ನನ್ನನ್ನು ಹಿಂಬಾಲಿಸಲಾಗುತ್ತಿದೆ ಮತ್ತು ಫೋನ್ ಕದ್ದಾಲಿಸಲಾಗುತ್ತಿದೆ: ಡಿಕೆ ಶಿವಕುಮಾರ್

ನಿನ್ನೆಯಷ್ಟೇ ಕುಟುಂಬ ಸಮೇತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಇಂಧನ ಸಚಿವ ಡಿ ಕೆ ಶಿವಕುಮಾರ್....
ಶಿವಕುಮಾರ್
ಶಿವಕುಮಾರ್
ಬೆಂಗಳೂರು: ನಿನ್ನೆಯಷ್ಟೇ ಕುಟುಂಬ ಸಮೇತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರು, ಇಂದು ಕೇಂದ್ರ ಸರ್ಕಾರದ ಅಧಿಕಾರಿಗಳು ನನ್ನನ್ನು ಹಿಂಬಾಲಿಸುತ್ತಿದ್ದಾರೆ ಮತ್ತು ನನ್ನ ಫೋನ್ ಕದ್ದಾಲಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಅಧಿಕಾರಿಗಳು ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ ಮಾರನೇ ದಿನವೇ ಡಿಕೆ ಶಿವಕುಮಾರ್ ಅವರು ಸಹ ತಮ್ಮ ದೂರವಾಣಿಯನ್ನು ಕದ್ದಾಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವರು, ನನ್ನ ಫೋನ್ ಸಹ ಕದ್ದಾಲಿಸುತ್ತಿದ್ದಾರೆ ಮತ್ತು ನಾನು ಎಲ್ಲೇ ಹೋದರು ನನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದಿದ್ದಾರೆ.
ಇದೇ ವೇಳೆ ನಿನ್ನೆ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ ಎಂದು ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ಎಚ್ಚರಿಕೆಯಿಂದ ವರದಿ ಮಾಡಿ... ನಾನು ಕನಕಪುರದ ಕಲ್ಲು. ಕಲ್ಲಿಗೆ ಡಿಚ್ಚಿ ಹೊಡೆದರೆ ನಿಮ್ಮ ತಲೆಯೇ ಹೊಡೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಳೆದ ಆಗಸ್ಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ನಿರಂತರ ಮೂರು ದಿನ ತೀವ್ರ ತಪಾಸಣೆ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com