

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ಅವರ ನಿಗೂಢ ಸಾವಿನ ತನಿಖೆಯನ್ನು ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರೀಯ ತನಿಖಾ ದಳ (CBI) ಕೈಗೆತ್ತಿಕೊಂಡ ಬೆನ್ನಲ್ಲೇ, ಪ್ರಕರಣದಲ್ಲಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಮುಖ್ಯ ಆರೋಪಿ ಎಂದು ದಿಶಾ ತಂದೆ ಸತೀಶ್ ಸಾಲಿಯನ್ ಅವರ ಪರ ವಕೀಲ ನಿಲೇಶ್ ಓಜಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಉದ್ಧವ್ ಠಾಕ್ರೆಯೇ ಮುಖ್ಯ ಆರೋಪಿ!
ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ವಕೀಲರು, ಸಚಿನ್ ವಾಜೆಯನ್ನು ಮರುನೇಮಕ ಮಾಡುವಂತೆ ಉದ್ಧವ್ ಮತ್ತು ಆದಿತ್ಯ ಠಾಕ್ರೆ ಒತ್ತಡ ಹೇರಿದ್ದರು ಎಂದು ಪ್ರತಿಪಾದಿಸಿದ ವಕೀಲ ನಿಲೇಶ್ ಓಜಾ ಅವರು, "ತಮ್ಮ ಮಗ ಆದಿತ್ಯ ಠಾಕ್ರೆ ಅವರ ಮೇಲಿನ ತಪ್ಪುಗಳನ್ನು ಮತ್ತು ಸಾಕ್ಷ್ಯಗಳನ್ನು ಮುಚ್ಚಿಹಾಕಲು ಅಂದು ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರು ಹೈಕೋರ್ಟ್ ಆದೇಶಗಳನ್ನು ಮೀರಿ, ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಅತ್ಯಂತ ತುರ್ತಾಗಿ ಮರುನೇಮಕ ಮಾಡಿದ್ದರು" ಎಂದು ಆರೋಪಿಸಿದ್ದಾರೆ.
ಮುಂದವರೆದು, ದಿಶಾ ಸಾಲಿಯನ್ ಕೆಲವು ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದ ಕಾನೂನುಬಾಹಿರ ಚಟುವಟಿಕೆಗಳ ಡಿಜಿಟಲ್ ಪುರಾವೆಗಳನ್ನು ಹೊಂದಿದ್ದರು. ಜೊತೆಗೆ, ಈ ಮಾಹಿತಿಯನ್ನು ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೂ ಹಂಚಿಕೊಂಡಿದ್ದರು. ಅದರಂತೆ, ಸುಶಾಂತ್ ಪತ್ರಿಕಾಗೋಷ್ಠಿ ನಡೆಸಿ ಇದನ್ನು ಬಹಿರಂಗಪಡಿಸಲು ಯೋಜಿಸಿದ್ದರು, ಇದೇ ಅವರ ಸಾವಿಗೂ ಕಾರಣವಾಯಿತು ಎಂದು ನಿಲೇಶ್ ಓಜಾ ಆರೋಪಿಸಿದ್ದಾರೆ.
ಇನ್ನು, ನಿಲೇಶ್ ಓಜಾ ಆರೋಪಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರು, "ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಇದೊಂದು ಕೇವಲ ರಾಜಕೀಯ ಪ್ರೇರಿತ ಷಡ್ಯಂತ್ರ ಮತ್ತು ತಮ್ಮ ತೇಜೋವಧೆ ಮಾಡಲು ನಡೆಸುತ್ತಿರುವ ಯತ್ನ" ಎಂದು ಕಿಡಿಕಾರಿದ್ದಾರೆ. ಜೊತೆಗೆ, ಈ ಪ್ರಕರಣ ಕೋರ್ಟ್ನಲ್ಲಿ ಇರುವುದರಿಂದ ಸುಳ್ಳು ಆರೋಪಗಳನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಸುಳ್ಳು ಮಾಹಿತಿಗಳ ಮೂಲಕ ತೇಜೋವಧೆ ಮಾಡುತ್ತಿರುವುದಕ್ಕೆ ಪ್ರತಿಯಾಗಿ ಆದಿತ್ಯ ಠಾಕ್ರೆ ಅವರು ದಿಶಾ ತಂದೆ ಹಾಗೂ ಇತರರ ವಿರುದ್ಧ ₹500 ಕೋಟಿ ಮೊತ್ತದ ಮಾನಹಾನಿ ನೋಟಿಸ್ ನೀಡಲು ಮುಂದಾಗಿದ್ದಾರೆ.