

ಮಹಾರಾಜ್ಗಂಜ್: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದಾಗ, ಇದನ್ನು ಗಮನಿಸಿದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಜೀವದ ಹಂಗು ತೊರೆದು ಕಾಲುವೆಗೆ ಹಾರಿ ಆಕೆಯ ಜೀವ ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿಚ್ಲೌಲ್–ಸಿಸ್ವಾ ರಸ್ತೆಯ ಸಾತ್ಪಂಚ್ ಸೇತುವೆ ಬಳಿ, ನಾರಾಯಣಿ ಕಾಲುವೆಯ ಸಂಭವಿಸಬಹುದಾಗಿದ್ದ ದುರಂತ ತಪ್ಪಿದೆ.
ಮೂಲಗಳ ಪ್ರಕಾರ ಕೊಠೀಭಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜೆಹ್ದಾ ಗ್ರಾಮದ ನಿವಾಸಿಯಾಗಿರುವ ಮಹಿಳೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನನೊಂದು ಸೇತುವೆಯ ಮೇಲೆ ಕೆಲಕಾಲ ನಿಂತಿದ್ದರು. ಬಳಿಕ ಏಕಾಏಕಿ ಕಾಲುವೆಗೆ ಹಾರಿದ್ದಾರೆ.
ಇದೇ ವೇಳೆ ಅಲ್ಲಿಂದ ತೆರಳುತ್ತಿದ್ದ ಸೆಖುಯಿ ಗ್ರಾಮದ ಕೃಷ್ಣ ಗುಪ್ತಾ ಹಾಗೂ ಕೊಹಡ್ವಾಲ್ ಗ್ರಾಮದ ಸದ್ದಾಂ ಹುಸೇನ್ ಮಹಿಳೆ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ್ದಾರೆ. ಇಬ್ಬರೂ ಮಹಾರಾಜ್ಗಂಜ್ನ ಮಸೀಹ್ ಸೇವಾಶ್ರಮ ಇಂಟರ್ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಮಹಿಳೆ ಅಪಾಯದಲ್ಲಿರುವುದನ್ನು ಕಂಡ ವಿದ್ಯಾರ್ಥಿಗಳು ಕ್ಷಣವೂ ಯೋಚಿಸದೆ ವೇಗವಾಗಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿದ್ದಾರೆ. ತಮ್ಮ ಜೀವದ ಹಂಗು ತೊರೆದು ವೇಗವಾಗಿ ಹರಿಯುತ್ತಿದ್ದ ಕಾಲುವೆಗೆ ಜಿಗಿದ ಇಬ್ಬರು ವಿದ್ಯಾರ್ಥಿಗಳು ಆಕೆಯನ್ನು ರಕ್ಷಿಸಿ, ಸುರಕ್ಷಿತವಾಗಿ ನೀರಿನಿಂದ ಹೊರಗೆ ಎಳೆದು ತಂದು ಆಕೆಯ ಜೀವ ಉಳಿಸಿದ್ದಾರೆ.
ವಿದ್ಯಾರ್ಥಿಗಳ ಸಮಯಪ್ರಜ್ಞೆ ಹಾಗೂ ಧೈರ್ಯಕ್ಕೆ ಸ್ಥಳೀಯರು ಮತ್ತು ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವದ ಸುರಕ್ಷತೆಯನ್ನೂ ಲೆಕ್ಕಿಸದೆ ಅಪಾಯದ ಸ್ಥಿತಿಯಲ್ಲಿದ್ದ ಮಹಿಳೆಯನ್ನು ರಕ್ಷಿಸಿದ ಇಬ್ಬರು ವಿದ್ಯಾರ್ಥಿಗಳ ಸಾಹಸ ಇದೀಗ ಎಲ್ಲರ ಗಮನ ಸೆಳೆದಿದೆ.