

ಚಂಡೀಗಢ: ಉತ್ತರ ಭಾರತದ ಬಹುದಿನಗಳ ನೀರಿನ ದಾಹ ತಣಿಸಲು ಕೊನೆಗೂ ಕಾಲ ಕೂಡಿಬಂದಿದೆ. ಅದರಂತೆ, ದೇಶದ ಅತಿ ದೊಡ್ಡ ನದಿ ನೀರಿನ ಹಂಚಿಕೆ ವಿವಾದ ಕೇಂದ್ರ ಸರ್ಕಾರ ಬಗೆಹರಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮಹತ್ವದ ಕಿಶೌ ಬಹುಮುಖಿ ಯೋಜನೆ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಬೃಹತ್ ಯೋಜನೆಯಿಂದ ಸುಮಾರು ಒಂದು ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರು, 660 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾತ್ರವಲ್ಲದೆ, ಕಲುಷಿತಗೊಂಡಿರುವ ಯಮುನಾ ನದಿಯ ಪುನರುಜ್ಜೀವನವೂ ಸಾಧ್ಯವಾಗಲಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಕಿಶೌ ಬಹುಪಯೋಗಿ ಯೋಜನೆ?
ಉತ್ತರ ಭಾರತದ ದೆಹಲಿ ಸೇರಿದಂತೆ ಆರು ರಾಜ್ಯಗಳ ನೀರಿನ ಮತ್ತು ವಿದ್ಯುತ್ ದಾಹವನ್ನು ನೀಗಿಸಲು ರೂಪಿಸಲಾಗಿರುವ ಕಿಶೌ ಬಹುಪಯೋಗಿ ಯೋಜನೆಯನ್ನು ಉತ್ತರಾಖಂಡದ ಡೆಹ್ರಾಡೂನ್ ಮತ್ತು ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಗಳ ಗಡಿಯಲ್ಲಿ ಹರಿಯುವ ಟೋನ್ಸ್ ನದಿಗೆ ಅಡ್ಡಲಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಮೂಲಕ ದೇಶದ ರಾಜಧಾನಿ ದೆಹಲಿಯ ಅತ್ಯಂತ ದೊಡ್ಡ ಸಮಸ್ಯೆಯಾದ ಕುಡಿಯುವ ನೀರಿನ ಕೊರತೆಗೆ ಮುಕ್ತಿ ಸಿಗಲಿದೆ. ಈ ಯೋಜನೆಯಿಂದ ದೆಹಲಿಗೆ ವಾರ್ಷಿಕವಾಗಿ 617 ಮಿಲಿಯನ್ ಕ್ಯೂಬಿಕ್ ಮೀಟರ್ ಕುಡಿಯುವ ನೀರು ಲಭ್ಯವಾಗಲಿದೆ. ಇದರೊಂದಿಗೆ, ಹರ್ಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಸುಮಾರು 97,000 ಹೆಕ್ಟೇರ್ (ಸುಮಾರು 2.4 ಲಕ್ಷ ಎಕರೆ) ಕೃಷಿ ಭೂಮಿಗೆ ಇದರಿಂದ ನೀರಾವರಿ ಸೌಲಭ್ಯ ಸಿಗಲಿದೆ.
ಮುಂದುವರೆದು, ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಹರ್ಯಾಣ ಮತ್ತು ರಾಜಸ್ಥಾನ ರಾಜ್ಯಗಳ ಮುಖ್ಯಮಂತ್ರಿಗಳು ಸಹಿ ಹಾಕಿದ್ದಾರೆ. ಅದರಲ್ಲೂ, ಇದೊಂದು ₹15,624 ಕೋಟಿ ವೆಚ್ಚದ ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆ ಆಗಿರುವುದರಿಂದ, ಇದರ ನೀರಿನ ಘಟಕದ ವೆಚ್ಚದ ಶೇ. 90 ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ.