ಬೆಳಗಾವಿ: ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಮಾಡುವುದು ತಪ್ಪಲ್ಲ ಎನ್ನುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನಕ್ಕೆ ಹೋದರೂ ತಪ್ಪಿಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಅವರು ಮಂಗಳವಾರ ಕಿಡಿಕಾರಿದ್ದಾರೆ.
ಇಂದು ನಗರದಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಭಜರಂಗದಳ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಜಯ್ ಪಾಟೀಲ್ ಅವರು, ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
'ಸಿದ್ದರಾಮಯ್ಯ ನೀವು ಮೈಸೂರಿನಲ್ಲಿ ಹುಟ್ಟಿದ್ದೀರಾ?...ಅಥವಾ ಪಾಕಿಸ್ತಾನದ ಲಾಹೋರದಲ್ಲಿ ಹುಟ್ಟಿದ್ದೀರಾ?' ಎಂದು ಪ್ರಶ್ನಿಸಿದ ಸಂಜಯ್ ಪಾಟೀಲ್, ಹಿಂದೂಗಳ ಭಾವನೆಗೆ ಧಕ್ಕೆ ತಂದು ಟಿಪ್ಪು ಜಯಂತಿ ಆಚರಿಸಿದರೆ, ಸಿಎಂ ಸಿದ್ದರಾಮಯ್ಯ ಯಾರವ? ಎಂದು ಕೇಳಬೇಕಾಗುತ್ತದೆ' ಎಂದರು.
ಸಿದ್ದರಾಮಯ್ಯನವರೇ ನಿಮ್ಮ ಕುರ್ಚಿ ಕಸಿದುಕೊಳ್ಳವ ಶಕ್ತಿ ಹಿಂದೂಗಳಿದೆ ಎಂದ ಅವರು, 'ಟಿಪ್ಪು ಜಯಂತಿಯ ದಿನ ಎಲ್ಲರ ಮನೆ ಮುಂದೆ ಶಿವಾಜಿ ಮಹಾರಾಜರ ಫೋಟೋ ಇಟ್ಟು ಪೂಜೆ ಮಾಡೋಣ' ಎಂದು ಸಂಜಯ್ ಪಾಟೀಲ್ ಕರೆ ನೀಡಿದರು.