ರಾಜಕೀಯ
ಬಿಜೆಪಿ ಕೈತಪ್ಪಿದ ಶಿವಮೊಗ್ಗ ಜಿ.ಪಂ: ತವರು ಜಿಲ್ಲೆಯಲ್ಲೇ ಬಿಎಸ್ ವೈ ಮುಖಭಂಗ
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವರ ತವರು ಜಿಲ್ಲೆಯಲ್ಲೇ ಹಿನ್ನೆಡೆಯಾಗಿದೆ....
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅವರ ತವರು ಜಿಲ್ಲೆಯಲ್ಲೇ ಹಿನ್ನೆಡೆಯಾಗಿದೆ. ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ವಿಫಲವಾಗಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಮೈತ್ರಿಕೂಟಕ್ಕೆ ಅಧಿಕಾರ ದಕ್ಕಿದೆ.
ನಿರ್ಣಾಯಕ ಸ್ಥಾನದಲ್ಲಿದ್ದ ಓರ್ವ ಪಕ್ಷೇತರ ಸದಸ್ಯನ ಮನವೊಲಿಸುವಲ್ಲಿ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಅವರು ಯಶಸ್ವಿಯಾಗಿದ್ದು, ಶಿವಮೊಗ್ಗ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಜೆಡಿಎಸ್ ನ ಜ್ಯೋತಿ ಹಾಗೂ ಉಪಾಧ್ಯಕ್ಷರಾಗಿ ಪಕ್ಷೇತರ ಸದಸ್ಯೆ ವೇದಾ ಅವರು ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಒಟ್ಟು 31 ಸದಸ್ಯರನ್ನು ಹೊಂದಿದ್ದು, ಬಿಜೆಪಿ 15, ಕಾಂಗ್ರೆಸ್ 8, ಜೆಡಿಎಸ್ 7 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದು, ಬಿಜೆಪಿ ಕೇವಲ ಒಂದು ಮತದ ಅಂತರದಿಂದ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ. ಇನ್ನೂ ಎರಡನೇ ಅತಿ ದೊಡ್ಡ ಪಕ್ಷವಾದ ಕಾಂಗ್ರೆಸ್ ಸಹ ಅಧ್ಯಕ್ಷ ಪದವಿ ದಕ್ಕಿಸಿಕೊಳ್ಳುವಲ್ಲಿ ವಿಫಲವಾಗಿದೆ.
ಮೈತ್ರಿಕೂಟದ ಅಭ್ಯರ್ಥಿಗಳ ಪರ ತಲಾ 16 ಮತ ಚಲಾವಣೆಯಾಗಿದ್ದು, 15 ಮತ ಪಡೆದ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.