

ದೆಹಲಿ: 16 ವರ್ಷ ಯುವತಿಯೊಬ್ಬಳನ್ನು ಟೆಂಪೋದಲ್ಲಿ ಕರೆದೊಯ್ದು, ಮೂವರು ಅಪ್ರಾಪ್ತರು ಸೇರಿದಂತೆ ನಾಲ್ವರು ಅತ್ಯಾಚಾರ ಎಸಗಿ, ಚಾಕುವಿನಿಂದ ಇರಿದು ಕೊಲೆ ಮಾಡಿ, ಮೃತದೇಹವನ್ನು ತೆರೆದ ಜಮೀನಿನಲ್ಲಿ ಎಸೆದಿರುವ ಭೀಕರ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ಯುವತಿ ಮತ್ತು ಆರೋಪಿಗಳು ಪರಸ್ಪರ ಪರಿಚಯಸ್ಥರಾಗಿದ್ದರು. ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಚಾಕುವಿನಿಂದ ಇರಿದು ಕೊಲೆ ಮಾಡುವ ಮೊದಲು ಆರೋಪಿಗಳು ಟೆಂಪೋದಲ್ಲಿ ಒಟ್ಟಿಗೆ ಮದ್ಯಪಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೆ.13ರಂದು ಕುಶಕ್ ರಸ್ತೆಯಲ್ಲಿರುವ ಜೈಪಾಲ್ ರಾಣಾ ಅವರ ಜಮೀನಿನ ಬಳಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹ ತೀವ್ರವಾಗಿ ಕೊಳೆತಿದ್ದರಿಂದ ಆರಂಭದಲ್ಲಿ ಗುರುತಿಸಲು ಸಾಧ್ಯವಾಗಿರಲಿಲ್ಲ. ದೇಹದ ಕೆಲವು ಭಾಗಗಳನ್ನು ಬೀದಿ ನಾಯಿಗಳು ತಿಂದಿದ್ದವು. ಒಂದು ಕೈ ದೇಹದಿಂದ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪಿಟಿಐ ವರದಿ ಪ್ರಕಾರ, ಯುವತಿ ನಾಪತ್ತೆಯಾಗಿರುವ ಕುರಿತು ಕುಟುಂಬದವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಆಕೆ ಆಗಾಗ್ಗೆ ಮನೆಯಿಂದ ಹೊರಗೆ ಹೋಗಿ ಕೆಲವು ದಿನಗಳ ಬಳಿಕ ವಾಪಸ್ ಬರುತ್ತಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದರು.
ಪರಿಶೀಲನೆ ವೇಳೆ, ಘಟನೆ ನಡೆದ ಸಮಯದ ಆಸುಪಾಸಿನಲ್ಲಿ ಘಟನಾ ಸ್ಥಳದ ಬಳಿ ಟೆಂಪೋವೊಂದು ಸಂಚರಿಸಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ. ಕತ್ತಲಿನಿಂದಾಗಿ ಅದರ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಕಾಣಿಸಿರಲಿಲ್ಲ. ಹೀಗಾಗಿ ವಿವಿಧ CCTV ಕ್ಯಾಮೆರಾಗಳ ದೃಶ್ಯಾವಳಿಗಳ ಮೂಲಕ ಟೆಂಪೋದ ಚಲನವಲನವನ್ನು ಪೊಲೀಸರು ಪತ್ತೆಹಚ್ಚಿದರು.
ಸೆ.15 ಮತ್ತು 16ರ ಮಧ್ಯರಾತ್ರಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ಟೆಂಪೋ ಸ್ವರೂಪ್ ನಗರ ಪ್ರದೇಶದ ಖಡ್ಡಾ ಕಾಲೋನಿಯಲ್ಲಿ ಪತ್ತೆಯಾಯಿತು. ಅದರ ಚಾಲಕನನ್ನು ಗುರುತಿಸಿ ವಿಚಾರಣೆ ನಡೆಸಲಾಯಿತು.
ಬಳಿಕ ನಡೆದ ತನಿಖೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದರು. ಇವರಲ್ಲಿ ಮೂವರು ಅಪ್ರಾಪ್ತರು. ವಯಸ್ಕ ಆರೋಪಿಯನ್ನು ಖಡ್ಡಾ ಕಾಲೋನಿ ನಿವಾಸಿ ಶಿವಂ ಅಲಿಯಾಸ್ ಸುದಾಮ ಅಲಿಯಾಸ್ ಚುಚು ಎಂದು ಗುರುತಿಸಲಾಗಿದೆ. ಉಳಿದ ಮೂವರು ಅಪ್ರಾಪ್ತರು 16 ಮತ್ತು 17 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಟೆಂಪೋ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ, ಮೂವರು ಅಪ್ರಾಪ್ತ ವಯಸ್ಕರು ಮತ್ತು ಶಿವಂ ಅಲಿಯಾಸ್ ಸುದಾಮ ಅವರನ್ನು ಬಂಧಿಸಲಾಯಿತು. ತನಿಖೆಯ ಸಮಯದಲ್ಲಿ, ಪೊಲೀಸರು ಎರಡು ಚಾಕುಗಳು ಮತ್ತು ರಕ್ತದ ಬಟ್ಟೆಗಳನ್ನು ವಶಪಡಿಸಿಕೊಂಡರು. ಅಪರಾಧದ ಸಮಯದಲ್ಲಿ ಆರೋಪಿಗಳು ಧರಿಸಿದ್ದ ಬಟ್ಟೆಗಳು ಇವು ಎಂದು ಪೊಲೀಸರು ಹೇಳಿಕೊಳ್ಳುತ್ತಾರೆ. ಟೆಂಪೋವನ್ನು ಸಹ ವಶಪಡಿಸಿಕೊಳ್ಳಲಾಗಿದೆ