ವಿಧಾನ ಪರಿಷತ್ ಚುನಾವಣೆ ಮೇಲೆ ಅಡ್ಡ ಮತದಾನದ ಕರಿನೆರಳು

ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಇಂದು ನಡೆಯುವ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ವಾಗುವ ಸಾಧ್ಯತೆಗಳಿವೆ.

ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿ ಕೊಠಡಿಯಲ್ಲಿ (ಕೊಠಡಿ ಸಂಖ್ಯೆ 106) ಬೆಳಗ್ಗೆ 9ರಿಂದ ಸಂಜೆ ನಾಲ್ಕು ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 5ರಿಂದ ಮತ ಎಣಿಕೆ ಆರಂಭವಾಗಲಿದ್ದು, ರಾತ್ರಿಯೊಳಗೆ ಫ‌ಲಿತಾಂಶ ಹೊರಬೀಳಲಿದೆ.

ಒಟ್ಟು ಏಳು ಸ್ಥಾನಗಳಿಗೆ ಕಾಂಗ್ರೆಸ್‌ನ ನಾಲ್ಕು ಹಾಗೂ ಬಿಜೆಪಿ, ಜೆಡಿಎಸ್‌ನ ತಲಾ ಇಬ್ಬರು ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್‌ನ ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ್‌, ವೀಣಾ ಅಚ್ಚಯ್ಯ, ರಿಜ್ವಾನ್‌ ಅರ್ಷದ್‌, ಬಿಜೆಪಿಯ ವಿ.ಸೋಮಣ್ಣ, ಲೆಹರ್‌ಸಿಂಗ್‌, ಜೆಡಿಎಸ್‌ನ ಕೆ.ವಿ.ನಾರಾಯಣಸ್ವಾಮಿ, ಎಸ್‌.ಎಂ.ವೆಂಕಟಪತಿ ಕಣದಲ್ಲಿದ್ದಾರೆ.

ವಿಧಾನಪರಿಷತ್‌ ಚುನಾವಣೆಯ ಮತದಾನಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪರಿಷತ್‌ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವ ಇಬ್ಬರ ಪೈಕಿ ಯಾವ ಶಾಸಕರು ಯಾರಿಗೆ ಮತ ಚಲಾಯಿಸಬೇಕು ಎಂದು ನಿರ್ದೇಶನ ನೀಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಮೊದಲ ಅಭ್ಯರ್ಥಿ ವಿ.ಸೋಮಣ್ಣ ಆಗಿರುವುದರಿಂದ 30 ಮತಗಳನ್ನು ಅವರಿಗೇ ನಿಗದಿ ಮಾಡಲಾಗುತ್ತದೆ. ಇನ್ನುಳಿದ 14 ಮತಗಳನ್ನು ಎರಡನೇ ಅಭ್ಯರ್ಥಿ ಲೆಹರ್‌ಸಿಂಗ್‌ ಅವರಿಗೆ ನೀಡುವಂತೆ ಹಂಚಿಕೆ ಮಾಡಲಾಗುತ್ತದೆ.

ಸೋಮಣ್ಣ ಅವರಿಗೆ ಮತ ಚಲಾಯಿಸಿದ ಶಾಸಕರು ತಮ್ಮ ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಹರ್‌ ಗೆ ನೀಡಲಿದ್ದಾರೆ ಎನ್ನಲಾಗಿದೆ. 14 ಲೆಹರ್‌ಸಿಂಗ್‌ ಗೆಲುವು ಸಾಧ್ಯವಿಲ್ಲ. ಹೀಗಾಗಿ, ಬಿಎಸ್ಸಾರ್‌ ಕಾಂಗ್ರೆಸ್‌, ಕೆಜೆಪಿ ಸೇರಿದಂತೆ ಪಕ್ಷೇತರ ಶಾಸಕರು ಲೆಹರ್‌ಸಿಂಗ್‌ ಅವರಿಗೆ ಮತ ಚಲಾಯಿಸುವ ಸಾಧ್ಯತೆ ನಿಚ್ಚಳವಾಗಿದೆ.

ಬಂಡಾಯದ ಭೀತಿಯ ಮಧ್ಯೆಯೇ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಮತಗಳ ಹಂಚಿಕೆ ಮಾಡಿರುವ ಜೆಡಿಎಸ್‌, ಪಕ್ಷದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಮತ ನೀಡುವಂತೆ ತನ್ನ ಶಾಸಕರಿಗೆ ವಿಪ್‌ ಜಾರಿ ಮಾಡಿದೆ. ರಾಜ್ಯಸಭಾ ಚುನಾವಣೆಗೆ ಎಲ್ಲ 40 ಶಾಸಕರೂ ಪಕ್ಷದ ಅಭ್ಯರ್ಥಿ ಬಿ.ಎಂ.ಫಾರೂಕ್‌ ಅವರಿಗೆ ಮತ ಚಲಾಯಿಸುವಂತೆ ವಿಪ್‌ ನೀಡಲಾಗಿದ್ದು, ವಿಧಾನಪರಿಷತ್‌ ಚುನಾವಣೆಯಲ್ಲಿ ಮೊದಲ ಅಭ್ಯರ್ಥಿ ನಾರಾಯಣಸ್ವಾಮಿಗೆ 30 ಮತಗಳ ಹಂಚಿಕೆ ಮಾಡಲಾಗಿದೆ.

ಸ್ವಲ್ಪ ಅನುಮಾನ ಇರುವ ಐವರು ಹಾಗೂ ಬಂಡಾಯ ಸಾರಿರುವ ಐವರು ಶಾಸಕರಿಗೆ ಎರಡನೇ ಅಭ್ಯರ್ಥಿಯಾದ ಡಾ.ವೆಂಕಟಪತಿಗೆ ಹಂಚಿಕೆ ಮಾಡಲಾಗಿದೆ. ವಿಧಾನಪರಿಷತ್‌ನಲ್ಲಿ ಮೊದಲ ಅಭ್ಯರ್ಥಿ ನಾರಾಯಣಸ್ವಾಮಿಗೆ ಮತ ಚಲಾಯಿಸುವ 30 ಶಾಸಕರು ಎರಡನೇ ಅಭ್ಯರ್ಥಿ ವೆಂಕಟಪತಿಗೆ ಎರಡನೇ ಪ್ರಾಶಸ್ತ್ಯ ಮತ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಗುರುವಾರದ ಶಾಸಕಾಂಗ ಸಭೆಗೆ ಭಿನ್ನಮತೀಯರ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಮಾಗಡಿಯ ಎಚ್‌.ಸಿ.ಬಾಲಕೃಷ್ಣ ಹಾಜರಾಗಿ ಅಚ್ಚರಿ ಮೂಡಿಸಿದರು. ಆದರೆ, ಇನ್ನುಳಿದ 4 ಭಿನ್ನಮತೀಯ ಶಾಸಕರಾದ ಜಮೀರ್‌ ಅಹಮದ್‌, ಎನ್‌.ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್‌ ಅನ್ಸಾರಿ ಗೈರಾಗಿದ್ದರು.

ಪ್ರಸ್ತುತ ವಿಧಾನ ಪರಿಷತ್‌ ಅಭ್ಯರ್ಥಿ ಗೆಲ್ಲಲು 29 ಮತ ಬೇಕು ಎಂಬ ಲೆಕ್ಕಾಚಾರವಿದೆ. ಆದರೆ, ಮತಗಳ ಪ್ರಮಾಣ ಖಚಿತವಾಗಿ ತಿಳಿಯುವುದು ಮತದಾನ ಮುಗಿದು ಮತಪತ್ರ ಪರಿಶೀಲನೆ ನಡೆದ ಬಳಿಕವಷ್ಟೆ. ಮತದಾನ ಪೂರ್ಣಗೊಂಡ ನಂತರ ಚಲಾವಣೆಯಾದ ಮತಪತ್ರದ ಪರಿಶೀಲನೆ ನಡೆಯುತ್ತದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com