ಬೆಂಗಳೂರು: ಇಂಧನ ಖಾತೆ ಸೇರಿದಂತೆ ಪ್ರಮುಖ ಖಾತೆಗಳನ್ನು ಪಡೆದುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾದ ಒಂದು ದಿನದ ನಂತರ ಕಾಂಗ್ರೆಸ್ ಹಿರಿಯ ನಾಯಕ ಡಿ. ಕೆ. ಶಿವಕುಮಾರ್ ಕೂಡಾ ಆ ಖಾತೆಗಾಗಿ ಪಟ್ಟು ಹಿಡಿದಿದ್ದಾರೆ.
ಜೆಡಿಎಸ್ ಪಕ್ಷದ ಹೆಚ್. ಡಿ. ರೇವಣ್ಣ ಈ ಹಿಂದೆ ಇಂಧನ ಖಾತೆಯನ್ನ ನಿರ್ವಹಿಸಿದ್ದರು. ಅದಕ್ಕಾಗಿ ಆ ಖಾತೆ ಪಡೆಯಲು ಒತ್ತಾಯಿಸಿದ್ದರು. ಆದರೆ, ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಕೂಡಾ ಆ ಖಾತೆಗಾಗಿ ಪಟ್ಟು ಹಿಡಿದಿರುವುದು ನಿಜ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಆದಾಗ್ಯೂ, ಖಾತೆ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಹೆಚ್ . ಡಿ. ದೇವೇಗೌಡರು ಮಧ್ಯ ಪ್ರವೇಶಿಸುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಪಪಡಿಸಿದರು.
ಹಣಕಾಸು ಖಾತೆಯನ್ನೂ ತಾವೇ ಪಡೆದುಕೊಂಡಿರುವುದರಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ಖಾತೆ ಹಂಚಿಕೆ ಸೇರಿದಂತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ನಾಯಕರ ಪಟ್ಟಿಯನ್ನು ಜೆಡಿಎಸ್ ಒಪ್ಪಿಕೊಳ್ಳಲಿದೆ ಎಂದು ಹೇಳಿದರು.
ಹಣಕಾಸು , ಇಂಧನ ಖಾತೆ ಹಂಚಿಕೆ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಸಂಪುಟ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬಂತಹ ಮಾಹಿತಿಗಳು ತಿಳಿದುಬಂದಿವೆ. ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶದ ನಂತರ ಈ ಎರಡು ಪ್ರಮುಖ ಖಾತೆಗಳನ್ನು ಜೆಡಿಎಸ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇಂಧನ ಖಾತೆ ನಿರ್ವಹಿಸಿದ್ದ ಡಿ. ಕೆ. ಶಿವಕುಮಾರ್ , ಪಕ್ಷದ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಗೃಹ ಖಾತೆಗೆ ಪ್ರಯತ್ನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
Advertisement