ಮಾನವಿ: ಧಾರವಾಡಕ್ಕೆ ಐಐಟಿ ಮಂಜೂರಾಗಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡಿದ್ದರೆ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಯಚೂರಿಗೇ ಬೇಕು ಎಂದು ಪಟ್ಟುಹಿಡಿದಿದ್ದಾರೆ.
ಬಿಜೆಪಿ ಶುಕ್ರವಾರ ಏರ್ಪಡಿಸಿದ್ದ ರೈತ ಚೈತನ್ಯ ಯಾತ್ರೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ``ಐಐಟಿ ಸ್ಥಾಪನೆ ವಿಷಯದಲ್ಲಿ ತಮ್ಮ ನಿಲುವು ಸ್ಪಷ್ಟ ಹಾಗೂ ಅಚಲ. ಡಿ.ಎಂ. ನಂಜುಂಡಪ್ಪ ವರದಿಯನ್ವಯ ಹಿಂದುಳಿದ ರಾಯಚೂರು ಜಿಲ್ಲೆಯಲ್ಲೇ ಸ್ಥಾಪನೆಯಾಗಬೇಕು. ರಾಯಚೂರಿನಲ್ಲಿಲ್ಲೇ ಐಐಟಿ ಸ್ಥಾಪಿಸಬೇಕು ಎನ್ನುವುದು ಬಿಜೆಪಿ ಸರ್ಕಾರದಲ್ಲಿ ನಿರ್ಣಯ ಕೈ ಗೊಳ್ಳಲಾಗಿತ್ತು'' ಎಂದು ಹೇಳಿದ್ದಾರೆ.
ಎರಡು ಜಿಲ್ಲೆಗಳ ನಡುವೆ ಐಐಟಿಗಾಗಿ ಬೆಂಕಿ ಹಚ್ಚಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರು 3 ಹೆಸರನ್ನು ಸೂಚಿಸಿ ಗೊಂದಲ ಸೃಷ್ಟಿಸಿದ್ದಾರೆ. ಯಾರು ದ್ರೋಹಿಗಳು ಎಂಬುದನ್ನು ಅರಿಯಲು ತಾಕತ್ತಿದ್ದರೆ ವಿಧಾನಮಂಡಲ ಅಧಿವೇಶನ ಕರೆಯಲಿ. ಪ್ರಧಾನಿ, ಮಾನವ ಸಂಪನ್ಮೂಲ ಸಚಿವೆಯನ್ನು ಮನವೊ ಲಿಸುವ ಜವಾಬ್ದಾರಿ ನಮ್ಮದು. ಇದಕ್ಕೂ ಮೊದಲು ರಾಜ್ಯ ಸರ್ಕಾರ ರಾಯಚೂರಲ್ಲೇ ಐಐಟಿ ಸ್ಥಾಪಿಸುವ ಕುರಿತು ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡು ಬದ್ಧತೆ ತೋರಲಿ. ರಾಯಚೂರಿನವರಿಗೆ ಒಂದು, ಧಾರವಾಡದವರಿಗೆ ಇನ್ನೊಂದು ರೀತಿ ಹೇಳಿ ಜಗಳ ಹಚ್ಚಿ ಬೇಳೆ ಬೇಯಿಸಿ ಕೊಳ್ಳುವುದನ್ನು ಬಿಡಬೇಕು ಎಂದರು.
Advertisement