

ಜಮ್ಮು: ಭಾರತದ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಲಷ್ಕರ್ -ಇ- ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲದೇ, ಕಳೆದ ಎರಡು ತಿಂಗಳಲ್ಲಿ ಆತನ ವಿರುದ್ಧ ಎರಡನೇ ಬಾರಿಗೆ ಜಾಮೀನು ರಹಿತ ವಾರಂಟ್ ಪಡೆದುಕೊಂಡಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ಸೂಚನೆಗಳನ್ನು ನೀಡುತ್ತಿರುವುದಕ್ಕೆ ಸಂಬಂಧಿಸಿದ ಭಯೋತ್ಪಾದನಾ ಪ್ರಕರಣವೊಂದರಲ್ಲಿ ಈ ವಾರಂಟ್ ಹೊರಡಿಸಲಾಗಿದೆ. ಈ ಪ್ರಕರಣ ಈ ವರ್ಷದ ಆರಂಭದಲ್ಲಿ ಶ್ರೀನಗರದ ಹೊರವಲಯ ಪಂಡಾಚ್ನಲ್ಲಿ ನಡೆದ ಮೊಹಮ್ಮದ್ ನಕೀಬ್ ಭಟ್ನ ಬಂಧನಕ್ಕೆ ಸಂಬಂಧಿಸಿದೆ.
ತನಿಖೆ ವೇಳೆ ಭಯೋತ್ಪಾದಕ ಜಾಲವೊಂದನ್ನು ಪತ್ತೆಹಚ್ಚಲು, ಎಲ್ ಇಟಿ ಹಾಗೂ ಅದರ ಅಂಗಸಂಸ್ಥೆಯಾದ 'ದಿ ರೆಸಿಸ್ಟೆನ್ಸ್ ಫ್ರಂಟ್' (TRF) ನೊಂದಿಗೆ ಸಂಪರ್ಕ ಹೊಂದಿದ್ದ ಇನ್ನೂ ಹಲವು ಭಯೋತ್ಪಾದಕರು ಹಾಗೂ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲು ಕಾರಣವಾಯಿತು ಎಂದು ಸಂಸ್ಥೆ ತಿಳಿಸಿದೆ.
'ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ'ಯ ಸೆಕ್ಷನ್ 75 ರ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟಿರುವ ಸಯೀದ್ ವಿರುದ್ಧ ಜಾಮೀನು ರಹಿತ ವಾರಂಟ್ ಕೋರಿ ಎನ್ಐಎ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಪಾಕಿಸ್ತಾನದ ಪಂಜಾಬ್ನ ಸರ್ಗೋಧಾ ನಿವಾಸಿಯಾಗಿರುವ ಸಯೀದ್ನನ್ನು ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ವಿವರಿಸಿದೆ.
ಬತ್ಪೊರಾದ ನಿವಾಸಿಯಾಗಿರುವ ಭಟ್ನಿಂದ ಚೀನಾ ನಿರ್ಮಿತ ಗ್ರೆನೇಡ್ ಮತ್ತು 15 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆತನ ವಿರುದ್ಧ ಝಕೂರ ಪೊಲೀಸ್ ಠಾಣೆಯಲ್ಲಿ ಯುಎಪಿಎ (UAPA), ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ವೇಳೆ ಸಯೀದ್ನ ಪಾತ್ರ ಬೆಳಕಿಗೆ ಬಂದಿದೆ ಮತ್ತು ಬಂಧಿತ ಪಾಕಿಸ್ತಾನಿ ಭಯೋತ್ಪಾದಕರು ಆತನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಎನ್ಐಎ ತಿಳಿಸಿದೆ.
ಸಯೀದ್ ಪಾಕಿಸ್ತಾನದಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದು, ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳು, ಹಣ ಮತ್ತು ನಿರ್ದೇಶನಗಳನ್ನು ಒದಗಿಸುತ್ತಿದ್ದಾನೆ. ಈತ ಪ್ರಸ್ತುತ ಪಾಕಿಸ್ತಾನದಲ್ಲಿದ್ದಾನೆ ಮತ್ತು ಕಾನೂನಿನ ಕ್ರಮದಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ತಿಳಿಸಿತು.
ತನಿಖಾ ಸಂಸ್ಥೆಯ ವಾದವನ್ನು ಆಲಿಸಿದ ನಂತರ, ಎನ್ಐಎ (NIA) ಕಾಯ್ದೆಯಡಿ ವಿಶೇಷ ನ್ಯಾಯಾಧೀಶರಾಗಿರುವ ಪ್ರೇಮ್ ಸಾಗರ್ , ತನಿಖೆಯ ವೇಳೆ ಸಯೀದ್ನ ಪಾತ್ರ ಬೆಳಕಿಗೆ ಬಂದಿದೆ ಮತ್ತು ಆತ "ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ" ಎಂದು ಅಭಿಪ್ರಾಯಪಟ್ಟರು.
ಆತ ತಲೆಮರೆಸಿಕೊಂಡಿದ್ದು, ತನಿಖಾ ಸಂಸ್ಥೆಗೆ ಆತನನ್ನು "ಸಾಮಾನ್ಯ ವಿಧಾನದ ಮೂಲಕ" ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯವು, ಆತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು.
ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯವು ಎಲ್ಇಟಿ (LeT) ಸಂಸ್ಥಾಪಕನ ವಿರುದ್ಧ ಎರಡು ತಿಂಗಳ ಅವಧಿಯಲ್ಲಿ ಹೊರಡಿಸಿದ ಎರಡನೇ ಜಾಮೀನು ರಹಿತ ವಾರಂಟ್ ಇದಾಗಿದೆ. ಕಳೆದ ಏಪ್ರಿಲ್ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಜುಲೈ 8 ರಂದು ಸಯೀದ್ ವಿರುದ್ಧ ಮೊದಲ ವಾರಂಟ್ ಹೊರಡಿಸಿತ್ತು.