ಬಿಎಸ್ ವೈ ವಿರುದ್ಧ ದೂರು: ದೆಹಲಿಗೆ ಈಶ್ವರಪ್ಪ ನಿಯೋಗ

ಬಿಜೆಪಿಯ ರಾಜ್ಯ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದ ನಿಯೋಗ
ಕೆ.ಎಸ್ ಈಶ್ವರಪ್ಪ ಮತ್ತು ಬಿ.ಎಸ್ ಯಡ್ಯೂರಪ್ಪ
ಕೆ.ಎಸ್ ಈಶ್ವರಪ್ಪ ಮತ್ತು ಬಿ.ಎಸ್ ಯಡ್ಯೂರಪ್ಪ

ತುಮಕೂರು: ಬಿಜೆಪಿಯ ರಾಜ್ಯ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ತೀವ್ರ ಅಸಮಾಧಾನಗೊಂಡಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ನೇತೃತ್ವದ ನಿಯೋಗ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಿ ವಾಪಸಾಗಿದ್ದು, ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಏಕಪಕ್ಷೀಯ ಧೋರಣೆಗೆ ಕಡಿವಾಣ ಹಾಕುವ ಭರವಸೆ ಲಭಿಸಿದೆ.

ದೆಹಲಿಗೆ ತೆರಳಿದ್ದ ಈಶ್ವರಪ್ಪ ಅವರೊಂದಿಗೆ ಪಕ್ಷದ ಉಪಾಧ್ಯಕ್ಷರಾದ ಎಂ.ಬಿ.ಭಾನುಪ್ರಕಾಶ್‌, ನಿರ್ಮಲಕುಮಾರ್‌ ಸುರಾನಾ ಹಾಗೂ ವಿಧಾನಪರಿಷತ್ತಿನ ಮಾಜಿ ಸದಸ್ಯ ಶಿವಯೋಗಿಸ್ವಾಮಿ ಅವರು ಭಾನುವಾರ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ರಾಮ್‌ಲಾಲ್‌ ಅವರನ್ನು ಭೇಟಿ ಮಾಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು.

ಈಶ್ವರಪ್ಪ ನೇತೃತ್ವದ ನಿಯೋಗದ ಅಹವಾಲನ್ನು ತಾಳ್ಮೆಯಿಂದ ಆಲಿಸಿರುವ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿರುವ ಸಂಘ ಪರಿವಾರದ ಮೂಲದ ರಾಮ್‌ಲಾಲ್‌ ಅವರು ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೊಂದಿಗೂ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ. ಜತೆಗೆ ಮುಂದಿನ ದಿನಗಳಲ್ಲಿ ಇಂಥ ಏಕಪಕ್ಷೀಯ ನಿರ್ಧಾರಗಳಿಗೆ ಅವಕಾಶ ನೀಡುವುದಿಲ್ಲ. ಎಲ್ಲವನ್ನೂ ಪಕ್ಷದ ರಾಜ್ಯ ಘಟಕದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿಯಲ್ಲಿ ಚರ್ಚಿಸಿದ ನಂತರವೇ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು ಎಂಬ ಭರವಸೆಯ ಮಾತನ್ನು ರಾಮ್‌ಲಾಲ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಅತೃಪ್ತ ಮುಖಂಡರ ಬೇಡಿಕೆಯಾಗಿರುವ ಎಲ್ಲ ಹಂತದ ಪದಾಧಿಕಾರಿಗಳ ಪಟ್ಟಿಯನ್ನು ರದ್ದುಪಡಿಸಿ ಕೋರ್‌ ಕಮಿಟಿಯಲ್ಲಿ ಚರ್ಚಿಸಿದ ಬಳಿಕ ಹೊಸದಾಗಿ ರಚಿಸಬೇಕು ಎಂಬುದರ ಬಗ್ಗೆ ರಾಮ್‌ಲಾಲ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಎಲ್ಲವೂ ನಮಗೆ ಗೊತ್ತಿದೆ. ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ. ನಿರಾಶೆಯಾಗುವುದು ಬೇಡ. ಅತೃಪ್ತಗೊಂಡಿರುವ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರಿಗೆ ನೀವು ತಿಳಿಸಿ ಹೇಳಿ. ಬೇಸರವಾಗುವುದು ಬೇಡ. ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ನಿಷ್ಠಾವಂತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆಗಿರುವ ಲೋಪದೋಷಗಳನ್ನು ಸರಿಪಡಿಸಲಾಗುವುದು ಎಂಬ ಭರವಸೆಯ ಸಂದೇಶವನ್ನು ರಾಮ್‌ಲಾಲ್‌ ಅವರು ಈಶ್ವರಪ್ಪ ನೇತೃತ್ವದ ನಿಯೋಗಕ್ಕೆ ನೀಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com