ಮಂಗಳೂರು: ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಮಂತ್ರಿ ಜವಹರ್ ಲಾಲ್ ನೆಹರೂ ಅವರನ್ನು ಟೀಕಿಸುವವರು ದ್ರೋಹಿಗಳು ಎಂದು ಕಾಂಗ್ರೆಸ್ ನಾಯಕ ಬಿ. ರಮಾನಾಥ್ ರೈ ಕಿಡಿಕಾರಿದ್ದಾರೆ.
ಕೆಲ ಕಿಡಿಗೇಡಿಗಳಿಂದ ಈ ನಾಯಕರ ನಿಲುವುಗಳನ್ನು ಟೀಕಿಸುವ ಕೃತ್ಯ ನಡೆಯುತ್ತಿದೆ. ಅಂತಹವರು ದೇಶ ವಿರೋಧಿಗಳು ಅಥವಾ ದ್ರೋಹಿಗಳು ಎಂದು ಕರೆದರು.
ಕ್ವಿಟ್ ಇಂಡಿಯಾ ಆಂದೋಲನಕ್ಕೆ 76 ವರ್ಷ ತುಂಬಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಟೌನ್ ಹಾಲ್ ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಇಬ್ಬರು ನಾಯಕರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ಹೇಳಿದರು.
ನೆಹರೂ, ಮಹಾತ್ಮಗಾಂಧಿ ವಿಚಾರದಲ್ಲಿ ತಪ್ಪಾಗಿ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ ಎನ್ನುವಂತೆ ಟೀಕಿಸಲಾಗುತ್ತಿದೆ. ಆದರೆ, ಈ ಇಬ್ಬರು ನಾಯಕರು ಮಾಡಿದ ತ್ಯಾಗ ಫಲವಾಗಿ ಇಂದು ನಾವು ಶಾಂತಿಯಿಂದ ಬದುಕುವಂತಾಗಿದೆ ಎಂದರು.
ಈ ಮಧ್ಯೆ ವೇದಿಕೆಯಲ್ಲಿಯೇ ಕಾಂಗ್ರೆಸ್ ಪಕ್ಷದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಲೊರೆನ್ಸ್ ಹಾಗೂ ಐಎನ್ ಟಿಯುಸಿಯ ಪುನೀತ್ ಶೆಟ್ಟಿ ಬೆಂಬಲಿಗರು ಪರಸ್ಪರ ಕಿತ್ತಾಡಿಕೊಂಡರು.
Advertisement