ಮೇಲ್ಮನೆಯಲ್ಲಿ ಅಂಬೇಡ್ಕರ್ ಫೋಟೊ ಏಕಿಲ್ಲ?

ವಿಧಾನಪರಿಷತ್‍
ವಿಧಾನಪರಿಷತ್‍

ವಿಧಾನಪರಿಷತ್ತು: ವಿಧಾನಪರಿಷತ್‍ನಲ್ಲಿ ಅಂಬೇಡ್ಕರ್ ಫೋಟೊ ಏಕಿಲ್ಲ ಎಂದು ಗುರುವಾರ ಪೂರ್ವಾಹ್ನ ಅರ್ಧಗಂಟೆ ಚರ್ಚೆಯೇ ನಡೆದುಹೋಯಿತು. ಈ ವಿಷಯವನ್ನು ಪುಟ್ಟಸ್ವಾಮಿ ಮೊದಲು ಪ್ರಸ್ತಾಪಿಸಿದರು. ನಂತರ ಡಿ.ಎಸ್.ವೀರಯ್ಯ, ಉಗ್ರಪ್ಪ, ಕೆ.ಎಸ್.ಈಶ್ವರಪ್ಪ, ಸಚಿವ ಶ್ರೀನಿವಾಸ ಪ್ರಸಾದ್ ಮಾತನಾಡಿ ಅಂಬೇಡ್ಕರ್ ಭಾವಚಿತ್ರ ಹಾಕಬೇಕು ಎಂದರು.

ಮೇಲ್ಮನೆಯಲ್ಲಿ ಸುಭಾಶ್ಚಂದ್ರ ಬೋಸ್, ವಿವೇಕಾನಂದ, ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರ ಹಾಕಲಾಗಿದೆ. ಇದನ್ನು ಯಾವಾಗ ಹಾಕಲಾಯಿತು ಎಂದು ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ಪ್ರಶ್ನಿಸಿದರು. ಪರಿಷತ್ ಸಭಾಂಗಣ ನವೀಕರಣಗೊಂಡಾಗ ಈ ಫೋಟೋಗಳನ್ನು ಹಾಕಲಾಗಿದೆ ಎಂಬ ಉತ್ತರ ಆಡಳಿತ ಪಕ್ಷದ ಸದಸ್ಯರಿಂದಲೇ ಬಂತು. ಸದನದಲ್ಲಿ ಅಂಬೇಡ್ಕರ್ ಫೋಟೊವನ್ನು ಶೀಘ್ರವೇ ಹಾಕಬೇಕೆಂದು ಸದಸ್ಯರೆಲ್ಲ ಸೇರಿ ನಿರ್ಣಯ ಕೈಗೊಂಡರು.

ಮಾಣಿಪ್ಪಾಡಿ ವರದಿ ಮಂಡನೆಗೆ ಸೂಚನೆ
ವಿಧಾನಪರಿಷತ್ತು: ಲಕ್ಷಾಂತರ ಕೋಟಿ ವಕ್ಫ್ ಆಸ್ತಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತ ಆಯೋಗದ ಹಿಂದಿನ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಯವರು ಸಿದ್ಧಪಡಿಸಿದ್ದ ವರದಿಯನ್ನು ಸದನದಲ್ಲಿ ಮಂಡಿಸುವ ಅನಿವಾರ್ಯತೆ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿದೆ.

ಈ ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಈ ವರದಿಯಲ್ಲಿ ಅನೇಕ ಸೂಕ್ಷ್ಮ ಸಂಗತಿಗಳಿವೆ ಹಾಗೂ ಗೌಪ್ಯ ಅಂಶಗಳಿವೆ ಎಂಬ ಕಾರಣಕ್ಕೆ ವರದಿ ಮಂಡನೆಗೆ ಸೂಚನೆ ಕೊಡುವುದು ಸೂಕ್ತವಲ್ಲ, ಈ ಬಗ್ಗೆ ನಿರ್ಧಾರ ಮರುಪರಿಶೀಲಿಸಿ ಎಂದು ಸಭಾಪತಿಯವರನ್ನು ಸರ್ಕಾರ ಕೋರಿತ್ತು. ಸರ್ಕಾರದ ಮನವಿಯನ್ನು ಪರಿಶೀಲಿಸಿದ ಸ್ಪೀಕರ್, ಆ ವರದಿ ಮಂಡನೆಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಗುರುವಾರ ಸದನದ ಕೊನೆ ಅವಧಿಯಲ್ಲಿ ವರದಿಯನ್ನು ಸದನದ ಮುಂದೆ ಮಂಡಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದರು. ಅನ್ವರ್ ಮಾಣಿಪ್ಪಾಡಿಯವರ ಸಮಿತಿಯು ರಾಜ್ಯಾದ್ಯಂತ ಸಂಚರಿಸಿ ವಕ್ಫ್ ಆಸ್ತಿ ಎಲ್ಲೆಲ್ಲಿದೆ, ಎಷ್ಟು ಪ್ರಮಾಣದಲ್ಲಿ ಒತ್ತುವರಿಯಾಗಿದೆ, ಯಾರೆಲ್ಲಾ ಒತ್ತುವರಿ ಮಾಡಿದ್ದಾರೆ, ಅದರ ಮೌಲ್ಯವೆಷ್ಟು ಎಂಬುದನ್ನು
ಸಮಗ್ರವಾಗಿ ಕ್ರೋಡೀಕರಿಸಿ ಸರ್ಕಾರಕ್ಕೆ ವರದಿ ನೀಡಿದ್ದರು. ಅಂದಾಜು 2 ಲಕ್ಷ ಕೋಟಿ ರುಪಾಯಿ ಮೌಲ್ಯದ ವಕ್ಫ್ ಆಸ್ತಿ ಒತ್ತುವರಿಯಾಗಿದೆ ಎಂಬುದು ವರದಿಯ ಸಾರಾಂಶವಾಗಿತ್ತು. ಜೊತೆಗೆ ರಾಜಕೀಯ ನಾಯಕರ ಹೆಸರೂ ಸಹ ವರದಿಯಲ್ಲಿ ಅಡಕಗೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com