ಸೆ.12ಕ್ಕೆ ಬ್ರಿಕ್ಸ್ ಶೃಂಗಸಭೆ: ಕುತೂಹಲ ಮೂಡಿಸಿದ ಮೋದಿ–ಕ್ಸಿ ಜಿನ್‌ಪಿಂಗ್ ದ್ವಿಪಕ್ಷೀಯ ಮಾತುಕತೆ; 2020ರ ಗಲ್ವಾನ್ ಸಂಘರ್ಷ ಬಳಿಕ ಮೊದಲ ಭೇಟಿ

ಶೃಂಗಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಭಾಗವಹಿಸುವುದನ್ನು ಚೀನಾ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.
PM Narendra Modi and Xi Jinping
ಪ್ರಧಾನಿ ನರೇಂದ್ರ ಮೋದಿ-ಕ್ಸಿ ಜಿನ್ ಪಿಂಗ್
Updated on

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶನಿವಾರ ಸೆಪ್ಟೆಂಬರ್ 12ರಂದು ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಭೆ ನಡೆಸುವ ಸಾಧ್ಯತೆ ಇದೆ.

ಶನಿವಾರ ಬೆಳಗ್ಗೆ ಸುಮಾರು 11 ಗಂಟೆಗೆ ಕ್ಸಿ ಜಿನ್‌ಪಿಂಗ್ ದೆಹಲಿಗೆ ಆಗಮಿಸುವ ನಿರೀಕ್ಷೆಯಿದ್ದು, ಭಾನುವಾರ ಇದೇ ಸಮಯದ ಸುಮಾರಿಗೆ ಅವರು ಭಾರತದಿಂದ ನಿರ್ಗಮಿಸಲಿದ್ದಾರೆ. ಅವರೊಂದಿಗೆ ಹಿರಿಯ ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮ ಪ್ರತಿನಿಧಿಗಳನ್ನು ಒಳಗೊಂಡ ದೊಡ್ಡ ನಿಯೋಗ ಆಗಮಿಸಲಿದೆ.

ಶೃಂಗಸಭೆಯಲ್ಲಿ ಕ್ಸಿ ಜಿನ್‌ಪಿಂಗ್ ಭಾಗವಹಿಸುವುದನ್ನು ಚೀನಾ ವಿದೇಶಾಂಗ ಸಚಿವಾಲಯ ನಿನ್ನೆ ಅಧಿಕೃತವಾಗಿ ದೃಢಪಡಿಸಿದೆ.

2019ರಲ್ಲಿ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭಕ್ಕಿಂತ ಈ ಬಾರಿ ಅವರೊಂದಿಗೆ ಆಗಮಿಸುವ ನಿಯೋಗದ ಗಾತ್ರ ದ್ವಿಗುಣವಾಗಿದ್ದು, ಸುಮಾರು 400 ಅಧಿಕಾರಿಗಳು ಇರಲಿದ್ದಾರೆ ಎಂದು ರಾಯಿಟರ್ಸ್‌ ಈ ಹಿಂದೆ ವರದಿ ಮಾಡಿತ್ತು.

ಕ್ಸಿ ಜಿನ್‌ಪಿಂಗ್ ಅವರ ಭಾಗವಹಿಸುವಿಕೆಯನ್ನು ಚೀನಾ ಇನ್ನೂ ದೃಢಪಡಿಸಿಲ್ಲ. ಆದರೆ, ಚೀನಾ ವಿದೇಶಾಂಗ ಸಚಿವಾಲಯ ಈ ಹಿಂದೆ, ದೇಶವು ಬ್ರಿಕ್ಸ್‌ ಸಹಕಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ ಮತ್ತು ಸಕ್ರಿಯವಾಗಿ ಭಾಗವಹಿಸುತ್ತದೆ ಎಂದು ಹೇಳಿದ್ದು, ಆತಿಥೇಯ ರಾಷ್ಟ್ರವಾದ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.

2020ರಲ್ಲಿ ಚೀನಾ ನಡೆಸಿದ ಗಡಿ ಅತಿಕ್ರಮಣಗಳು, ಭಾರತದ ಭೂಪ್ರದೇಶದ ಹೊಸ ಪ್ರದೇಶಗಳ ಆಕ್ರಮಣ ಹಾಗೂ ಭಾರತೀಯ ಸೈನಿಕರ ಮೇಲಿನ ದಾಳಿಗಳು ಉಭಯ ದೇಶಗಳ ಸಂಬಂಧವನ್ನು ತೀವ್ರವಾಗಿ ಹದಗೆಡಿಸಿದ್ದವು. 1962ರ ಯುದ್ಧದ ಬಳಿಕದ ಅತ್ಯಂತ ಕೆಳಮಟ್ಟಕ್ಕೆ ಸಂಬಂಧಗಳು ಕುಸಿದಿದ್ದವು. ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ದಾಳಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಲಡಾಖ್‌ನಲ್ಲಿ ಸೇನಾ ಸಂಘರ್ಷದ ಜತೆಗೆ, ಭಾರತವು ಚೀನಾದ ಹೂಡಿಕೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತು. ಅಲ್ಲದೆ, ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸುವ ಪ್ರಕ್ರಿಯೆಯನ್ನೂ ಆರಂಭಿಸಿತು.

PM Narendra Modi and Xi Jinping
‘BRICS‌ ನಿಂದ ಭಾರತಕ್ಕೇನು ಲಾಭ?’: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನೆ, ತಿರುಗೇಟು ಕೊಟ್ಟ BJP

ಆದರೆ, ಕಳೆದ ಎರಡು ವರ್ಷಗಳಲ್ಲಿ ಭಾರತ ಮತ್ತು ಚೀನಾ ನಡುವಿನ ಹಲವು ಭಿನ್ನಾಭಿಪ್ರಾಯಗಳು ಹಂತಹಂತವಾಗಿ ಕಡಿಮೆಯಾಗಿವೆ. ಲಡಾಖ್‌ನಲ್ಲಿ ಹಿಂದಿನ ಸ್ಥಿತಿಗತಿ ಇನ್ನೂ ಸಂಪೂರ್ಣವಾಗಿ ಪುನಃಸ್ಥಾಪನೆಯಾಗಿಲ್ಲ. ಅಲ್ಲದೆ, ಅರುಣಾಚಲ ಪ್ರದೇಶದ ಮೇಲಿನ ಹಕ್ಕು ಪ್ರತಿಪಾದನೆಯನ್ನು ಚೀನಾ ಮುಂದುವರಿಸಿದ್ದು, ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ.

2024ರ ಅಕ್ಟೋಬರ್‌ನಲ್ಲಿ ಹಲವು ಸುತ್ತಿನ ಮಾತುಕತೆಗಳ ಬಳಿಕ, ಲಡಾಖ್‌ನಲ್ಲಿನ ಸೇನಾ ಸಂಘರ್ಷವನ್ನು ಭಾಗಶಃ ಪರಿಹರಿಸುವ ಕುರಿತು ಭಾರತ ಮತ್ತು ಚೀನಾ ಒಮ್ಮತಕ್ಕೆ ಬಂದಿದ್ದವು. ಈ ಒಪ್ಪಂದವು ಅದೇ ವರ್ಷ ರಷ್ಯಾದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಗೆ ಮಾರ್ಗವನ್ನು ಸುಗಮಗೊಳಿಸಿತ್ತು. ಅಂದಿನಿಂದ ಉಭಯ ದೇಶಗಳು ಉನ್ನತ ಮಟ್ಟದ ನಿಯಮಿತ ಸಂಪರ್ಕವನ್ನು ಮುಂದುವರಿಸಿವೆ.

ಸಂಬಂಧಗಳಲ್ಲಿ ಸುಧಾರಣೆ ಬದಲು ಎಚ್ಚರಿಕೆಯ ಸಹಭಾಗಿತ್ವ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಎದುರಾಗುತ್ತಿರುವ ಸಾಮಾನ್ಯ ಸವಾಲುಗಳ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಎಚ್ಚರಿಕೆಯಿಂದ ಪರಸ್ಪರ ತೊಡಗಿಸಿಕೊಂಡು, ಕಾರ್ಯನಿರ್ವಹಣಾ ಸಂಬಂಧವನ್ನು ರೂಪಿಸಿಕೊಳ್ಳುತ್ತಿವೆ.

ಆದಾಗ್ಯೂ, ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಸಂಪೂರ್ಣ ಸುಧಾರಣೆ ಇನ್ನೂ ದೂರದಲ್ಲಿದೆ. ಹಲವು ಮೂಲಭೂತ ಸಮಸ್ಯೆಗಳು ಮುಂದುವರಿದಿವೆ. ಭಾರತದ ಪ್ರಾದೇಶಿಕ ಸಾರ್ವಭೌಮತ್ವವನ್ನು ಚೀನಾ ನಿರಂತರವಾಗಿ ತಿರಸ್ಕರಿಸುತ್ತಿದೆ. ಅಲ್ಲದೆ, ಪಾಕಿಸ್ತಾನ ಮತ್ತು ಭಾರತದ ವಿರುದ್ಧದ ಅದರ ಭಯೋತ್ಪಾದಕ ಚಟುವಟಿಕೆಗಳಿಗೆ ಚೀನಾ ಬಲವಾದ ಬೆಂಬಲ ನೀಡುತ್ತಿದೆ.

ಅಪರೂಪದ ಭೂಮಿಯ ಲೋಹಗಳು (Rare Earths) ಮತ್ತು ಪ್ರಮುಖ ಖನಿಜಗಳ ಸುಗಮ ಲಭ್ಯತೆಯನ್ನು ಚೀನಾ ನಿರಾಕರಿಸುತ್ತಿದೆ. ಗಡಿ ವಿಚಾರದಲ್ಲಿ ಗಂಭೀರ ಮಾತುಕತೆ ನಡೆಸುವುದನ್ನೂ ಚೀನಾ ತಪ್ಪಿಸುತ್ತಿದ್ದು, ಬದಲಾಗಿ ಹಂತ ಹಂತವಾಗಿ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ನಿಲುವನ್ನು ಪ್ರತಿಪಾದಿಸುತ್ತಿದೆ.

ಕಳೆದ ವರ್ಷ ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಚೀನಾ ಪಾಕಿಸ್ತಾನಕ್ಕೆ ನೈಜ-ಸಮಯದ ಗುಪ್ತಚರ ಮಾಹಿತಿ ಒದಗಿಸಿತ್ತು. ಚೀನಾದ ಬೆಂಬಲದ ಪ್ರಮಾಣ ಎಷ್ಟಿತ್ತೆಂದರೆ, ಸಂಘರ್ಷ ಒಂದು ಗಡಿಯಲ್ಲೇ ನಡೆದಿದ್ದರೂ ಭಾರತವು ಪಾಕಿಸ್ತಾನ, ಚೀನಾ ಮತ್ತು ಟರ್ಕಿ—ಮೂರು ಪ್ರತಿಸ್ಪರ್ಧಿಗಳ ವಿರುದ್ಧ ಹೋರಾಡಿತು ಎಂದು ಭಾರತೀಯ ಸೇನೆಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಹೇಳಿದ್ದರು.

ಎರಡೂ ದೇಶಗಳ ಕಡೆಯಿಂದ ಸಂಬಂಧ ಸುಧಾರಿಸುವ ಭರವಸೆಯ ಮಾತುಗಳು ಕೇಳಿಬರುತ್ತಿದ್ದರೂ, ವ್ಯವಹಾರಿಕ ಸಂಬಂಧಗಳು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ರಾಷ್ಟ್ರೀಯ ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಭಾರತದ ತ್ವರಿತ ಪಾವತಿ ವ್ಯವಸ್ಥೆಗೆ ಚೀನಾದ ಅಲಿಪೇ (Alipay) ಅನ್ನು ಸಂಪರ್ಕಿಸುವ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿದೆ ಎಂದು ರಾಯಿಟರ್ಸ್‌ ಕಳೆದ ವಾರ ವರದಿ ಮಾಡಿತ್ತು.

ಭಾರತದಲ್ಲಿ ವ್ಯವಹಾರ ನಡೆಸುವಾಗ ಅಕ್ರಮಗಳೆಸಗಿದ ಹಾಗೂ ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪಗಳ ಹಿನ್ನೆಲೆಯಲ್ಲಿ ಚೀನಾದ ಮೊಬೈಲ್‌ ತಯಾರಕ ಕಂಪನಿ ಶಿಯೋಮಿ (Xiaomi) ವಿರುದ್ಧ ತನಿಖೆ ನಡೆಸುವಂತೆ ಗಂಭೀರ ವಂಚನೆ ತನಿಖಾ ಕಚೇರಿ (SFIO) ಮಾಡಿರುವ ಶಿಫಾರಸನ್ನೂ ಭಾರತ ಪರಿಶೀಲಿಸುತ್ತಿದೆ.

ಭಾರತದ ಮತ್ತೊಂದು ಕಳವಳವೆಂದರೆ, ಚೀನಾ ತನ್ನ ಕಂಪನಿಗಳಿಗೆ ಭಾರತಕ್ಕೆ ಬಂದರು ಉಪಕರಣಗಳು, ಸೌರ ಫಲಕಗಳು ಮತ್ತು ಮೊಬೈಲ್‌ ತಯಾರಿಕಾ ಉಪಕರಣಗಳು ಸೇರಿದಂತೆ ಪ್ರಮುಖ ತಂತ್ರಜ್ಞಾನ ಹಾಗೂ ಮೂಲಸೌಕರ್ಯಗಳನ್ನು ಮಾರಾಟ ಮಾಡದಂತೆ ಸೂಚಿಸಿದೆ ಎಂಬುದು.

ಅಪರೂಪದ ಭೂಮಿಯ ಲೋಹಗಳು ಮತ್ತು ಪ್ರಮುಖ ಖನಿಜಗಳನ್ನು ಅಸ್ತ್ರವಾಗಿ ಬಳಸುತ್ತಿರುವ ಕ್ರಮಗಳ ಬೆನ್ನಲ್ಲೇ ಈ ಚೀನಾದ ನಿರ್ದೇಶನಗಳು ಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com