

ತಿರುನೆಲ್ವೇಲಿ: ಚಿಕನ್ ಬಿರಿಯಾನಿ ತಿನ್ನುತ್ತಿರುವ ಗಣೇಶನ ಬ್ಯಾನರ್ ಹಾಕಿದ್ದ ಅಂಗಡಿಯ ಮಾಲೀಕರೊಬ್ಬರನ್ನು ಬಂಧಿಸಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.
ವಿನಾಯಕ ಚತುರ್ಥಿಯ ಪ್ರಯುಕ್ತ ಪ್ರಚಾರಕ್ಕಾಗಿ, ತಿರುನೆಲ್ವೇಲಿ-ತಿರುಚೆಂದೂರ್ ಮುಖ್ಯ ರಸ್ತೆಯಲ್ಲಿರುವ ವಿಎಂ ಛತ್ರಂ (VM Chatram) ಬಳಿಯ 'ದಿಂಡಿಗಲ್ ಕಲ್ಯಾಣ ಬಿರಿಯಾನಿ' ಅಂಗಡಿಯ ಹೊರಗೆ ಈ ಬ್ಯಾನರ್ ಅನ್ನು ಹಾಕಲಾಗಿತ್ತು.
ಹಬ್ಬದ ಅವಧಿಯಲ್ಲಿ ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ, ಗಣೇಶನು ಬಿರಿಯಾನಿ ತಯಾರಿಸುತ್ತಿರುವ ಫೋಟೋವನ್ನು ಇದರಲ್ಲಿ ಬಳಸಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬ್ಯಾನರ್ ವೈರಲ್ ಆಗುತ್ತಿದ್ದಂತೆಯೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಸ್ಥಳೀಯ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದರಿಂದ ಜನರು ಸಿಡಿದೆದಿದ್ದು, ಅಂಗಡಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಗಳು ಹೆಚ್ಚಾದವು ಎಂದು ವರದಿ ತಿಳಿಸಿದೆ.
ಈ ಸಂಬಂಧ ನೆಲ್ಲೈ ನರಸಿಂಹನಲ್ಲೂರ್ನ ನಿವಾಸಿ 42 ವರ್ಷದ ಸೆಲ್ವರಾಜ್ ತಿರುನೆಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಗಣೇಶನು ಬಿರಿಯಾನಿ ತಯಾರಿಸುತ್ತಿರುವಂತೆ ಬ್ಯಾನರ್ ಹಾಕುವುದು ಹಿಂದೂ ಸಮುದಾಯಕ್ಕೆ ಮಾಡಿದ ಅವಮಾನಕರವಾಗಿದ್ದು, ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ವರದಿ ಹೇಳಿದೆ.
ಬಳಿಕ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ನಡೆಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ ಸಂಬಂಧಿಸಿದ 'ಭಾರತೀಯ ನ್ಯಾಯ ಸಂಹಿತೆ'ಯ ಸೆಕ್ಷನ್ 299 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.