

ಚೆನ್ನೈ: ನವಜಾತ ಶಿಶುಗಳಿಗೆ 'ಒಂದು ಗ್ರಾಂ ಚಿನ್ನದ ಉಂಗುರ' ಉಡುಗೊರೆ ಯೋಜನೆಗೆ ಇದೇ ತಿಂಗಳ 28 ರಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಚಾಲನೆ ನೀಡಲಿದ್ದಾರೆ ಎಂದು ರಾಜ್ಯ ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಈ ಯೋಜನೆಯ ಮೊದಲ ಹಂತದಲ್ಲಿ ಫಲಾನುಭವಿಗಳಿಗೆ ವಿತರಿಸಲು 1.28 ಲಕ್ಷ ಚಿನ್ನದ ಉಂಗುರಗಳನ್ನು ಸಂಗ್ರಹಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಶಿಶುಗಳಿಗೆ ಈ ಉಂಗುರಗಳನ್ನು ನೀಡಲಾಗುತ್ತದೆ.
ಅಧಿಕೃತ ಪ್ರಕಟಣೆಯ ಪ್ರಕಾರ, ಪ್ರತಿಯೊಂದು ಚಿನ್ನದ ಉಂಗುರವು ವಿಶಿಷ್ಟವಾದ ಕ್ರಮ ಸಂಖ್ಯೆಯನ್ನು (serial number) ಹೊಂದಿರುತ್ತದೆ ಮತ್ತು ಹಾಳುಮಾಡಲು ಸಾಧ್ಯವಾಗದ (tamper-proof) ಪ್ಯಾಕೇಜಿಂಗ್ನಲ್ಲಿ ಬರುತ್ತದೆ. ಈ ಯೋಜನೆಗೆ ಅರ್ಹರಾಗಲು, ಫಲಾನುಭವಿಗಳು ತಮಿಳುನಾಡಿನ ಖಾಯಂ ನಿವಾಸಿಗಳಾಗಿರಬೇಕು ಎಂದು ಸರ್ಕಾರ ತಿಳಿಸಿದೆ.
217.63 ಕೋಟಿ ರೂ.ಗಳ ಹೆಚ್ಚುವರಿ ಅನುದಾನ: ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಯೋಜನೆಗಾಗಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 217.63 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಇದರೊಂದಿಗೆ ಕಾರ್ಯಕ್ರಮದ ಒಟ್ಟು ಬಜೆಟ್ 724 ಕೋಟಿ ರೂ.ಗೆ ಏರಿಕೆಯಾಗಿದೆ. ಸಚಿವಾಲಯದಲ್ಲಿ ವಿಜಯ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕಾರ್ಯಕ್ರಮವನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಮುಖ್ಯಮಂತ್ರಿಯವರು ತಿರುವನ್ಮಿಯೂರ್ನಲ್ಲಿರುವ ಸರ್ಕಾರಿ ಅನುದಾನಿತ ಶಾಲೆಯೊಂದರಲ್ಲಿ ಈ ಕಾರ್ಯಕ್ರಮ ಅಧಿಕೃತವಾಗಿ ಚಾಲನೆ ನೀಡುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 17 ರಂದು ನಿಗದಿಯಾಗಿದ್ದ ಉದ್ಘಾಟನೆ: ವಿಸ್ತೃತ ಯೋಜನೆಯು ಆರಂಭದಲ್ಲಿ ಸೆಪ್ಟೆಂಬರ್ 17 ರಂದು ಪ್ರಾರಂಭವಾಗಬೇಕಿತ್ತು, ಆದರೆ ಲಂಡನ್ಗೆ ವಿಜಯ್ ಅವರ ಅಧಿಕೃತ ಹೂಡಿಕೆ ಪ್ರವಾಸದ ಕಾರಣದಿಂದಾಗಿ ಅದನ್ನು ಮುಂದೂಡಲಾಯಿತು. ಮಧುರಾಂತಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಚೆಂಗಲ್ಪಟ್ಟು ಮತ್ತು ತಿರುಪ್ಪೂರ್ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದಿಲ್ಲ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.