ಮೀನು ಡ್ರಿಲ್ ಮಾಡಲ್ಲ!: ಸಚಿವರಿಗೆ ಗೋಮ ವ್ಯಂಗ್ಯ

ಮೀನು ಡ್ರಿಲ್ ಮಾಡಲ್ಲ. ದೈಹಿಕ ಶಿಕ್ಷಕರು ಮೀನುಗಾರಿಕೆ ಇಲಾಖೆಯಡಿಯೇನು ಬರೋದಿಲ್ವಲ್ಲ...
ಗೋ. ಮಧುಸೂಧನ್(ಸಂಗ್ರಹ ಚಿತ್ರ)
ಗೋ. ಮಧುಸೂಧನ್(ಸಂಗ್ರಹ ಚಿತ್ರ)

ವಿಧಾನ ಪರಿಷತ್: 'ಮೀನು ಡ್ರಿಲ್ ಮಾಡಲ್ಲ. ದೈಹಿಕ ಶಿಕ್ಷಕರು ಮೀನುಗಾರಿಕೆ ಇಲಾಖೆಯಡಿಯೇನು ಬರೋದಿಲ್ವಲ್ಲ...' ಹೀಗೆಂದು ಬಿಜೆಪಿ ಸದಸ್ಯ ಗೋ. ಮಧುಸೂಧನ್ ಅವರು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್‍ರನ್ನು ಛೇಡಿಸಿದ ಪ್ರಸಂಗ ನಡೆಯಿತು.

ಪ್ರಶ್ನೋತ್ತರ ವೇಳೆಯಲ್ಲಿ ಗೋ. ಮಧುಸೂಧನ್ ಅವರು ದೈಹಿಕ ಶಿಕ್ಷಕರನ್ನು ಪ್ರೌಢಶಾಲೆಗಳಲ್ಲಿ ವಿಜ್ಞಾನ, ಕಲಾ ಮತ್ತು ಭಾಷಾ ವಿಷಯಗಳನ್ನು ಬೋಧಿಸುವ ಸಹ ಶಿಕ್ಷಕರೊಂದಿಗೆ ಸೇರಿ ಸಮಾನ ಮಾನ್ಯತೆ ಕಲ್ಪಿಸುವ ಸಂಬಂಧ ಪ್ರಶ್ನೆ ಕೇಳಿದ್ದರು.

ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಈ ರೀತಿ ಸರಿಯಾದ ಮಾನ್ಯತೆ ನೀಡಲು ನಾನಾ ರೀತಿ ಸಮಸ್ಯೆಗಳಿವೆ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ, ಆದರೆ ಇನ್ನೂ ಚರ್ಚಾ ಹಂತದಲ್ಲೇ ಇದೆ. ಪ್ರೋ. ವೈದ್ಯನಾಥನ್ ವರದಿಯನ್ನು ಆಧರಿಸಿ ದೈಹಿಕ ಶಿಕ್ಷಣ ಶಿಕ್ಷಕರನ್ನು ಸಹ ಶಿಕ್ಷಕರೆಂದು ಪರಿಗಣಿಸುವ ಬಗ್ಗೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಬಗ್ಗೆ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ತೃಪ್ತರಾಗದ ಗೋ. ಮಧುಸೂಧನ್, ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಚರ್ಚೆ ನಡೆದಿದೆ. ಆದರೂ ಇನ್ನೂ ಏಕೆ ತಡ ಮಾಡಲಾಗುತ್ತಿದೆ. ಎಷ್ಟು ಸಮಯ ಬೇಕೆಂಬುದನ್ನು ಸ್ಪಷ್ಟಪಡಿಸಿ ಎಂದು ಪಟ್ಟು ಹಿಡಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮೀನುಗಾರಿಕೆ ಸಚಿವ ಅಭಯ್ ಚಂದ್ರ ಜೈನ್, ಪರಿಶೀಲನೆಯಲ್ಲಿದೆ ಎಂದ ಮೇಲೆ ಏಕೆ ಒತ್ತಡ ಹೇರುತ್ತೀರಿ ಎಂದು ಗೋ ಮಧುಸೂಧನ್ ಅವರನ್ನು ಟೀಕಿಸಿದರು. ಈ ಸಂದರ್ಭದಲ್ಲಿ ಕೆರಳಿದ ಮಧುಸೂದನ್, ಮೀನು ಡ್ರಿಲ್ ಮಾಡಲ್ಲ, ದೈಹಿಕ ಶಿಕ್ಷಕರು ಮೀನುಗಾರಿಕೆ ಇಲಾಖೆಯಡಿಯೇನು ಬರುವುದಿಲ್ಲ ಎಂದು ಅಭಯಚಂದ್ರ ಜೈನ್ ರ ಕಾಲೆಳೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com