ್ ಸೌತ್'ಗೆ ಅದರ ಪ್ರಸ್ತುತತೆಯನ್ನು ಒತ್ತಿ ಹೇಳಿದರು. 'ಗ್ಲೋಬಲ್ ಸೌತ್' 100ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿದೆ ಮತ್ತು ಬ್ರಿಕ್ಸ್ನ 11 ಸದಸ್ಯ ರಾಷ್ಟ್ರಗಳು ಆ ಗುಂಪಿನೊಳಗಿನ ವೈವಿಧ್ಯಮಯ ದೃಷ್ಟಿಕೋನಗಳು ಹಾಗೂ ದೇಶಗಳನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು.
11 ಸದಸ್ಯರನ್ನು ಹೊಂದಿರುವ ಈ ಒಕ್ಕೂಟವು ವಿಶ್ವದ ಬಹುಪಾಲು ಜನಸಂಖ್ಯೆಯನ್ನು ಮತ್ತು ಜಾಗತಿಕ ಜಿಡಿಪಿಯ (ಒಟ್ಟು ಆಂತರಿಕ ಉತ್ಪನ್ನ) ಶೇಕಡಾ 41 ರಷ್ಟನ್ನು ಪ್ರತಿನಿಧಿಸುತ್ತದೆ ಎಂದು ಅವರು ತಿಳಿಸಿದರು.
"ಮೊದಲನೆಯದಾಗಿ, ನಾವು 'ಗ್ಲೋಬಲ್ ಸೌತ್'ಗೆ (ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ) ಒಂದು ಪ್ರಮುಖ ಮಂಚವನ್ನುಒದಗಿಸುತ್ತಿದ್ದೇವೆ. 'ಗ್ಲೋಬಲ್ ಸೌತ್' ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ದೇಶಗಳಿದ್ದರೂ, ಇಲ್ಲಿ ಆ ಗುಂಪಿನ 11 ಪ್ರಮುಖ ದೇಶಗಳು ಭಾಗವಹಿಸುತ್ತಿವೆ. ಇವು ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿವೆ. ಈ 11 ಬ್ರಿಕ್ಸ್ (BRICS) ದೇಶಗಳ ಗುಂಪು ವಿಶ್ವದ ಬಹುಪಾಲು ಜನಸಂಖ್ಯೆಯನ್ನು ಮತ್ತು ಜಾಗತಿಕ ಜಿಡಿಪಿಯ (GDP) ಶೇ. 41ರಷ್ಟನ್ನು ಪ್ರತಿನಿಧಿಸುತ್ತದೆ," ಎಂದು ತರೂರ್ ಬ್ರಿಕ್ಸ್ನ ಮಹತ್ವವನ್ನು ವಿವರಿಸಿದರು.
ಈ ಶೃಂಗಸಭೆಯನ್ನು ಆಯೋಜಿಸುವ ಭಾರತದ ನಿರ್ಧಾರವನ್ನೂ ಸಮರ್ಥಿಸಿಕೊಂಡ ತರೂರ್, ಹಲವಾರು ರಾಷ್ಟ್ರ ಮತ್ತು ಸರ್ಕಾರಗಳ ಮುಖ್ಯಸ್ಥರ ಉಪಸ್ಥಿತಿಯು ದೇಶಕ್ಕೆ ಒಂದು ಲಾಭದಾಯಕ ಅಂಶವಾಗಿದೆ ಎಂದು ಪ್ರತಿಪಾದಿಸಿದರು. "ಎರಡನೆಯದಾಗಿ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳಲ್ಲದೆ, ವೀಕ್ಷಕ ರಾಷ್ಟ್ರಗಳ ಮುಖ್ಯಸ್ಥರು (ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳ ಮಟ್ಟದಲ್ಲಿ) ಕೂಡ ಇಲ್ಲಿಗೆ ಆಗಮಿಸುತ್ತಿರುವುದು ನಮಗೆ ಅತ್ಯಂತ ಪ್ರತಿಷ್ಠೆಯ ವಿಷಯವಾಗಿದೆ. ಇದು ಭಾರತದ ರಾಜತಾಂತ್ರಿಕ ಒಗ್ಗೂಡಿಸುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಜಾಗತಿಕ ವೇದಿಕೆಯಲ್ಲಿ ಈ ಸಾಮರ್ಥ್ಯಕ್ಕೆ ತನ್ನದೇ ಆದ ಮೌಲ್ಯವಿದೆ ಎಂದು ಅವರು ಹೇಳಿದರು.
ಬ್ರಿಕ್ಸ್ ಶೃಂಗಸಭೆಗಳು ಭಾರತಕ್ಕೆ ಪ್ರಯೋಜನಗಳನ್ನು ನೀಡಿದ್ದೆಯೇ ಎಂದು ಚಿದಂಬರಂ ಪ್ರಶ್ನಿಸಿದ ಮರುದಿನವೇ ತರೂರ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಶಾಂಘೈ ಸಹಕಾರ ಸಂಘಟನೆ (SCO), ಜಿ-20 ಮತ್ತು ಕ್ವಾಡ್ (QUAD) ನಂತಹ ಇತರ ಬಹುಪಕ್ಷೀಯ ಗುಂಪುಗಳಲ್ಲಿನ ಭಾರತದ ಸದಸ್ಯತ್ವದೊಂದಿಗೆ ಬ್ರಿಕ್ಸ್ನಲ್ಲಿನ ಭಾರತದ ಭಾಗವಹಿಸುವಿಕೆಯನ್ನು ಚಿದಂಬರಂ ಹೋಲಿಕೆ ಮಾಡಿದರು. "ಕಳೆದ ಎರಡು ಅಥವಾ ಮೂರು ಬ್ರಿಕ್ಸ್ ಶೃಂಗಸಭೆಗಳು ಯಾವುದೇ ಸ್ಪಷ್ಟ ಪ್ರಯೋಜನಗಳನ್ನು ಅಥವಾ ಫಲಿತಾಂಶಗಳನ್ನು ನೀಡಿವೆ ಎಂದು ನನಗೆ ಅನಿಸುವುದಿಲ್ಲ ಎಂದು ಚಿದಂಬರಂ ಎಎನ್ಐ (ANI) ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಕಳೆದ ಎರಡು-ಮೂರು ಬ್ರಿಕ್ಸ್ ಶೃಂಗಸಭೆಗಳಿಂದ ಯಾವುದೇ ಲಾಭ ಆಗಿಲ್ಲ ಎಂದು ಚಿದಂಬರಂ ಹೇಳಿದ್ದರು. ಈ ಭಿನ್ನ ಹೇಳಿಕೆಗಳನ್ನು ಬಳಸಿಕೊಂಡು ಭಂಡಾರಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನವನ್ನು ಎತ್ತಿ ತೋರಿಸುವ ಬೆಳವಣಿಗೆಗಳನ್ನು ವಿರೋಧಿಸುತ್ತಿದೆ ಎಂದು ಅವರು ಪ್ರತಿಪಕ್ಷದ ವಿರುದ್ಧ ಆರೋಪಿಸಿದ್ದಾರೆ.
ಎಎನ್ಐ ಜೊತೆ ಮಾತನಾಡಿದ ಅವರು, ಭಾರತವು ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸುತ್ತಿರುವಾಗ ಕಾಂಗ್ರೆಸ್ ಪಕ್ಷ ಅಸಮಾಧಾನಗೊಂಡಿರುವ 'ನರಾಜ್ ಫೂಫಾ' (ಮನನೊಂದ ಚಿಕ್ಕಪ್ಪ/ಮಾವ) ನಂತೆ ವರ್ತಿಸುತ್ತಿದೆ.
ಭಾರತದ ಪ್ರಗತಿಗೆ ಸಂಬಂಧಿಸಿದ ಅಥವಾ ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನವನ್ನು ಹೆಚ್ಚಿಸುವ ಕ್ರಮಗಳನ್ನು ಕಾಂಗ್ರೆಸ್ ಯಾವಾಗಲೂ ವಿರೋಧಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸುವ ಬೆಳವಣಿಗೆಗಳನ್ನು ಆ ಪಕ್ಷವು ವಿರೋಧಿಸುತ್ತದೆ ಎಂದು ಅವರು ಹೇಳಿದ್ದಾರೆ.